ದಸರೆಗೆ ವೈಭವದ ಚಾಲನೆ: ಕೊಡಗು ಸಂತ್ರಸ್ತರಿಗೆ 25 ಕೋಟಿ ರೂ. ಘೋಷಿಸಿದ ಸುಧಾ ಮೂರ್ತಿ
ಮೈಸೂರು, ಅಕ್ಟೋಬರ್ 10 : ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಇಂದು ಬುಧವಾರ (ಅ.10) ಮುಂಜಾನೆ ಚಾಮುಂಡಿ ಬೆಟ್ಟದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿಯವರಿಂದ ವೈಭವದ ಚಾಲನೆ ದೊರೆಯಿತು.
ಸುಧಾ ಮೂರ್ತಿಯವರು ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕೂಡ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.
ಬಳಿಕ ಕನ್ನಡ ಜನತೆಗೆ ನನ್ನ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಸುಧಾ ಮೂರ್ತಿಯವರು ಸಂಸ್ಕೃತಿಯ ಪ್ರತಿಬಿಂಬವಾದ ದಸರಾ ಮಹೋತ್ಸವ ಉದ್ಘಾಟನೆಗೆ ನನ್ನ ಆಯ್ಕೆ ಮಾಡಿದ್ದು ಪೂರ್ವ ಜನ್ಮದ ಸುಕೃತ. ದಸರಾ ಶತಮಾನಗಳಿಂದ ಆಚರಿಸುತ್ತಿರುವ ಹಬ್ಬ.
ಅಜ್ಜಿಯ ಕಾಲದಲ್ಲಿ ಇದಕ್ಕೆ ಮಹಾನವಮಿ ಹಬ್ಬ ಎಂದು ಕರೆಯುತ್ತಿದ್ದರು. ಮೈಸೂರಿನ ದೊರೆಗಳಿಗೆ ನಾವು ಕೃತಜ್ಞರಾಗಿರಬೇಕು. ನಾಡಿನ ಅಭಿವೃದ್ಧಿಗೆ ಮೈಸೂರು ದೊರೆಗಳ ಕೊಡುಗೆ ಅಪಾರ. ಮೈಸೂರಿನ ಅರಸರು ಇಲ್ಲದಿದ್ದರೆ ನಮ್ಮ ಕರ್ನಾಟಕ ಹರಿದು ಹಂಚಿ ಹೋಗುತ್ತಿತ್ತು.
ಮೈಸೂರು ದಸರಾ ಉದ್ಘಾಟನೆ LIVE: ಇದು ನನ್ನ ಪೂರ್ವಜನ್ಮದ ಪುಣ್ಯ ಎಂದ ಸುಧಾಮೂರ್ತಿ
ಕರ್ನಾಟಕ ಸರ್ಕಾರ ದಸರಾವನ್ನು ಅತ್ಯಂತ ಉತ್ತಮವಾಗಿ ಆಚರಿಸಿಕೊಂಡು ಬರುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಸುಧಾಮೂರ್ತಿಯವರ ಭಾಷಣದ ವಿವರ ಹೀಗಿದೆ...
ಸರ್ವಜ್ಞ, ಡಿವಿಜಿ ಅವರನ್ನು ಸ್ಮರಿಸಿದ ಸುಧಾ ಮೂರ್ತಿ
ಪಂಪ ಹೇಳುವ ಹಾಗೆ ಕನ್ನಡವೆಂದರೆ ನನಗಿಷ್ಟ. ಮತ್ತೆ ಮತ್ತೆ ಕನ್ನಡ ನಾಡಿನಲ್ಲಿಯೇ ಹುಟ್ಟಬೇಕು ಎಂಬ ಹಂಬಲವಿದೆ. ಕನ್ನಡ ಅತ್ಯಂತ ಸುಂದರ ಸುಲಲಿತ ಭಾಷೆ. "ಕಳಿತ ಬಾಳೆಯ ಹಣ್ಣಿನಂದದಿ" ಎಂದು ಕವಿ ಡಿವಿಜಿ ಅವರ ಕಗ್ಗ ಸ್ಮರಿಸಿ ಕನ್ನಡ ಸಚಿವರು, ಕನ್ನಡದ ಮುಖ್ಯಮಂತ್ರಿಗಳಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದರು.
ದಸರಾ ಇಂದಿನ ಹಬ್ಬವಲ್ಲ. ಶತಮಾನಗಳಿಂದ ಆಚರಿಸಿಕೊಂಡು ಬಂದ ಹಬ್ಬ. ವಿಜಯನಗರ ಅರಸರ ಕಾಲದಲ್ಲಿ ಇದು ಆಚರಣೆಗೆ ಬಂತು. 'ಆಡದೇ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ಅಧಮ ತಾನಾಡಿಯು ಮಾಡದವ' ಎಂದು ಸರ್ವಜ್ಞನ ವಚನವನ್ನು ಸುಧಾ ಮೂರ್ತಿ ನೆನೆದರು.
