ಕೆಎಸ್ಓಯುಗೆ ಮಾನ್ಯತೆ ಸಿಕ್ಕರೂ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳ ಹಿಂದೇಟು
ಮೈಸೂರು, ಸೆಪ್ಟೆಂಬರ್ 22 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕರಾಮುವಿ) ಪದವಿ ಕೋರ್ಸ್ ಗಳಿಗೆ ಪ್ರವೇಶ ಬಯಸಿ ದಂಡ ಶುಲ್ಕವಿಲ್ಲದೆ, ಅರ್ಜಿ ಸಲ್ಲಿಸಲು ನೀಡಿದ್ದ ಅವಕಾಶ ಗುರುವಾರ ಅಂತ್ಯಗೊಂಡಿದ್ದು, ಕೇವಲ 3,000 ಅರ್ಜಿಗಳಷ್ಟೇ ಬಂದಿವೆ ಎಂದು ತಿಳಿದುಬಂದಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆ.27ರಿಂದ ಆರಂಭವಾಗಿ ಸೆ.20ಕ್ಕೆ ಕೊನೆಗೊಂಡಿದೆ. 200 ರೂ. ದಂಡ ಶುಲ್ಕ ಪಾವತಿಸಿ ಅ.1ವರೆಗೂ ಅರ್ಜಿ ಸಲ್ಲಿಸಬಹುದಾಗಿದೆ.
2013-14ರ ಸಾಲಿನಲ್ಲಿ ಮತ್ತು ಅದಕ್ಕೂ ಹಿಂದಿನ ವರ್ಷಗಳಲ್ಲಿ ಶಿಕ್ಷಣಾರ್ಥಿಗಳಿಂದ 35 ಸಾವಿರದಿಂದ 40 ಸಾವಿರದವರೆಗೂ ಅರ್ಜಿಗಳು ಬರುತ್ತಿದ್ದವು. ಇದಕ್ಕೆ ಹೋಲಿಸಿದರೆ ಈ ಬಾರಿ ಕೇವಲ ಶೇ.8ರಷ್ಟು ಅರ್ಜಿ ಬಂದಿರುವುದು ಕರಾಮುವಿ ಆಡಳಿತವನ್ನು ಚಿಂತೆಗೀಡುಮಾಡಿದೆ.
2013-14 ಹಾಗೂ 2014-15ನೇ ಸಾಲಿನಲ್ಲಿ ಕರಾಮುವಿ ವಿವಿಧ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದ 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಇನ್ನೂ ಡೋಲಾಯಮಾನವಾಗಿದೆ.
ಕರ್ನಾಟಕ ಮುಕ್ತ ವಿವಿ ಪ್ರವೇಶಕ್ಕೆ ಅಕ್ಟೋಬರ್ 1 ಕೊನೆ ದಿನ
ಈ ಎರಡೂ ಸಾಲಿನಲ್ಲಿ ವಿವಿ ನೀಡಿದ ಪದವಿ ಅಸಿಂಧು ಎಂದು ಈಗಾಗಲೇ ಯುಜಿಸಿ ಪ್ರಕಟಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿವಿ ಆಡಳಿತ ಮಂಡಳಿ ಅಧಿಕಾರಿಗಳು, ಯುಜಿಸಿ ಅಧಿಕಾರಿಗಳ ಜತೆ ನಿರಂತರ ಮಾತುಕತೆ ನಡೆಸುತ್ತಿದ್ದರಾದರೂ, ಪದವಿಗೆ ಮಾನ್ಯತೆ ನೀಡುವ ಬಗ್ಗೆ ಯುಜಿಸಿ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಆದರೆ, ಪ್ರಸಕ್ತ ಸಾಲಿನಿಂದ 17 ಕೋರ್ಸ್ ಗಳನ್ನು ಪುನಾರಂಭಿಸಲು ಅನುಮತಿ ನೀಡಿದೆ. ಉಳಿದ 15 ಕೋರ್ಸ್ ಗಳಿಗೂ ಅನುಮತಿ ದೊರಕಿಸಿಕೊಳ್ಳಲು ಕರಾಮುವಿ ಅಧಿಕಾರಿಗಳು ಪ್ರಯತ್ನ ಮುಂದುವರಿಸಿದ್ದಾರೆ.
ಮಾನ್ಯತೆ ಇದೆಯೋ ಇಲ್ಲವೋ ಸಂಶಯ ದೂರವಾಗಿಲ್ಲ
ಕರಾಮುವಿಗೆ ಯುಜಿಸಿ ಮಾನ್ಯತೆ ನವೀಕರಣಗೊಳ್ಳದೇ 3 ವರ್ಷಗಳಿಂದ ಉಂಟಾಗಿದ್ದ ಗೊಂದಲವೂ ಶಿಕ್ಷಣಾರ್ಥಿಗಳ ಆಸಕ್ತಿಯನ್ನು ತಗ್ಗಿಸಿದಂತಿದೆ. ಇಲ್ಲಿ ಪಡೆಯುವ ಪದವಿಗೆ ಮಾನ್ಯತೆ ಸಿಗುತ್ತದೆಯೋ ಇಲ್ಲವೋ ಎಂಬ ಸಂಶಯ ಶಿಕ್ಷಣಾರ್ಥಿಗಳಲ್ಲಿ ಇನ್ನೂ ದೂರಾಗಿಲ್ಲ. ಇದೂ ಕೂಡ ಅರ್ಜಿಗಳ ಸಲ್ಲಿಕೆ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎನ್ನಲಾಗಿದೆ.
