ದರೋಡೆಗೆ ಹೆದ್ದಾರಿಯೇ ಇವರ ಸ್ಪಾಟ್! ಕೊನೆಗೂ ಸಿಕ್ಕಿಬಿದ್ದರು ಖದೀಮರು
ಮೈಸೂರು, ಫೆಬ್ರವರಿ 08: ಕಳೆದ ವಾರವಷ್ಟೇ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದರೋಡೆ ನಡೆಸಿದ್ದವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿರುವ ಶ್ರೀರಂಗಪಟ್ಟಣ ಪೊಲೀಸರು 9 ಮಂದಿ ಖತರ್ನಾಕ್ ದರೋಡೆಕೋರರನ್ನ ಬಂಧಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾತ್ರಿ ಹೊತ್ತಿನಲ್ಲಿ ಪದೇ ಪದೇ ದರೋಡೆ ಪ್ರಕರಣಗಳು ನಡೆದಿದ್ದವು. ಹಿಂದಿನ ವಾರವಷ್ಟೆ ಕೊಡಗು ಮೂಲದ ವ್ಯಕ್ತಿಯೊಬ್ಬರಿಂದ ಕಾರು, ಮೊಬೈಲ್ ಹಾಗೂ ಹಣ ದೋಚಲಾಗಿತ್ತು. ಅದೇ ದಿನ ವ್ಯಕ್ತಿಯೊಬ್ಬರಿಂದ ಬೈಕ್, ಮೊಬೈಲ್ ಹಾಗೂ ಹಣ ದೋಚಲಾಗಿತ್ತು. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ ದರೋಡೆ ನಡೆಸಿದ್ದುದಾಗಿ ವರದಿ ಆಗಿತ್ತು.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ 15 ನಿಮಿಷದ ಅಂತರದಲ್ಲೇ ಎರಡು ದರೋಡೆ
ಪ್ರಕರಣದ ಬೆನ್ನು ಬಿದ್ದ ಶ್ರೀರಂಗಪಟ್ಟಣ ಪೊಲೀಸರು ಉಪೇಂದ್ರ, ಕಿರಣ್, ಪ್ರತಾಪ್, ಮಾದಪ್ಪ, ಶೇಖರ, ಅನೂಜ್, ಕಿರಣ್, ರವಿಕುಮಾರ, ಶಿವಕುಮಾರ ಎಂಬುವವರನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಬಂಧಿತರೆಲ್ಲರೂ ಮೈಸೂರು ಮೂಲದವರಾಗಿದ್ದು, ರಾತ್ರಿ ವೇಳೆ ಹೆದ್ದಾರಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸದ್ಯ ಬಂಧಿತರಿಂದ 11 ಮೊಬೈಲ್ಗಳು, ₹ 1400 ನಗದು, ಕೃತ್ಯಕ್ಕೆ ಬಳಸಿದ್ದ ಮಾರುತಿ ಓಮಿನಿ ಕಾರು, 2 ಸ್ಕೂಟರ್ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.