ದಸರಾ ಉದ್ಘಾಟನೆ - ಸಾಮಾನ್ಯಳಿಗೆ ಸಿಕ್ಕ ದೊಡ್ಡ ಸನ್ಮಾನ : ಸುಧಾ ಮೂರ್ತಿ
ನಿರಾಶ್ರಿತರಿಗೆ 25 ಕೋಟಿ ರೂ.ಘೋಷಣೆ
ಹಾಗೆಯೇ ಕೊಡಗು ಪ್ರವಾಹಕ್ಕೆ ಸಿಲುಕಿ ಅನೇಕರು ನಿರಾಶ್ರಿತರಾಗಿದ್ದಾರೆ. ಸರ್ಕಾರದ ಜೊತೆ ನಾವು ಕೆಲಸ ಮಾಡಬೇಕು. ಅದಕ್ಕಾಗಿ ಇನ್ಫೋಸಿಸ್ ವತಿಯಿಂದ ನಿರಾಶ್ರಿತರಿಗೆ 25 ಕೋಟಿ ರೂ ನೀಡುವುದಾಗಿ ಘೋಷಿಸಿದರು. ಅಷ್ಟೇ ಅಲ್ಲ, ಹೆಬ್ಬಾಳ ಕೆರೆ ಪುನರುತ್ಥಾನಕ್ಕೆ ಸಂಸ್ಥೆಯಿಂದ ಅನುದಾನ ಘೋಷಿಸಿದರು .
ಮೈಸೂರು ದಸರಾ 2018: ಅಕ್ಟೋಬರ್ 10ರ ಕಾರ್ಯಕ್ರಮಗಳ ವಿವರ
ಅಪರೂಪದ ಮಹಿಳೆ ಸುಧಾ ಮೂರ್ತಿ
ಇದೇ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸಾಲದ ನೋಟಿಸ್ ಗೆ ಹೆದರಿ ಆತ್ಮಹತ್ಯೆಗೆ ಶರಣಾಗಬೇಡಿ. ಸರಕಾರವನ್ನು ನಂಬಿ ನಿಮ್ಮ ನೆಮ್ಮದಿಯಾಗಿ ಹಲವು ಯೋಜನೆಗಳನ್ನು ರೂಪಿಸುತ್ತೇನೆ. ಆತ್ಮಹತ್ಯೆ ಮಾಡಿಕೊಂಡು ನಿಮ್ಮನ್ನು ನಂಬಿದ ಕುಟುಂಬವನ್ನು ಅನಾಥರನ್ನಾಗಿ ಮಾಡಬೇಡಿ ಎಂದು ರೈತರಲ್ಲಿ ಮನವಿ ಮಾಡಿಕೊಂಡರು.
ನಾಡಿನಲ್ಲಿ ನಾ ಕಂಡ ಅಪರೂಪದ ಮಹಿಳೆ ಸುಧಾ ಮೂರ್ತಿ. ನಾಡಿನ ಅಧಿದೇವತೆಗೆ ಸುಧಾಮೂರ್ತಿ ಪೂಜೆ ಸಲ್ಲಿಸಿದರೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬ ವಿಶ್ವಾಸ ನನಗಿದೆ. ಕೊಡಗಿನಲ್ಲಿ ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸುಧಾಮೂರ್ತಿ ಅವರು ದೇಣಿಗೆ ನೀಡಿದ್ದು, ಸಮಾಜ ಸೇವೆಯ ಪ್ರತೀಕ.
ಅವರು ತಮ್ಮ ಸಂಸ್ಥೆಯ ಆದಾಯವನ್ನು ಸ್ವಂತಕ್ಕೆ ವ್ಯಯಿಸುತ್ತಿಲ್ಲ. ಅವರ ಆಯ್ಕೆ ನಾಡಿನ ಸಮಸ್ತ ಮಹಿಳೆಯರಿಗೆ ಸಂದ ಗೌರವ ಎಂದರು.
ನಾನು ಸಂತೋಷದಿಂದ ಮುಖ್ಯಮಂತ್ರಿಯಾಗಿರುವೆ ಎಂಬುದು ಬೇಡ. ರಾಜಕೀಯ ಪ್ರವೇಶ ಆಕಸ್ಮಿಕ. ನಾಡಿನ ಜನರ ನೆಮ್ಮದಿಗೆ ಸಂಕಲ್ಪ ಮಾಡುತ್ತೇನೆ ಹಣದ ಕೊರತೆ ಇಲ್ಲ. ಸಂಪನ್ಮೂಲಗಳ ಸದ್ಭಳಕೆ ಸಮಗ್ರ ಯೋಜನೆಗಳ ರೂಪಿಸಲು ಬೆಂಬಲ ನೀಡಿ ಎಂದರು.
ಸಿಎಂಗೆ ಮನವಿ ಮಾಡಿದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಇಂದು ದಸರಾ ಆಚರಣೆ ಮಾಡುತ್ತಿದ್ದರೆ ಅದು ಮೈಸೂರು ಅರಸರ ಕೊಡುಗೆ. ಅಂತಹ ಕುಟುಂಬದ ರಕ್ತಪಾತಕ್ಕೆ ಕಾರಣವಾಗಿದ್ದು ಟಿಪ್ಪು, ಈ ಹೊತ್ತಿನಲ್ಲಾದರೂ ಮೈಸೂರು ಅರಸರಿಗೆ ಗೌರವ ನೀಡಿ.
ನಿಮ್ಮ ಕಾಲದಲ್ಲಾದರೂ ಟಿಪ್ಪು ಜಯಂತಿ ಬಂದ್ ಮಾಡಿ ಎಂದು ದಸರಾ ವೇದಿಕೆಯಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸುಧಾ ಮೂರ್ತಿ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಂಸ್ಕೃತಿ ಖಾತೆ ಸಚಿವೆ ಡಾ.ಜಯಮಾಲಾ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಎಸ್. ಎ ರಾಮ್ ದಾಸ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.