ಮೈಸೂರಿನಲ್ಲಿ ರೈತರ ಕ್ಯಾಂಟೀನ್ "ಭೋಜನ ಮಂದಿರ" ಉದ್ಘಾಟನೆ
ಮೈಸೂರು, ಮೇ 08: ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮೈಸೂರು ಧಾನ್ಯ ವರ್ತಕರ ಸಂಘದ ವತಿಯಿಂದ ರೈತರಿಗಾಗಿ ಪ್ರಾರಂಭಿಸಲಾಗುತ್ತಿರುವ ಭೋಜನ ಮಂದಿರವನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಉದ್ಘಾಟಿಸಿದರು.
ಬಳಿಕ ಭೋಜನ ಮಂದಿರವನ್ನು ಪರಿಶೀಲಿಸಿದ ಸಚಿವರು, ಆಹಾರ ತಯಾರಿಕೆಯ ಶುಚಿತ್ವವನ್ನು ಗಮನಿಸಿದರು. ರೈತರಿಗೆ ಸ್ವತಃ ಉಪಾಹಾರ ಬಡಿಸಿದರು.
ಈ ಸಂದರ್ಭ ಮಾತನಾಡಿದ ಸಚಿವ ಸೋಮಶೇಖರ್, "ಎಪಿಎಂಸಿ ಭೇಟಿ ವೇಳೆ ಕೋಲ್ಡ್ ಸ್ಟೋರೇಜ್ ಗಾಗಿ ಅನುಮತಿ ಕೋರಲಾಗಿತ್ತು. ಈಗ ಅದಕ್ಕೂ ಅನುಮತಿ ನೀಡಲಾಗಿದೆ. ಎಪಿಎಂಸಿ ಅಭಿವೃದ್ಧಿಗೆ ಅನುದಾನ ಬೇಕೆಂದು ಸ್ಥಳೀಯ ಶಾಸಕರಾದಿಯಾಗಿ ಹಲವರು ಕೇಳಿಕೊಂಡಿದ್ದರು. ಅದಕ್ಕಾಗಿ ಸರ್ಕಾರದಿಂದ 4 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.
ಇನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆರಂಭಿಸಲಾಗಿರುವ ಕ್ಯಾಂಟೀನ್ ಗಾಗಿ ತಾತ್ಕಾಲಿಕವಾಗಿ ಜಾಗ ನೀಡಲು ಎಪಿಎಂಸಿ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಇಲ್ಲಿ ಕ್ಯಾಂಟೀನ್ ನಿರ್ವಹಣೆ, ಗುಣಮಟ್ಟ ಹಾಗೂ ರೈತರೆಲ್ಲರಿಗೂ ಆಹಾರ ಸಿಗುತ್ತದೆಯೇ ಎಂಬ ಅಂಶವನ್ನು ಕೆಲ ಸಮಯಗಳ ಕಾಲ ನಿಗಾ ವಹಿಸಲಾಗುತ್ತದೆ. ಅವರ ಸೇವೆ ತೃಪ್ತಿಕರವಾಗಿದ್ದರೆ ಜಾಗದ ಖಾಯಂ ಮಂಜೂರಾತಿಗೆ ನಿರ್ಧರಿಸಲಾಗುವುದು" ಎಂದರು.