ಮೈಸೂರಿನ ಹೆಬ್ಬಲಗುಪ್ಪೆ ಗ್ರಾಮದ ಜಾತ್ರೆಯಲ್ಲಿ ನಡೆಯುತ್ತೆ ನಾಯಿ-ನರಿ ಕಾಳಗ
ಮೈಸೂರು, ಜನವರಿ 31: ಕೋಳಿ ಕಾಳಗ, ಟಗರು ಕಾಳಗ, ಹೋರಿ ಕಾಳಗ ನಡೆಯುವುದನ್ನು ಕೇಳಿದ್ದೇವೆ, ಕಂಡಿದ್ದೇವೆ. ಆದರೆ ಮೈಸೂರು ಜಿಲ್ಲೆಯ ಈ ಜಾತ್ರೆಯಲ್ಲಿ ನಾಯಿ- ನರಿಯ ನಡುವೆ ಕಾಳಗ ನಡೆಸಲಾಗುತ್ತದೆ.
ಭಾರತದಲ್ಲಿ ಸಂಪ್ರದಾಯ, ಆಚರಣೆಗಳಿಗೇನೂ ಕಮ್ಮಿ ಇಲ್ಲ. ಚಿತ್ರ ವಿಚಿತ್ರ ಆಚರಣೆಗಳಿಗೆ ಹೆಸರು ವಾಸಿಯಾಗಿರುವ ನಮ್ಮ ದೇಶದಲ್ಲಿ ಈಗ ಮತ್ತೂ ಒಂದು ವಿಚಿತ್ರ ಆಚರಣೆ ಬೆಳಕಿಗೆ ಬಂದಿದೆ.
ಮಂಡ್ಯದಲ್ಲಿ ಜನಿಸಿತು ವಿಚಿತ್ರ ಹೆಣ್ಣು ಮಗು
ಈ ಆಚರಣೆ ನಡೆದಿರುವುದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ. ಇಲ್ಲಿನ ಹುಲಿಕೊರೆ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ದೇವರಿಗೆ ಆರತಿ ಮುಗಿದ ನಂತರ ಗ್ರಾಮಸ್ಥರು ಮೊದಲೇ ಕಾಡಿನಿಂದ ಹಿಡಿದು ತಂದಿದ್ದ ನರಿಯೊಂದನ್ನು ಸರಪಳಿಯಲ್ಲಿ ಕಟ್ಟಿ ನಾಯಿಯೊಂದಿಗೆ ಸೆಣಸಾಡಲು ಬಿಡುತ್ತಾರೆ. ಈ ಕಾಳಗದ ನಂತರ ಗಾಯಗೊಂಡ ನರಿಯನ್ನು ಪುನಃ ಅರಣ್ಯಕ್ಕೆ ಬಿಡುತ್ತಾರೆ.
ಈ ನಾಯಿ ನರಿ ಕಾಳಗವನ್ನು ಪ್ರತಿ ವರ್ಷವೂ ಪೂಜಾ ದಿನದಂದು ನಡೆಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ನಾಯಿ-ನರಿ ಕಾಳಗದಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದಾರೆ ಇಲ್ಲಿನ ಗ್ರಾಮಸ್ಥರು.
ಆದರೆ ಈ ವಿಚಿತ್ರ ಆಚರಣೆಯಿಂದಾಗಿ ಮೂಕ ಪ್ರಾಣಿಗಳು ಹಿಂಸೆ ಅನುಭವಿಸಬೇಕಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ವನ್ಯ ಜೀವಿ ವಿಭಾಗದ ಡಿಸಿಎಫ್ ಏಡುಕೊಂಡಲು, "ವನ್ಯ ಜೀವಿಗಳನ್ನು ಸೆರೆ ಹಿಡಿಯುವುದು ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಅಪರಾಧ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದ್ದಾರೆ.
ರಾಜ್ಯದ ಕೆಲವೆಡೆ ಕೋಳಿ ಕಾಳಗ, ಉತ್ತರ ಕರ್ನಾಟಕದಲ್ಲಿ ಟಗರು ಕಾಳಗ, ಹೋರಿ ಕಾಳಗ ಅಚರಣೆಯಲ್ಲಿದೆ. ಸರ್ಕಾರ ಇವುಗಳ ಮೇಲೆ ನಿಷೇಧ ಹೇರಿದೆ. ಹಾಗಿದ್ದರೂ ಕಾನೂನು ಉಲ್ಲಂಘಿಸಿ ಪ್ರಾಣಿಗಳನ್ನು ಹಿಂಸಿಸುವ ಆಚರಣೆ ನಡೆಯುತ್ತಿರುವುದು ವಿಷಾದನೀಯ ಎನ್ನುತ್ತಾರೆ ವನ್ಯಜೀವಿ ಪ್ರೇಮಿಗಳು.