"ಕ್ಷೇತ್ರದ ಅಭಿವೃದ್ಧಿಗೆ ಶ್ರೀನಿವಾಸ್ ಪ್ರಸಾದ್ ಮೊದಲು ಆದ್ಯತೆ ಕೊಡಲಿ"
ಮೈಸೂರು, ನವೆಂಬರ್ 26: "ಬೇರೆಯವರನ್ನು ನಿಂದನೆ ಮಾಡಿ ಸುಖ ಪಡುವುದು ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ರೂಢಿಯಾಗಿದೆ" ಎಂದು ತಿರುಗೇಟು ನೀಡಿದ್ದಾರೆ ಮಾಜಿ ಸಂಸದ ಆರ್.ಧ್ರುವ ನಾರಾಯಣ್.
ಶ್ರೀನಿವಾಸ್ ಪ್ರಸಾದ್, ಕ್ಷೇತ್ರದಲ್ಲಿ ಯಾವ ಕೆಲಸವನ್ನೂ ಮಾಡಿಲ್ಲ ಎಂದಿದ್ದ ಧ್ರುವ ನಾರಾಯಣ್ ಹೇಳಿಕೆಗೆ, "ಅವನು ನನ್ನ ಉಗುರಿಗೂ ಸಮನಲ್ಲ. ಅವನ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಮುಖಂಡರೇ ಅವನಿಗೆ ಕಿಮ್ಮತ್ತು ನೀಡಿಲ್ಲ. ಬಾಲಿಷ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ" ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದರು.
ಯಡಿಯೂರಪ್ಪ ಹುಷಾರಾಗಿರಬೇಕು ಎಂದು ಎಚ್ಚರಿಸಿದ ಸಂಸದ ಶ್ರೀನಿವಾಸ್ ಪ್ರಸಾದ್
ಗುರುವಾರ ಈ ಹೇಳಿಕೆಗೆ ತಿರುಗೇಟು ನೀಡಿದ ಧ್ರುವ ನಾರಾಯಣ್, "ಶ್ರೀನಿವಾಸ್ ಪ್ರಸಾದ್ ಅವರು ಬಳಕೆ ಮಾಡಿರುವ ಪದಗಳು ಅವರ ವ್ಯಕ್ತಿತ್ವವನ್ನು ತೋರುತ್ತದೆ. ಹಿರಿಯ ರಾಜಕಾರಣಿಗಳು ಇತರರಿಗೆ ಮಾದರಿಯಾಗಿರಬೇಕು. ಅವರ ಭಾಷೆ ಸರಿಯಿಲ್ಲ. ಆದರೆ ಅವರ ಭಾಷೆಯಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗುವುದಿಲ್ಲ" ಎಂದು ಹೇಳಿದ್ದಾರೆ.
"ಚಾಮರಾಜನಗರ ಸಂಸದರಾಗಿ ಎರಡು ವರ್ಷವಾಗುತ್ತಿದೆ. ಆದರೆ ಒಮ್ಮೆಯಾದರೂ ಪ್ರಗತಿ ಪರಿಶೀಲನೆ ನಡೆಸಿದ್ದಾರೆಯೇ? ಅದನ್ನು ಮನವರಿಕೆ ಮಾಡಿಕೊಳ್ಳಲಿ. ಕ್ಷೇತ್ರದ ಅಭಿವೃದ್ಧಿಗೆ ಅವರು ಮೊದಲು ಆದ್ಯತೆ ಕೊಡಲಿ. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಂಸದರು ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ಮಾಡಿಲ್ಲ. ಬದಲು, ತಮ್ಮ ಅನುಯಾಯಿಗಳಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ ನೀಡುವಂತೆ ಕೇಳಿಕೊಂಡಿದ್ದಾರೆ" ಎಂದು ದೂರಿದರು.