ಕೃಷಿ ವಿವಿ ಸಮೀಪ ಬಾರ್ ನಿರ್ಮಾಣ; ಪ್ರತಿಭಟನೆಗಿಳಿದ ರೈತ ಸಂಘ
ಮೈಸೂರು, ನವೆಂಬರ್ 20: ಮೈಸೂರು ತಾಲೂಕಿನ ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೃಷಿ ವಿಶ್ವವಿದ್ಯಾನಿಲಯದ ಪಕ್ಕದಲ್ಲಿ ಅಕ್ರಮವಾಗಿ ಬಾರ್ ತೆರೆಯಲು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿತು. ಕುವೆಂಪುನಗರ ಅನಿಕೇತನ ರಸ್ತೆಯಲ್ಲಿರುವ ಅಬಕಾರಿ ಆಯುಕ್ತರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ಮೈಸೂರು ತಾಲೂಕಿನ ನಾಗನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ನಾಗನಹಳ್ಳಿ ಗ್ರಾಮದಲ್ಲಿರುವ ಕೃಷಿ ವಿವಿಯಲ್ಲಿ ಪ್ರತಿದಿನ ರಾಜ್ಯ ಮತ್ತು ಅಂತರ ರಾಜ್ಯಗಳಿಂದ ರೈತರು ಬಂದು ತರಬೇತಿ ಪಡೆಯುತ್ತಿದ್ದಾರೆ. ಈ ಕೃಷಿ ವಿವಿ ಎದುರು ಬಾರ್ ತೆರೆಯಲು ಮುಂದಾಗಿದ್ದಾರೆ. ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಮೈಸೂರು ತಾಲೂಕು ಆಡಳಿತಾಧಿಕಾರಿಗಳು ಹಾಗೂ ಪಿಡಿಒ ಅಬಕಾರಿ ಆಯುಕ್ತರು ಎಲ್ಲರ ಗಮನಕ್ಕೂ ತಂದಿದ್ದೇವೆ ಎಂದರು.
ಮೈಸೂರು: ಬಾರ್ ತೆರೆಯಲು ಕರವೇ ವಿರೋಧ
ರೈತ ತರಬೇತಿ ಕೇಂದ್ರದ ಬಳಿ ಬಾರ್ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಮೈಸೂರು ಜಿಲ್ಲಾ ಅಬಕಾರಿ ಆಯುಕ್ತರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕೃಷಿ ವಿವಿಗೆ ಕೇವಲ 15 ಅಡಿ ಅಂತರದಲ್ಲಿ 6 ಅಂತಸ್ತಿನ ಕಟ್ಟಡವನ್ನು ಕಟ್ಟಲಾಗಿದೆ. ರೈತರು ಕುಳಿತುಕೊಳ್ಳುವ ಸ್ಥಳದಲ್ಲಿ ಬಾರ್ ಆದಲ್ಲಿ ಕುಡಿತದ ಚಟಕ್ಕೆ ಬೀಳುತ್ತಾರೆ. ನ್ಯಾಯ ದೊರಕಿಸಿಕೊಡಿ ಎಂದು ಒತ್ತಾಯಿಸಿದರು.
ಸಚಿವ ಸೋಮಶೇಖರ್, ಬಿ.ಸಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿರುವುದಾಗಿಯೂ ತಿಳಿಸಿದರು. ಇದೇ ವೇಳೆ ಅಬಕಾರಿ ಆಯುಕ್ತರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.