ವಿಶ್ವನಾಥ್ ಗೆ ಎಂಎಲ್ಸಿ ಟಿಕೆಟ್ ಮಿಸ್: ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆ
ಮೈಸೂರು, ಜೂನ್ 18: ಮಾಜಿ ಸಚಿವ ಅಡಗೂರು ಎಚ್. ವಿಶ್ವನಾಥ್ಗೆ ವಿಧಾನ ಪರಿಷತ್ ಟಿಕೆಟ್ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಎಚ್.ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ಮಿಸ್ ಆಗಿದ್ದಕ್ಕೆ ಮಾತನಾಡಿರುವ ಸಂಸದ, ""ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಅವರ ಹೆಸರೂ ಅಂತಿಮವಾಗಿತ್ತು. ಆದರೆ ನಾಲ್ಕನೇ ಅಭ್ಯರ್ಥಿ ಹೆಸರು ಫೈನಲ್ ಆಗಿರಲಿಲ್ಲ'' ಎಂದು ಹೇಳಿದರು.
ಎಚ್. ವಿಶ್ವನಾಥ್ ಪರವಾಗಿ ನಿಂತ ಉಭಯ ನಾಯಕರು
ರಾಜ್ಯದಿಂದ ಅಭ್ಯರ್ಥಿಗಳ ಯಾವುದೇ ಪಟ್ಟಿ ಕಳುಹಿಸಿದರೂ ರಾಷ್ಟ್ರೀಯ ಪಕ್ಷದಲ್ಲಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಯಾಕಾಗಿ ವಿಶ್ವನಾಥ್ ಅವರಿಗೆ ಟಿಕೆಟ್ ತಪ್ಪಿದೆ ಎಂಬುದು ಗೊತ್ತಿಲ್ಲವೆಂದರು.
ಎಚ್.ವಿಶ್ವನಾಥ್ ಫೋನ್ ಮಾಡಿ ಮಾತನಾಡಿದರು. ಮುಂದೆ ಏನು ಮಾಡಬೇಕು ಎಂಬುದನ್ನು ನೋಡಬೇಕು. ಈ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಜತೆ ಸಹ ಚರ್ಚೆ ಮಾಡುತ್ತೇವೆ. ವಿಶ್ವನಾಥ್ ಜೆಡಿಎಸ್ ಸೇರುವ ಮುನ್ನ ಏನೂ ಆಗಿರಲಿಲ್ಲ. ಈಗಲೂ ಅವರು ಹತಾಶೆ ಪಡಬೇಕಾಗಿಲ್ಲ ಎಂದು ತಿಳಿಸಿದರು.
ವಿಶ್ವನಾಥ್ ಅವರ ಅರೋಗ್ಯ ಚೆನ್ನಾಗಿದೆ. ಈ ಹಿಂದೆ ವಿಧಾನಸಭಾ ಚುನಾವಣೆಗೆ ನಿಲ್ಲಬೇಡಿ ಎಂದು ನಾನು ಹೇಳಿದ್ದೆ. ಅವರೂ ನಿಲ್ಲದಂತೆ ತೀರ್ಮಾನ ಮಾಡಿದ್ದರು. ಹುಣಸೂರಲ್ಲಿ ಬಿಜೆಪಿ ಪಕ್ಷ ಅಸ್ತಿತ್ವದಲ್ಲಿ ಇರಲಿಲ್ಲ, ಈ ಕಾರಣಕ್ಕೆ ರಿಸ್ಕ್ ಬೇಡ ಎಂದಿದ್ದೆ. ಆದರೂ ಅವರಿಗೆ ಟಿಕೆಟ್ ನೀಡಬೇಕಿತ್ತು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.
ಎಂಟಿಬಿ ನಾಗರಾಜ್ ಸೋತಿದ್ದರೂ, ಅವರಿಗೆ ಎಂಎಲ್ಸಿ ಟಿಕೆಟ್ ನೀಡಲಾಗಿದೆ. ಈ ಕಾರಣದಿಂದ ಎಚ್.ವಿಶ್ವನಾಥ್ ಅವರಿಗೆ ನೀಡಬೇಕಿತ್ತು, ಜತೆಗೆ ಎಲ್ಲಾ ಶಾಸಕರನ್ನು ವಿಶ್ವನಾಥ್ ಒಗ್ಗೂಡಿಸಿದ್ದರು ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.