ಮೈಸೂರು ಮೇಯರ್ ಚುನಾವಣೆಗೆ ತಡೆ ತಂದಿದ್ದು ಯಾರು?
ಮೈಸೂರು, ಜೂನ್ 11; ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆಯಾಗಿದೆ. ಚುನಾವಣೆಗಾಗಿ ಮೂರು ಪಕ್ಷಗಳು ತಮ್ಮದೇ ಸಿದ್ಧತೆ ಮಾಡಿಕೊಂಡಿದ್ದವು. ಚುನಾವಣೆ ಮುಂದೂಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿರುವುದು ಪಕ್ಷಗಳಿಗೆ ದೊಡ್ಡ ಮಟ್ಟದ ಶಾಕ್ ನೀಡಿದೆ.
ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ನೂತನ ಮೇಯರ್ ಆಯ್ಕೆಗೆ ಜೂನ್ 11ರ ಶುಕ್ರವಾರ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟವಾಗಿತ್ತು. ರಾಜಕೀಯ ಪಕ್ಷಗಳು ಸಹ ಸಿದ್ಧತೆ ಮಾಡಿಕೊಂಡಿದ್ದವು. ಪ್ರಮುಖವಾಗಿ ಮೇಯರ್ ಗದ್ದುಗೆ ಏರಲು ಕಾಂಗ್ರೆಸ್, ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ನಡೆದು, ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆದಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ಎರಡೂ ಪಕ್ಷಗಳು ತಮ್ಮ ಪಕ್ಷದ ಪಾಲಿಕೆ ಸದಸ್ಯರಿಗೆ ವಿಪ್ ಸಹ ಜಾರಿ ಮಾಡಿದ್ದವು.
Breaking News: ಮೈಸೂರು ಮೇಯರ್ ಚುನಾವಣೆ ಮುಂದೂಡಿಕೆ
ಈ ಎಲ್ಲಾ ಬೆಳವಣಿಗೆ ನಡುವೆಯೇ ಚುನಾವಣೆ ಮುಂದೂಡುವ ಬಗ್ಗೆ ಗುರುವಾರ ಸಂಜೆ ಆದೇಶ ಬಂದಿದೆ. ಎಲ್ಲಾ ಕಾರ್ಪೋರೇಟರ್ಗಳು ಹಾಗೂ ಮೇಯರ್ ಸ್ಥಾನದ ಆಕಾಂಕ್ಷಿಗಳಿಗೆ ಇದು ಶಾಕ್ ನೀಡಿದೆ. ಸದ್ದಿಲ್ಲದೆ ನಡೆದ ಈ ಬೆಳವಣಿಗೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದೆ ಕೋರ್ಟ್ ಮೂಲಕ ಮೇಯರ್ ಚುನಾವಣೆಗೆ ತಡೆ ತಂದಿರುವ ಬಗ್ಗೆ ಸ್ಥಳೀಯ ಕಾಂಗ್ರೆಸ್ನಲ್ಲಿ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಎದುರಾಗಿದೆ.
ಮೈಸೂರು: ಡಿಸಿ ರೋಹಿಣಿ ಆರೋಪಕ್ಕೆ ಪಕ್ಕಾ ಲೆಕ್ಕ ಕೊಟ್ಟ ಶಿಲ್ಪಾನಾಗ್
ರಾಜಕೀಯ ದಾಳ ಉರುಳಿಸಿದ್ದು ಯಾರು?
ಮೇಯರ್ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿಯಿರುವ ವೇಳೆ ಚುನಾವಣೆ ನಡೆಸದಂತೆ ತಡೆ ತಂದಿರುವ ಬಗ್ಗೆ ಸ್ಥಳೀಯ ಕಾಂಗ್ರೆಸ್ನಲ್ಲಿ ದೊಡ್ಡ ಚರ್ಚೆಗೆ ನಡೆದಿದೆ. ಪಕ್ಷದ ವರಿಷ್ಠರು, ಸ್ಥಳೀಯ ನಾಯಕರಿಗೆ ಕಿಂಚಿತ್ತು ಸುಳಿವು ನೀಡದೆ, ಕೊನೆಯಗಳಿಗೆಯಲ್ಲಿ ರಾಜಕೀಯ ದಾಳ ಉರುಳಿಸಿ ಯಶಸ್ವಿಯಾದ ಮೈಸೂರಿನ ಕಾಂಗ್ರೆಸ್ ಮುಖಂಡ ಯಾರು? ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನು ಕಾಡುತ್ತಿದೆ.
ವರ್ಚಸ್ಸು ತೋರಿಸಿದ ನಾಯಕ?
