ಭ್ರಷ್ಟರೇ ಸಿಎಂ ಆಗುತ್ತಾರೆ ಎಂದಿದ್ದ ಸಿದ್ದರಾಮಯ್ಯಗೆ ಶ್ರೀನಿವಾಸ್ ಪ್ರಸಾದ್ ತಿರುಗೇಟು
ಮೈಸೂರು, ಜುಲೈ 26: ಸಿಎಂ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದ ಬೆನ್ನಲ್ಲೆ ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ ಹಾಗೂ ಮುಂದೆ ಬರುವವರು ಭ್ರಷ್ಟರೇ ಆಗಿರುತ್ತಾರೆ ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಂಸದ ವಿ. ಶ್ರೀನಿವಾಸ್ ಪ್ರಸಾದ್, "ಸಿದ್ದರಾಮಯ್ಯ ಇವರೊಬ್ಬರೆ ಪ್ರಾಮಾಣಿಕರಾ? ಹಾಗಾದರೆ ಬೇರೆ ಯಾರನ್ನೂ ಸಿಎಂ ಮಾಡಬಾರದಾ? ಜವಾಬ್ದಾರಿಯುತವಾಗಿ ಮಾತನಾಡುವುದನ್ನು ಇನ್ನು ಸಿದ್ದರಾಮಯ್ಯ ಕಲಿತಿಲ್ಲ. ಅವರು ಬಾಲಿಷ ಹೇಳಿಕೆಗಳನ್ನು ಕೊಡುತ್ತಿದ್ದಾರೆ,'' ಎಂದು ಕಿಡಿಕಾರಿದ್ದಾರೆ.
"ಸಿಎಂ ಆಗಿದ್ದುಕೊಂಡೇ ಕಳೆದ ಚುನಾವಣೆಯಲ್ಲಿ ಸೋತರು, ಮಂತ್ರಿಗಳೆಲ್ಲ ಉದುರಿ ಹೋದರು. ಬಾದಾಮಿಯಲ್ಲಿ ಸೋತಿದ್ದರೆ ಸಿದ್ದರಾಮಯ್ಯ ಸ್ಥಿತಿ ಏನಾಗುತಿತ್ತು. ಇವರು ವಿರೋಧ ಪಕ್ಷದ ನಾಯಕ ಹೇಗಾಗಿದ್ದಾರೆ ಎಂಬುದು ಗೊತ್ತು. ನಾನೊಬ್ಬ ಹಿರಿಯ ನಾಯಕನಾಗಿದ್ದೆ. ನನ್ನನ್ನು ವ್ಯವಸ್ಥಿತವಾಗಿ ತುಳಿದರು. ಇದಕ್ಕೆ ಪ್ರತಿಯಾಗಿ ತಕ್ಕ ಪಾಠ ಕಲಿಸಿದ್ದೇನೆ. ಇವರ ಹೇಳಿಕೆಗಳೆಲ್ಲ ಬಾಲಿಷ,'' ಎಂದು ಸಿದ್ದರಾಮಯ್ಯ ವಿರುದ್ಧ ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದರು.