ಮೈಸೂರಿನ ಹಲವೆಡೆ ಬೀದಿನಾಯಿಗಳ ದಾಳಿ: ಮೂವರು ಮಕ್ಕಳಿಗೆ ಗಾಯ
ಮೈಸೂರು, ಜೂನ್ 26: ಮೈಸೂರಿನ ಎಚ್.ಡಿ ಕೋಟೆ ಪಟ್ಟಣದ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಮೂವರು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ಕೇಶವ ಎಂಬ ಹುಡುಗ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿ ಮೂಗನ್ನು ಕಚ್ಚಿ ತಿಂದಿವೆ. ಮಗುವಿನ ಕಿರುಚಾಟ ಕೇಳಿದ ತಾಯಿ, ಅಕ್ಕಪಕ್ಕದ ನಿವಾಸಿಗಳು ಬಾಲಕನನ್ನು ರಕ್ಷಿಸಲು ಮುಂದಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಣಿಪಾಲದಲ್ಲಿ ಹತ್ತಕ್ಕೂ ಹೆಚ್ಚು ನಾಯಿಗಳ ಸಾವು
ಇದರೊಟ್ಟಿಗೆ 4 ವರ್ಷದ ರಜಾನ್ ಹಾಗೂ 3 ವರ್ಷದ ಅರ್ಮಾನ್ ಮೇಲೆಯೂ ನಾಯಿಗಳು ದಾಳಿ ನಡೆಸಿವೆ. ಈ ಇಬ್ಬರನ್ನೂ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇವುಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.