ಮೈಸೂರು:ದಲಿತ ಮಹಿಳೆ ಅಡುಗೆ, ಊಟ ಮಾಡದ ವಿದ್ಯಾರ್ಥಿಗಳು
ಪಿರಿಯಾಪಟ್ಟಣ, ಜನವರಿ 18: ಅಕ್ಷರದಾಸೋಹದಡಿ ಮುಖ್ಯ ಅಡುಗೆಯವರಾಗಿ ಕಾರ್ಯನಿರ್ವಹಿಸುತ್ತಿರುವ ದಲಿತ ಮಹಿಳೆಗೆ ಸವರ್ಣೀಯರು ಕೆಲಸ ಬಿಡುವಂತೆ ಕಿರುಕುಳ ನೀಡುತ್ತಿರುವ ಘಟನೆ ತಾಲೂಕಿನ ಚಿಕ್ಕಬೇಲಾಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಚಿಕ್ಕಬೇಲಾಳು ಗ್ರಾಮದ ಸ.ಕಿ.ಪ್ರಾ.ಶಾಲೆಯ ಅಕ್ಷರದಾಸೋಹ ಯೋಜನೆಯ ಮುಖ್ಯ ಅಡುಗೆಯವರಾದ ಛಾಯಾ ಮಹದೇವ್ ಎಂಬುವರೇ ಕಿರುಕುಳಕ್ಕೊಳಗಾದ ಮಹಿಳೆ.
ದಲಿತ ಮಹಿಳೆ ಛಾಯಾ ಮಹದೇವ್ ಅವರು ಕಳೆದ ಎರಡು ವರ್ಷಗಳಿಂದ ಮುಖ್ಯಅಡುಗೆಯವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಸುಮಾರು 37 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹೇಮಾ ಎಂಬ ಮತ್ತೊಬ್ಬ ಸಹಾಯಕಿಯ ನೆರವಿನಿಂದ ಪ್ರತಿದಿನ ಅಡಿಗೆ ಸಿದ್ದಪಡಿಸಿ ಊಟ ಬಡಿಸುತ್ತಿದ್ದರು.
ಆದರೆ ಸಮೀಪದ ದೊಡ್ಡಬೇಲಾಳು ಗ್ರಾಮದಲ್ಲಿ 5 ರಿಂದ 10 ನೇ ತರಗತಿಯವರೆಗೆ ಪ್ರೌಢಶಾಲೆ ಆರಂಭವಾದ ನಂತರ 1 ರಿಂದ 4ನೇ ತರಗತಿ ವಿದ್ಯಾರ್ಥಿಗಳನ್ನು ಉಳಿಸಿಕೊಂಡು ಎಲ್ಲರನ್ನೂ ದೊಡ್ಡಬೇಲಾಳಿಗೆ ವರ್ಗಾಯಿಸಲಾಗಿದೆ, ಆದ್ದರಿಂದ ಈ ಶಾಲೆಯಲ್ಲಿ ಕೇವಲ 9 ವಿದ್ಯಾರ್ಥಿಗಳು ಮಾತ್ರ ಉಳಿದುಕೊಂಡಿದ್ದಾರೆ.
ಇದರಿಂದ ಮುಖ್ಯಶಿಕ್ಷಕ ಗಿರೀಶ್ ಮತ್ತು ಅಡಿಗೆಯವರಾದ ಛಾಯಾ ಮಹದೇವ್ ಮಾತ್ರವಿದ್ದು, ಗ್ರಾಮದಲ್ಲಿ ಶಾಲೆಗೆ ದಾಖಲಾಗಿರುವ ಸವರ್ಣೀಯರ ಮಕ್ಕಳು ಛಾಯಾ ಸಿದ್ದಪಡಿಸಿದ ಊಟವನ್ನು ಮಾಡದೆ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ದಲಿತ ಮಹಿಳೆ ಅಡುಗೆ ಮಾಡುತ್ತಿರುವುದರಿಂದ ಯಾರೂ ಊಟ ಮಾಡಬೇಡಿ ಎಂದು ಪೋಷಕರು ಹೇಳಿದ್ದಾರೆ. ದಲಿತ ಅಡುಗೆ ಕಾರ್ಮಿಕಳನ್ನು ಬದಲಾಯಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕರೀಗೌಡ ಮತ್ತು ತಾ.ಪಂ. ಅಕ್ಷರದಾಸೋಹ ಸಹಾಯಕ ನಿರ್ದೇಶಕ ಶಿವರಾಜ್, ಸಿಆರ್ಪಿ ವಸಂತಕುಮಾರ್, ಮುಖ್ಯೋಪಾಧ್ಯಾಯ ಗಿರೀಶ್ರವರಿಗೆ ಬಹಿರಂಗ ಪತ್ರ ಸಹ ಬರೆದಿದ್ದಾರೆ.
ಈ ನಡುಗೆ ಕಳೆದ 2 ವರ್ಷಗಳಿಂದ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳದ ತಾ.ಪಂ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವರಾಜ್ ಮತ್ತು ಸಿಆರ್ಪಿ ವಸಂತಕುಮಾರ್, ಮುಖ್ಯೋಪಾಧ್ಯಾಯ ಗಿರೀಶ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೋಷಕರನ್ನು ಬುಧವಾರ ಶಾಲೆಗೆ ಕರೆಯಿಸಿ ನಮ್ಮ ಮಕ್ಕಳು ಅಕ್ಷರದಾಸೋಹದಡಿಯಲ್ಲಿ ಊಟ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಪತ್ರ ಬರೆಸಿ ಸಹಿ ಹಾಕಿಸಿಕೊಂಡು ಈ ವಿಷಯಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.
ಕಳೆದ 6 ದಿನಗಳ ಹಿಂದೆ ತಾಲೂಕು ಮತ್ತು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಾ.ಪಂ.ಸದಸ್ಯ ಟಿ.ಈರಯ್ಯರವರು ಈ ವಿಷಯವನ್ನು ಪ್ರಸ್ತಾಪಿಸಿದ ಪರಿಣಾಮ ವಿಷಯ ಬಹಿರಂಗಗೊಂಡು ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿ ಹಾಕಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.