ಪಕ್ಷದ ಪ್ರಮುಖ ನಾಯಕರು ಮೇಯರ್ ಚುನಾವಣೆಗೆ ತಯಾರಿ ಮಾಡಿಕೊಂಡು, ಮೇಯರ್ ಅಭ್ಯರ್ಥಿ ಆಯ್ಕೆಯಲ್ಲಿ ತೊಡಗಿದ್ದರು. ಪಕ್ಷದಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದ ಬೆನ್ನಲ್ಲೇ, ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರು ತಮ್ಮ ಮಾಸ್ಟರ್ ಪ್ಲಾನ್ನಂತೆ ಸ್ವಪಕ್ಷದವರನ್ನೇ ಬೆಚ್ಚಿ ಬೀಳಿಸಿದ್ದಾರೆ. ಆ ಮೂಲಕ ಹೈಕಮಾಂಡ್ಗೆ ತನ್ನ ವರ್ಚಸ್ಸು ತೋರಿಸಿಕೊಟ್ಟಿರುವ ಕೈ ನಾಯಕ, ಕಳೆದ ಬಾರಿಯ ಮೇಯರ್ ಚುನಾವಣೆ ವೇಳೆ ತಮಗಾದ ಹಿನ್ನಡೆಗೆ ತಿರುಗೇಟು ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಮೇಯರ್ ಚುನಾವಣೆಗೆ ಸ್ಟೇ ತಂದಿರುವುದರ ಹಿಂದಿರುವ ಸ್ಥಳೀಯ ನಾಯಕ, ಮೇಯರ್ ಚುನಾವಣೆ ಸಂಬಂಧ ನಡೆದ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಎಲ್ಲೂ ಸಹ ತಡೆ ತರುವ ಬಗ್ಗೆ ಪ್ರಸ್ತಾಪಿಸದ ನಾಯಕ, ತೆರೆಮರೆಯಲ್ಲಿ ತಮ್ಮ ಶಿಷ್ಯನಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ನ್ಯಾಯಾಲಯದಿಂದ ಆದೇಶ ತರುವುದರಲ್ಲಿ ಯಶಸ್ವಿಯಾಗಿದ್ದಾರೆ.
ಸ್ಟೇ ತಂದಿದ್ದಕ್ಕೆ ನೋಟಿಸ್
ಜೂನ್ 11ರಂದು ಮೇಯರ್ ಚುನಾವಣೆ ನಡೆಸದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದ ಕಾಂಗ್ರೆಸ್ ಕಾರ್ಪೋರೇಟರ್ ಪ್ರದೀಪ್ ಚಂದ್ರ ಇದೀಗ ಕೈ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಕ್ಷಕ್ಕೆ ಮಾಹಿತಿ ನೀಡದೆ ನ್ಯಾಯಾಲಯಕ್ಕೆ ಹೋಗಿ ಹೋಗಿ ತಡೆ ತಂದ ವಿಚಾರವಾಗಿ ಶೋಕಾಸ್ ನೋಟಿಸ್ ನೀಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಶಿಸ್ತು ಕ್ರಮಕೈಗೊಳ್ಳುವುದಾಗಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ಮೂರು ದಿನದೊಳಗೆ ನೋಟಿಸ್ಗೆ ಉತ್ತರ ನೀಡದಿದ್ದಲ್ಲಿ ಕಾನೂನಿನ ಅಡಿಯಲ್ಲಿ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ತಮ್ಮ ಅರಿವಿಗೆ ಬಂದಿಲ್ಲ
ಈ ನಡುವೆ ಮೇಯರ್ ಚುನಾವಣೆಗೆ ತಡೆ ತಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, "ಪಾಲಿಕೆ ಮೇಯರ್ ಚುನಾವಣೆ ರದ್ದು ಮುಂದೂಡಿಕೆ ವಿಚಾರ, ನಮ್ಮ ಅರಿವಿಗೆ ಬರದೇ ನಡೆದಿದೆ. ಈ ಬಗ್ಗೆ ಮಾಹಿತಿ ಪಡೆಯಲು ನಗರಾಧ್ಯಕ್ಷ ಆರ್. ಮೂರ್ತಿಗೆ ತಿಳಿಸಿದ್ದೇನೆ. ಅಲ್ಲದೇ ಈ ಬಗ್ಗೆ ರಾಜ್ಯ ನಾಯಕರಿಗೂ ಮಾಹಿತಿ ಕೊಟ್ಟಿದ್ದೇನೆ" ಎಂದಿದ್ದಾರೆ.
ಅನ್ವರ್ ಬೇಗ್ಗೆ ಒಲಿದ ಅದೃಷ್ಟ
ಮೇಯರ್ ಚುನಾವಣೆ ಮುಂದೂಡಿರುವ ಹಿನ್ನೆಲೆಯಲ್ಲಿ ಹಂಗಾಮಿ ಮೇಯರ್ ಆಗಿರುವ ಅನ್ವರ್ ಬೇಗ್ಗೆ ಮತ್ತಷ್ಟು ದಿನಗಳ ಕಾಲ ಮೇಯರ್ ಚೇಂಬರ್ ನಲ್ಲಿ ಮಿಂಚುವ ಅದೃಷ್ಟ ಸಿಕ್ಕಿದೆ. ಕಳೆದ ಬಾರಿ ನಡೆದ ಮೇಯರ್, ಉಪ-ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ನ ಅನ್ವರ್ ಬೇಗ್ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು. ಈ ನಡುವೆ ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಅನ್ವರ್ ಬೇಗ್ ಹಂಗಾಮಿ ಮೇಯರ್ ಆಗಿ ಪಾಲಿಕೆಯ ಅಧಿಕಾರದ ಗದ್ದುಗೆ ಏರಿದ್ದರು.