ಇನ್ನೂ 1 ವರ್ಷ ಪ್ರಾಣಿಗಳ ದತ್ತು ಸ್ವೀಕಾರಕ್ಕೆ ಮನವಿ; ಸೋಮಶೇಖರ್
ಮೈಸೂರು, ಫೆಬ್ರವರಿ 15; " ಕೋವಿಡ್ ಸಂಕಷ್ಟ ಕಾಲದಲ್ಲಿ ನಾನು, ನನ್ನ ಆಪ್ತರು, ಸಚಿವರು, ಕ್ಷೇತ್ರದ ಜನತೆಯಿಂದ 3.65 ಕೋಟಿ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದೆ. ಇದೇ ವೇಳೆ ಪ್ರಾಣಿಗಳನ್ನು ಹಲವರು ದತ್ತು ಪಡೆದಿದ್ದರು. ಹೀಗಾಗಿ ಈ ಎಲ್ಲ ದಾನಿಗಳು ಇನ್ನೂ ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಳ್ಳುವಂತೆ ಪತ್ರ ಮುಖೇನ ಮನವಿ ಮಾಡುವುದಾಗಿ" ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಮೈಸೂರಿನ ಜಯಚಾರಾಜೇಂದ್ರ ಮೃಗಾಲಯಕ್ಕೆ ಸಚಿವರು ಭಾನುವಾರ ಭೇಟಿ ನೀಡಿ ಮೃಗಾಲಯದ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿದರು. "ಕೋವಿಡ್ 19ರ ಸಂದರ್ಭದಲ್ಲಿ ಮೃಗಾಲಯಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಆದರೆ, ಈಗ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತಿರುವುದರ ಜೊತೆಗೆ ಪ್ರವಾಸಿಗರ ಭೇಟಿ ಸಹ ಹೆಚ್ಚಳವಾಗುತ್ತಿದೆ. ಇದರಿಂದ ಮೃಗಾಲಯಕ್ಕೆ ಹಣದ ಹರಿವೂ ಸಹ ಬರತೊಡಗಿದೆ" ಎಂದರು.
ಪ್ರವಾಸಿಗರು ಸೋಮವಾರದಿಂದ ಮೃಗಾಲಯ ವೀಕ್ಷಿಸಬಹುದು
ಜೂನ್ನಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ವೆಚ್ಚದಲ್ಲಿ ಗೊರಿಲ್ಲಾಕ್ಕೆ ಶೆಡ್ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಸಚಿವರು, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಸುಧಾಮೂರ್ತಿ ಅವರು ಅತ್ಯುತ್ತಮವಾದ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆಂದು ಶ್ಲಾಘನೆ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ನಿರ್ಮೂಲನೆಗೆ ಮೈಸೂರು ಮೃಗಾಲಯ ವಿನೂತನ ಉಪಾಯ
"ಸುಧಾಮೂರ್ತಿಯವರು ಹೆಬ್ಬಾಳು ಕೆರೆಯನ್ನೂ ಅಭಿವೃದ್ಧಿ ಮಾಡಿದ್ದಾರೆ. ಇಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ಅವರು ಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಹೀಗಾಗಿ ಅವರಿಗೆ ಪೌರಸನ್ಮಾನವನ್ನು ಮಾಡಲಾಗುವುದು" ಎಂದು ಹೇಳಿದರು.
ಚಾಮರಾಜನಗರ; ಆನೆ ದಂತ ಹಿಡಿದು ಆಟವಾಡಿದ ಹಾಡಿಯ ಮಕ್ಕಳು
ಆರ್ಬಿಐ ಮನೆ ನಿರ್ಮಾಣ ವೀಕ್ಷಣೆ
ಸಚಿವ ಎಸ್. ಟಿ. ಸೋಮಶೇಖರ್ ಅವರು ಸಿಂಗಾಪುರದ ಒರಂಗೂಟ್ ಪ್ರಾಣಿಯ ವಾಸಸ್ಥಾನಕ್ಕಾಗಿ ಆರ್ ಬಿ ಐ 70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮನೆಯನ್ನು ವೀಕ್ಷಣೆ ಮಾಡಿದರು. ಅನೇಕ ಸಂಸ್ಥೆಗಳಿಂದಲೂ ಸಹ ಇಂತಹ ಉತ್ತಮ ಕಾರ್ಯಗಳು ಆಗಬೇಕಿದೆ ಎಂದರು.
