"ಸಿದ್ದರಾಮಯ್ಯ ಮಗ ಕಡ್ಲೆಪುರಿ ತಿನ್ನುತ್ತಿದ್ದರಾ?"; ಎಸ್.ಟಿ.ಸೋಮಶೇಖರ್
ಮೈಸೂರು, ಜೂನ್ 04: "ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಅವರ ಮಗ ಕಡ್ಲೆಪುರಿ ತಿನ್ನುತ್ತಿದ್ದರಾ" ಎಂದು ಪ್ರಶ್ನಿಸಿದ್ದಾರೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು ಸಚಿವನಾಗಿ ಮೂರು ತಿಂಗಳು ಆಗಿದೆ. ಇದುವರೆಗೂ ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಆಡಳಿತದ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರುವುದನ್ನು ನೋಡಿಲ್ಲ. ವಿಜಯೇಂದ್ರ ಶಿವಮೊಗ್ಗ ಡಿಸಿಸಿ ಬ್ಯಾಂಕ್ ವಿಚಾರಣೆಯಲ್ಲೂ ಮಧ್ಯ ಪ್ರವೇಶ ಮಾಡಿಲ್ಲ. ಅವರಿಗೂ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಅಂತ ಸಿಎಂ ಕೂಡ ನಮಗೆ ಹೇಳಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿದ್ದಾಗ ಅವರ ಮಗ ಕಡ್ಲೆಪುರಿ ತಿನ್ನುತ್ತಿದ್ದರಾ?, ಬಿ.ವೈ.ವಿಜಯೇಂದ್ರ ವಿರುದ್ಧ ಸಿದ್ದರಾಮಯ್ಯ ಈಗ ರಾಜಕೀಯ ಕಾರಣಕ್ಕೆ ಹೇಳಿಕೆ ನೀಡುತ್ತಿದ್ದಾರೆ. ಅವರು ಹೇಳಿರುವ ಮಾತು ಸತ್ಯಕ್ಕೆ ದೂರ" ಎಂದರು.
ತೆರೆಯ ಮೇಲಿನ ಸಿಎಂ ಬಿಎಸ್ವೈ, ತೆರೆಯ ಹಿಂದಿನ ಮುಖ್ಯಮಂತ್ರಿ ಯಾರು?
ರಾಜ್ಯಸಭಾ ಮತ್ತು ವಿಧಾನಪರಿಷತ್ ಚುನಾವಣೆಗಳು ಬಂದಿವೆ. ಹಾಗಾಗಿ ಕೆಲ ಕಾರ್ಯಕರ್ತರು ಟಿಕೆಟ್ ನೀಡುವಂತೆ ಮನವಿ ಮಾಡಿಕೊಳ್ಳುವುದು ಸಹಜ. ಅದನ್ನು ಬಂಡಾಯ ಅಂದರೆ ಹೇಗೆ? ಎಚ್.ವಿಶ್ವನಾಥ್ ಒಬ್ಬರೇ ಅಲ್ಲ, ಎಂ.ಟಿ.ಬಿ ನಾಗರಾಜ್, ಶಂಕರ್, ರೋಷನ್ ಬೇಗ್ ಸೇರಿದಂತೆ ಹಲವರು ವಿಧಾನ ಪರಿಷತ್ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದು, ಇವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎನ್ನುವುದು ನಮ್ಮ ಒತ್ತಾಯವಾಗಿದೆ. ಯಡಿಯೂರಪ್ಪನವರು ಮಾತಿಗೆ ತಪ್ಪುವುದಿಲ್ಲ. ಆದರೆ, ಹೈಕಮಾಂಡ್ ಅವರಿಗೂ ಇದೆ ಎನ್ನುವುದನ್ನು ಮರೆಯುವಂತಿಲ್ಲ ಎಂದರು.
ಬಿಜೆಪಿ ಸೇರಿದ 17 ಜನರು ನಾವು ಇಂದಿಗೂ ಒಂದಾಗಿದ್ದೇವೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ವಿಧಾನ ಪರಿಷತ್ ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದ ಅವರು, ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಬಿಜೆಪಿಯಲ್ಲಿ ಯಾರು ಯಾರಿಗೂ ಅಡ್ಡಗಾಲು ಹಾಕಲ್ಲ. ಈ ರೀತಿಯ ಹೇಳಿಕೆಗಳನ್ನು ನೀಡಿಯೇ ಎಂಟಿಬಿ ಚುನಾವಣೆಯಲ್ಲಿ ಸೋತರು" ಎಂದರು.