ರೈತರಿಗೆ ಮನವಿ ಮಾಡಿದ ಸಚಿವ ಸೋಮಶೇಖರ್
ಮೈಸೂರು, ಡಿಸೆಂಬರ್ 8: ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆಯೇ ವಿನಃ ಮಾರಕವಿಲ್ಲ. ಇಂತಹ ಒಂದು ಐತಿಹಾಸಿಕ ರೈತ ಸ್ನೇಹಿ ಕೃಷಿ ಕಾಯಿದೆಯನ್ನು ನರೇಂದ್ರ ಮೋದಿ ಅವರು ಜಾರಿಗೆ ತಂದಿರುವುದನ್ನು ಎಲ್ಲರೂ ಸ್ವಾಗತಿಸಬೇಕು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಈ ಕುರಿತು ಮಾತನಾಡಿರುವ ಅವರು, ಯಾವುದೇ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಉಂಟಾದಾಗ ಎಂದಿನಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ಈಗಲೂ ಮುಂದುವರಿದಿದೆ ಹಾಗೂ ಮುಂದೆಯೂ ಇರುತ್ತದೆ. ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯು ಮುಂದುವರಿಯುತ್ತದೆ. ಇವುಗಳನ್ನು ಅಂತ್ಯಗೊಳಿಸುವುದಿಲ್ಲ ಎಂದು ರೈತರಿಗೆ ಸರ್ಕಾರ ಭರವಸೆ ನೀಡುತ್ತದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ನಂತರ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿ, ಹೊಲ ಅಥವಾ ಫಾರಂಗೇಟ್ ಗಳಲ್ಲಿ, ಇಲ್ಲವೇ ರಾಜ್ಯದ ಅಥವಾ ದೇಶದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಲು ಮುಕ್ತ ಅವಕಾಶ ಕಲ್ಪಿಸಿದೆ ಎಂದರು.
ಒಕ್ಕೂಟ ವ್ಯವಸ್ಥೆಯ ಸೂತ್ರ ಕಿತ್ತಿದ್ದಾರೆ; ದೇವನೂರು ಮಹಾದೇವ
ಎಪಿಎಂಸಿ ಕಾಯ್ದೆ ತಿದ್ದುಪಡಿ ಪೂರ್ವದಲ್ಲಿ ಕಾಯ್ದೆ ಕಲಂ 8 (2) ಉಲ್ಲಂಘನೆ ಮಾಡಿದರೆ, ಕಲಂ 117ರಡಿಯಲ್ಲಿ ದಂಡ ಅಥವಾ ಶಿಕ್ಷೆಗೆ ಗುರಿಪಡಿಸುವ ಅವಕಾಶವಿತ್ತು. ಅಂದರೆ ಪ್ರಾಂಗಣದ ಹೊರಗೆ ಲೈಸೆನ್ಸ್ ಇಲ್ಲದೆ ಮಾರಾಟ ಮಾಡಿದ್ದಲ್ಲಿ ದಂಡ ಮತ್ತು ಶಿಕ್ಷೆಗೆ ಗುರಿಪಡಿಸಬಹುದಾಗಿತ್ತು. ಪ್ರಸ್ತುತ ತಿದ್ದುಪಡಿಯಲ್ಲಿ ದಂಡ ಮತ್ತು ಶಿಕ್ಷೆ ವಿಧಿಸುವುದನ್ನು ಕೈಬಿಟ್ಟಿರುವುದರಿಂದ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ. ಎಪಿಎಂಸಿ ಕಾಯ್ದೆಯಲ್ಲಿನ ತಿದ್ದುಪಡಿಯಿಂದಾಗಿ ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ದೊರೆಯುತ್ತದೆ ಎಂದರು.
ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಬಂದು ರೈತರ ಬೆಳೆಯನ್ನು ಖರೀದಿ ಮಾಡಬಹುದು. ಇದರಿಂದ ಸ್ಪರ್ಧಾತ್ಮಕತೆ ಹೆಚ್ಚುವುದರಿಂದ ಹೆಚ್ಚಿನ ಬೆಲೆ ಸಿಗಲಿದೆ. ರಾಜ್ಯ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ರೈತರ ಸಾಗಾಣಿಕಾ ವೆಚ್ಚ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಕ್ರಮ ವಹಿಸಿದೆ. ಅಲ್ಲದೆ, ರೈತರು ಉತ್ಪಾದನಾ ಸ್ಥಳದಿಂದ ಬೇಡಿಕೆ ಇರುವ ಪ್ರದೇಶಗಳಿಗೆ ಒಯ್ದು ಸುಲಭವಾಗಿ ಮಾರಬಹುದಾಗಿದೆ. ಇದರಿಂದ ರೈತರು ಆರ್ಥಿಕ ಶಕ್ತಿವಂತರಾಗುತ್ತಾರೆ. ಹಾಗಾಗಿ ಎಲ್ಲ ರೈತರೂ ಇದನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.