ಕುರುಬ ಸಮಾಜದಿಂದ ಸಿದ್ದರಾಮಯ್ಯಗೆ ಬಹಿಷ್ಕಾರದ ಎಚ್ಚರಿಕೆ!
ಮೈಸೂರು, ಜನವರಿ 20: "ಇಡೀ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಿ. ಸಿದ್ದರಾಮಯ್ಯ ಆರೋಪದಿಂದ ನನಗೆ ಬಹಳ ನೋವಾಗಿದೆ. ಅವರು ನಮ್ಮ ಸಮುದಾಯದ ಸ್ವಾಮೀಜಿಗಳು. ಅವರನ್ನು ಭಕ್ತಿ ಭಾವದಿಂದ ನೋಡುತ್ತಿದ್ದೇವೆ. ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ" ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ಬುಧವಾರ ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸ್ವಾಮೀಜಿಗಳ ಪಾದಯಾತ್ರೆಗೆ ಆರ್ ಎಸ್ ಎಸ್ ಫಂಡ್ ಬಗ್ಗೆ ಸಿದ್ದರಾಮಯ್ಯ ಮಾಡಿದ ಆರೋಪದ ಬಗ್ಗೆ ಮಾತನಾಡಿದ ವಿಶ್ವನಾಥ್, "ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ. ಇಡೀ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಿ" ಎಂದರು.
ಎಸ್ಟಿ ಹೋರಾಟ: ಈಶ್ವರಪ್ಪ ವಿರುದ್ಧ ತಿರುಗಿ ಬಿದ್ದ ಕುರುಬ ನಾಯಕರು!
"ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ. ಸಿದ್ದರಾಮಯ್ಯ ಮರೆತಿದ್ದಾರೆ ಮಠದಿಂದ ಧಾರ್ಮಿಕ ಸಂಘಟನೆಯಿಂದಲೇ ಅವರು ಸಿಎಂ ಆಗಿದ್ದು. ನಿಮಗೆ ಮಠನೂ ಗೊತ್ತಿಲ್ಲ ಸ್ವಾಮೀಜಿನೂ ಗೊತ್ತಿಲ್ಲ. ಮಠದ ಬಗ್ಗೆ ನಿಮಗೆ ಗೌರವ ಇಲ್ಲ. ಸಿದ್ದರಾಮಯ್ಯ ನಮ್ಮ ಸ್ವಾಮಿಗಳ ಮಾನ ಹರಾಜು ಹಾಕುತ್ತಿದ್ದಾರೆ" ಎಂದು ಆರೋಪಿಸಿದರು.
ಎಸ್ಟಿಗೆ ಕುರುಬ ಸಮುದಾಯ ಸೇರಿಸಲು ಆಗ್ರಹಿಸಿ ಪಾದಯಾತ್ರೆ
"ಇದು ನಿಮಗೆ ಗೌರವ ತರುತ್ತಾ?. ಸ್ವಾಮಿಗಳು ದುಡ್ಡ ತೆಗೆದುಕೊಳ್ಳುವ ವ್ಯಕ್ತಿಗಳೇ?, ನಮ್ಮ ಬಗ್ಗೆ ನೀವು ಹೇಳಿ. ಆದರೆ, ಸ್ವಾಮೀಜಿಗಳ ಬಗ್ಗೆ ಮಾತನಾಡಬೇಡಿ. ಅವರಿಗೆ ಬಹುಪರಾಕ್ ಹೇಳುವವರು ಬೇಕು. ಸ್ವಾಮೀಜಿಗಳ ವಿರುದ್ಧದ ಹೇಳಿಕೆಯನ್ನು ವಾಪಸ್ ಪಡೆಯಬೇಕು" ಎಂದು ವಿಶ್ವನಾಥ್ ಒತ್ತಾಯಿಸಿದರು.
ಕುರುಬ ಸಮುದಾಯದ ಎಸ್ಟಿ ಹೋರಾಟದ ಹಿಂದೆ ಆರ್ಎಸ್ಎಸ್ ಕೈವಾಡ?
"ಸಿದ್ದರಾಮಯ್ಯ ಮಾತಿನಿಂದ ಸ್ವಾಮೀಜಿಗಳು ಕುಗ್ಗಿ ಹೋಗಿದ್ದಾರೆ. ಸಾಕಷ್ಟು ಬೇಸರಗೊಂಡಿದ್ದಾರೆ. ನೀವು ಹೋರಾಟಕ್ಕೆ ಬರುವುದಾದರೆ ಬಾ, ಇಲ್ಲ ಬಿಡು. ಹೇಳಿಕೆಯನ್ನು ವಾಪಸ್ ಪಡೆಯದಿದ್ದರೆ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ" ಎಂದು ವಿಶ್ವನಾಥ್ ಎಚ್ಚರಿಕೆ ನೀಡಿದರು.
"ಬಿಳಿ ಬಟ್ಟೆ ಹಾಕಿರೊ ಸಿದ್ದರಾಮಯ್ಯಗೆ ಜನರ ಕಷ್ಟ ಸುಖಗಳು ಅರ್ಥ ಆಗ್ತಿಲ್ವಾ. ಇಡೀ ಸಮುದಾಯವನ್ನು ಅವಮಾನ ಮಾಡುತ್ತಿದ್ದಾರೆ. ನಾವು ಮಠ ಕಟ್ಟಲು ಭಿಕ್ಷೆ ಎತ್ತಿದ್ದೇವೆ. ಬಹಳ ಲಘವಾಗಿ ಮಠ, ಸಮಾಜ, ಸ್ವಾಮೀಜಿಗಳ ಬಗ್ಗೆ ಮಾತನಾಡುವುದು ಶೋಭೆ ತರುವಂತಹದ್ದಲ್ಲ" ಎಂದರು.
"ಸಮುದಾಯದ ಋಣ ನಿಮ್ಮ ಮೇಲಿದೆ. ಸಮಾಜದಿಂದಲೇ ನೀವು ಇಷ್ಟೆಲ್ಲ ಆಗಿದ್ದು. ಉತ್ತರ ಕರ್ನಾಟಕದ ಕುರುಬರ ಕಷ್ಟ ಸಿದ್ದರಾಮಯ್ಯ ಅರ್ಥವಾಗುತ್ತಿಲ್ಲ. ಬಿಳಿ ಬಟ್ಟೆ ಹಾಕೀರೋ ಸಿದ್ದರಾಮಯ್ಯಗೆ ಇದು ಅರ್ಥ ಆಗಲ್ಲ. ನಿಮಗೆ ಇಷ್ಟ ಇದ್ದರೆ ಹೋರಾಟಕ್ಕೆ ಬನ್ನಿ, ಜನರ ದಿಕ್ಕು ತಪ್ಪಿಸಬೇಡಿ" ಎಂದು ವಿಶ್ವನಾಥ್ ಹೇಳಿದರು.