Srirangapatna bypass: ಸಂಚಾರಕ್ಕೆ ಮುಕ್ತವಾದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯ ಶ್ರೀರಂಗಪಟ್ಟಣ ಬೈಪಾಸ್
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಮಂಡ್ಯ ಬೈಪಾಸ್ ಅನ್ನು ಸಂಚಾರ ಮುಕ್ತಗೊಳಿಸಲಾಗಿತ್ತು. ಇದೀಗ ಶ್ರೀರಂಗಪಟ್ಟಣ ಬೈಪಾಸ್ ಅನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಮೈಸೂರು, ಜನವರಿ. 30: ಮೈಸೂರು - ಬೆಂಗಳೂರು ಎಕ್ಸ್ಪ್ರೆಸ್ವೇನಲ್ಲಿನ ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತವಾದ ಕೆಲವೇ ದಿನಗಳ ನಂತರ ಶ್ರೀರಂಗಪಟ್ಟಣ ಬೈಪಾಸ್ ರಸ್ತೆ ಕೂಡ ಸಂಚಾರಕ್ಕೆ ಮುಕ್ತವಾಗಿದೆ.
ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿನ 7 ಕಿಮೀ ಉದ್ದದ ಶ್ರೀರಂಗಪಟ್ಟಣ ಬೈಪಾಸ್ ರಸ್ತೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಇದರೊಂದಿಗೆ ಹತ್ತು ಪಥಗಳ ಎಕ್ಸ್ಪ್ರೆಸ್ವೇಯ ಬಹುನಿರೀಕ್ಷಿತ ಎಲ್ಲಾ ಗ್ರೀನ್ಫೀಲ್ಡ್ ವಿಭಾಗಗಳು ಪೂರ್ಣಗೊಂಡಿದೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಶ್ರೀರಂಗಪಟ್ಟಣ ಬೈಪಾಸ್ನ ಸ್ಥಿತಿಗತಿಯನ್ನು ತೋರಿಸುವ ವಿಡಿಯೋವೊಂದನ್ನು ಈ ಹಿಂದೆ ಟ್ವೀಟ್ ಮಾಡಿದ್ದರು. ಇದೀಗ ಮಂಡ್ಯ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ಬೈಪಾಸ್ನಲ್ಲಿ ವಾಹನಗಳ ಸಂಚಾರ ನಡೆಸುತ್ತಿದೆ ಎಂದು ದೃಢಪಡಿಸಿದೆ.
ಮಂಡ್ಯ ಜಿಲ್ಲೆಯ ಮೂಲಕ ಹಾದುಹೋಗುವ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇಯ ಎಲ್ಲಾ ಬೈಪಾಸ್ಗಳು ಸಂಚಾರಕ್ಕೆ ಮುಕ್ತವಾಗಿವೆ ಎಂದು ನಿಯಂತ್ರಣ ಕೊಠಡಿಯ ಅಧಿಕಾರಿಗಳು ತಿಳಿಸಿದ್ದಾರೆ.
Mandya Bypass: ಬೆಂಗಳೂರು- ಮೈಸೂರು ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತ
ಅಧಿಕಾರಿಗಳು ಈಗಾಗಲೇ 7 ಕಿಮೀ ಉದ್ದದ ಬಿಡದಿ ಬೈಪಾಸ್ ಗ್ರೀನ್ಫೀಲ್ಡ್ ವಿಭಾಗವನ್ನು, 22 ಕಿಮೀ ಉದ್ದದ ರಾಮನಗರ ಮತ್ತು ಚನ್ನಪಟ್ಟಣ ಬೈಪಾಸ್ ಮಾಡುವ ಮತ್ತು 7 ಕಿಮೀ ಉದ್ದದ ಮದ್ದೂರು ಬೈಪಾಸ್ಗಳನ್ನು ಈಗಾಗಲೇ ಸಂಚಾರ ಮುಕ್ತಗೊಳಿಸಿದ್ದಾರೆ. ಜನವರಿ 25 ರಂದು 10 ಕಿಮೀ ಉದ್ದದ ಮಂಡ್ಯ ಬೈಪಾಸ್ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ಈ ಹೊಸ ಮೈಸೂರು - ಬೆಂಗಳೂರು ಎಕ್ಸ್ಪ್ರೆಸ್ವೇಯಿಂದಾಗಿ ಎರಡು ನಗರಗಳ ನಡುವಿನ ಪ್ರಯಾಣದ ಸಮಯವು ಮೂರು ಗಂಟೆಗಳಿಂದ ಸುಮಾರು 90 ನಿಮಿಷಗಳಿಗೆ ಇಳಿಯುವ ನಿರೀಕ್ಷೆಯಿದೆ. 119 ಕಿಮೀ ಉದ್ದದ ಎಕ್ಸ್ಪ್ರೆಸ್ವೇ ಬೆಂಗಳೂರಿನ ಹೊರವಲಯದಲ್ಲಿರುವ ನೈಸ್ ರಸ್ತೆಯ ಬಳಿ ಪ್ರಾರಂಭವಾಗಿ ಮೈಸೂರಿನ ಔಟರ್ ರಿಂಗ್ ರೋಡ್ನಲ್ಲಿ ಕೊನೆಗೊಳ್ಳುತ್ತದೆ.
ರಾಷ್ಟ್ರೀಯ ಹೆದ್ದಾರಿ 275 ನಲ್ಲಿನ ಎಕ್ಸ್ಪ್ರೆಸ್ವೇಯನ್ನು ದಿಲೀಪ್ ಬಿಲ್ಡ್ಕಾನ್ 8,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿಯು 19 ಪ್ರಮುಖ ಸೇತುವೆಗಳು, 44 ಚಿಕ್ಕ ಸೇತುವೆಗಳು, ನಾಲ್ಕು ರೈಲು ಮೇಲ್ಸೇತುವೆಗಳು ಮತ್ತು ಸುಮಾರು 50 ಅಂಡರ್ಪಾಸ್ಗಳನ್ನು ಒಳಗೊಂಡಿದೆ. ಎಕ್ಸ್ಪ್ರೆಸ್ವೇ 2022 ರಲ್ಲಿ ಪೂರ್ಣಗೊಳ್ಳಬೇಕಾಗಿದ್ದರೂ, ಹಲವಾರು ವಿಳಂಬಗಳು ನಿರ್ಮಾಣ ಹಂತದಲ್ಲಿರುವ ರಸ್ತೆಯಿಂದಾಗಿ ಇನ್ನು ಸಾರ್ವಜನಿಕರಿಗೆ ಮುಕ್ತವಾಗಿಲ್ಲ.