ಮೈಸೂರು ಮುಕ್ತ ವಿವಿಗೆ ಮರುಜೀವ: ಹೊಸ ಕೋರ್ಸ್ ಗೆ ಅರ್ಜಿ ಆಹ್ವಾನ
ಮಾನ್ಯತೆ ಸಿಕ್ಕಿರುವ ಕೋರ್ಸ್ ಗಳಿವು
ಪದವಿ ಕೋರ್ಸ್ ಗಳಾದ ಬಿಎ, ಬಿಕಾಂ, ಬಿಲಿಬ್ಐಎಸ್ಸಿ(ಗ್ರಂಥಾಲಯ ವಿಭಾಗ), ಸ್ನಾತಕೋತ್ತರ ಪದವಿ ಕೋರ್ಸ್ ಗಳಾದ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ, ಪ್ರಾಚೀನ ಇತಿಹಾಸ ಮತ್ತು ಪರಾತತ್ವ, ಎಂಕಾಂ, ಎಂಎಸ್ ಸಿ- ಪರಿಸರ ವಿಜ್ಞಾನ ಹಾಗೂ ಎಂಲಿಬ್-ಐಎಸ್ ಸಿ (ಗ್ರಂಥಾಲಯ ವಿಭಾಗ) ಕೋರ್ಸ್ ಗಳಿಗಷ್ಟೇ ಯುಜಿಸಿ ಈ ಬಾರಿ ಅನುಮೋದನೆ ನೀಡಿದೆ. ಜತೆಗೆ ಕೌಶಲ ಶಿಕ್ಷಣ ನೀಡಲೂ ಕರಾಮುವಿ ನಿರ್ಧರಿಸಿದೆ.
ಯುಜಿಸಿ ಮಾನ್ಯತೆ ಪಡೆದ ಕೆಎಸ್ಒಯುನ 17 ಕೋರ್ಸ್ಗಳು ಯಾವುವು?
ವಯಸ್ಸಿನ ಆಧಾರದಲ್ಲಿ ಸ್ನಾತಕೋತ್ತರ ಪದವಿ ಅಸಾಧ್ಯ
ಹಿಂದೆ ವಯಸ್ಸಿನ ಆಧಾರದ ಮೇಲೆ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಸೇರ್ಪಡೆ ಆಗಬಹುದಿತ್ತು. ಈಗ ಹೊಸ ನಿಯಮ ಜಾರಿಯಾಗಿರುವುದರಿಂದ ಸಾಂಪ್ರದಾಯಿಕ ವಿವಿಗಳಂತೆಯೇ ಕರಾಮುವಿ ಯಲ್ಲಿನ ಪದವಿ ಕೋರ್ಸ್ ಗಳಿಗೆ ಪಿಯು ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಪದವಿ ತೇರ್ಗಡೆ ಕಡ್ಡಾಯ ಆಗಿದೆ. ಎಸ್ಎಸ್ಎಲ್ಸಿ ನಂತರ ನೇರವಾಗಿ ಅಥವಾ ವಯಸ್ಸಿನ ಆಧಾರದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಇನ್ನು ಮುಂದೆ ಅಸಾಧ್ಯ. ಈ ನಿಯಮದಿಂದಾಗಿಯೂ ಮುಕ್ತ ವಿವಿ ಕೋರ್ಸ್ ಗಳಿಗೆ ಬೇಡಿಕೆ ತಗ್ಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಕೇಂದ್ರ ಸರ್ಕಾರದ ನೌಕರಿಗೂ ಅರ್ಜಿ ಸಲ್ಲಿಸಬಹುದು
ಕರಾಮುವಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳು ಇತರೆ ಸಾಮಾನ್ಯ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ ಗಳಿಗೆ ಸಮನಾಗಿವೆ. ಮುಕ್ತ ವಿವಿ ಪದವಿ, ಸ್ನಾತಕೋತ್ತರ ಪದವಿ ಆಧಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೌಕರಿಗೂ ಅರ್ಜಿ ಸಲ್ಲಿಸಬಹುದು. ಈ ಹಿನ್ನೆಲೆಯಲ್ಲಿಯೇ ಯುಜಿಸಿ 2017ರ ಜೂ.23ರಂದು ಮುಕ್ತ ಮತ್ತು ದೂರ ಶಿಕ್ಷಣ ಕಲಿಕೆಗೆ ಸಂಬಂಧಿಸಿದಂತೆ ಕೋರ್ಸ್ ಗಳ ಪ್ರವೇಶದ ನಿಯಮಗಳಲ್ಲಿ ಬದಲಾವಣೆ ಮಾಡಿದೆ.