ಮೃಗಾಲಯದ ಅಧ್ಯಕ್ಷ ಮಹದೇವಸ್ವಾಮಿ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಮೃಗಾಲಯದ ಪ್ರಧಾನ ನಿರ್ದೇಶಕ ರವಿ, ಮೈಸೂರು ಹಾಲು ಒಕ್ಕೂಟಗಳ ನಿರ್ದೇಶಕ ಅಶೋಕ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಭಿವೃದ್ಧಿಗೆ ಆದ್ಯತೆ
"ಖಾಸಗಿ ಕಂಪನಿಗಳು ಸಿಎಸ್ಆರ್ ನಿಧಿಗಳನ್ನು ಇಂಥ ಜನೋಪಯೋಗಿ ಕೆಲಸಗಳಿಗೆ ಬಳಸಬೇಕು. ಮೃಗಾಲಯ ಅಭಿವೃದ್ಧಿ, ಪಾರ್ಕ್, ಕೆರೆಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸಾರ್ವಜನಿಕವಾಗಿ ಹೆಚ್ಚು ಬಳಕೆಯಾಗುವ ಪ್ರದೇಶಗಳ ಅನುಕೂಲ ಮಾಡಿಕೊಡಬೇಕು. ಹೀಗಾಗಿ ಅಧಿಕಾರಿಗಳ ಸಭೆ ನಡೆಸಿ ಇಂಥ ನಿಧಿಗಳ ಬಳಕೆಯನ್ನು ಹೇಗೆ ಮಾಡಬೇಕೆಂಬ? ಬಗ್ಗೆಯೂ ಚರ್ಚೆ ನಡೆಸಲಾಗುವುದು" ಎಂದು ಸಚಿವರು ಹೇಳಿದರು.
ಆಹಾರ ಧಾನ್ಯಗಳ ಮಾಹಿತಿ ಪಡೆದರು
ಸಚಿವರು ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳಿಗಾಗಿ ಕೊಡುವ ಆಹಾರ ಧಾನ್ಯಗಳ ಸಂಗ್ರಹಾಲಯಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆಹಾರ ವಿತರಣೆ ಪ್ರಮಾಣಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಮಾಸಾಂಹಾರಗಳ ದರ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಅರಣ್ಯ ಮಂತ್ರಿಗಳ ಜೊತೆ ಚರ್ಚೆ ನಡೆಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಹೆಣ್ಣಾನೆ ಸಂತಾನೋತ್ಪತ್ತಿ
ಮೈಸೂರು ಮೃಗಾಲಯದಲ್ಲಿರುವ ಖಾಸಗಿ ಹೆಣ್ಣಾನೆ ಸಂತಾನೋತ್ಪತ್ತಿಗೆ ಯಾವ ರೀತಿಯಾಗಿ ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಮೃಗಾಲಯದ ಅಧಿಕಾರಿಗಳ ಜೊತೆ ಸಚಿವರಾದ ಸೋಮಶೇಖರ್ ಅವರು ಚರ್ಚಿಸಿದರು. ಸಂತಾನೋತ್ಪತ್ತಿಗೆ ಸರ್ಕಾರದಿಂದ ಅನುಮತಿ ಪತ್ರ ಕೊಡಿಸುವುದಲ್ಲದೆ, ಎಲ್ಲಿ ಅನುಕೂಲ ಮಾಡಿಕೊಡಬಹುದು ಎಂಬ ಬಗ್ಗೆ ಚರ್ಚೆ ನಡೆಸಿದರು. ಉಸ್ತುವಾರಿ ಸಚಿವರು ಅರಮನೆಗೆ ಭೇಟಿ ಕೊಟ್ಟಿದ್ದ ಸಮಯದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಈ ಬಗ್ಗೆ ಮನವಿ ಮಾಡಿದ್ದರು.