ರಾಜಕಾರಣಿಗಳಿಂದಲೇ ಡ್ರಗ್ಸ್ ದಂಧೆ: ಪ್ರಮೋದ್ ಮುತಾಲಿಕ್ ಗಂಭೀರ ಆರೋಪ
ಮೈಸೂರು, ಸೆಪ್ಟೆಂಬರ್ 10: ರಾಜ್ಯದಲ್ಲಿ ರಾಜಕಾರಣಿಗಳು ಮತ್ತು ಅವರ ಮಕ್ಕಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ. ಇದರಿಂದಲೇ ಇದು ಇಷ್ಟೊಂದು ದೊಡ್ಡದಾಗಿ ಬೆಳೆಯುವುದಕ್ಕೆ ಸಾಧ್ಯವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದರು. ಇಂದು ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರ ಮೇಲೆ ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೈಸೂರಿನ ಹೈಸ್ಕೂಲ್ ಮತ್ತು ಕಾಲೇಜುಗಳಲ್ಲಿ ಹೆರಾಯಿನ್, ಮಾದಕ ಪದಾರ್ಥ ಮಾರಾಟವಾಗುತ್ತಿದೆ ಎಂದರು.
ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದು, ಅವರ ಮಕ್ಕಳೂ ಇದರಲ್ಲಿ ಶಾಮೀಲಾಗಿದ್ದಾರೆ. ರಾಜಕಾರಣಿಗಳೇ ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ಸಾವಿರಾರು ಕೋಟಿ ದಂಧೆ ಮಾಡುತ್ತಿದ್ದಾರೆ. ಪ್ರಕರಣ ಹೊರ ಬಂದಾಗ ಜಾಮೀನು ಪಡೆದು ಹೊರಗೆ ಬರುತ್ತಾರೆ. ಬಳಿಕ ಇದೇ ರೀತಿ ಡ್ರಗ್ಸ್ ದಂಧೆ ಮಾಡುತ್ತಾರೆಂದು ಆರೋಪಿಸಿದರು. ಇವತ್ತಿನಿಂದ ನಾವು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಮೈಸೂರಿನ ಹಲವು ಕಾಲೇಜಿನಲ್ಲಿ ಈ ಜಾಲ ಇದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಜನಾಂದೋಲನ ಶುರು ಮಾಡುತ್ತೇವೆ ಎಂದು ಹೇಳಿದರು.
ಹಾಸ್ಟೆಲ್ ಗಳಲ್ಲಿ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ
ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಈಗಲೂ ಹಾಸ್ಟೆಲ್ ಗಳ ಮೇಲೆ ದಾಳಿ ಮಾಡಿ. ನಾನು ಚಾಲೆಂಜ್ ಮಾಡುತ್ತೇನೆ, ಹಾಸ್ಟೆಲ್ ಗಳನ್ನು ಚೆಕ್ ಮಾಡಿದರೆ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ ಎಂದು ಆರೋಪಿಸಿದರು. ತಮ್ಮ ಬಳಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿರುವ 32 ರಾಜಕಾರಣಿಗಳ ಪಟ್ಟಿ ಇದ್ದು, ಅದನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ರಾಕೇಶ್ ಸಿದ್ದರಾಮಯ್ಯ ಮೃತಪಟ್ಟಿದ್ದು ಡ್ರಗ್ ಸೇವನೆಯಿಂದ: ಮುತಾಲಿಕ್ ನೇರ ಆರೋಪ
ಲವ್ ಜಿಹಾದ್ ಮಾದರಿಯಲ್ಲಿ ಡ್ರಗ್ಸ್ ಜಿಹಾದ್
ಲವ್ ಜಿಹಾದ್ ಮಾದರಿಯಲ್ಲಿಯೇ ಡ್ರಗ್ಸ್ ಜಿಹಾದ್ ನಡೆಯುತ್ತಿದ್ದು, ಇದು ದೇಶಾದ್ಯಂತ ವ್ಯಾಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದರ ಮೂಲ ರೂವಾರಿಯಾಗಿದ್ದಾನೆ ಎಂಬ ಮಾಹಿತಿ ನೀಡಿದರು.
ಪಂಜಾಬ್, ಗುಜರಾತ್, ಗೋವಾ ಮೂಲಕ ಡ್ರಗ್ಸ್ ದೇಶಕ್ಕೆ ಪ್ರವೇಶಿಸುತ್ತಿದೆ. ಇದರಲ್ಲಿ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದವರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಹೊಂದಾಣಿಕೆಯ ರಾಜಕಾರಣದ ಮೂಲಕ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದರು.
ರಾಜ್ಯ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ಗಮನ ಸೆಳೆದಿದ್ದ ನನ್ನನ್ನೇ ಟಾರ್ಗೆಟ್ ಮಾಡಿದರು. ಆಗಲೇ ಇದನ್ನು ಮಟ್ಟ ಹಾಕಿದ್ದರೇ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಗೌರಿ ಲಂಕೇಶ್ ಸಾವಿನ ಬಗ್ಗೆ ಮಾತನಾಡಿದ್ದು ನೋವು ತಂದಿದೆ: ಇಂದ್ರಜಿತ್
ದೆಹಲಿ ಪೊಲೀಸರು ಬಂದು ದಾಳಿ ಮಾಡುವವರೆಗೂ ರಾಜ್ಯ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಗುಪ್ತಚರ ಇಲಾಖೆಯವರು ಕತ್ತೆ ಕಾಯುತ್ತಿದ್ದರಾ? ಎಂದು ಮೈಸೂರಿನಲ್ಲಿ ಮುತಾಲಿಕ್ ಪ್ರಶ್ನಿಸಿದರು.
ನಲಪಾಡ್ ಪ್ರಕರಣ ರೀ ಓಪನ್ ಮಾಡಿ ಕ್ರಮ ಕೈಗೊಳ್ಳಿ
ಇದರ ಜೊತೆಗೆ ಮಹಮ್ಮದ್ ನಲಪಾಡ್ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಶೋಭಾ ಕರಂದ್ಲಾಜೆ ಅವರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು. ಆದರೆ ಇಂದು ನಿಮ್ಮ ಸರ್ಕಾರ ಇದೆ. ಈಗ ನಲಪಾಡ್ ಪ್ರಕರಣ ರೀ ಓಪನ್ ಮಾಡಿ ಕ್ರಮ ಕೈಗೊಳ್ಳಿ ಎಂದು ಶೋಭಾ ಕರಂದ್ಲಾಜೆಗೆ ಮುತಾಲಿಕ್ ಸವಾಲು ಹಾಕಿದರು. ಡ್ರಗ್ಸ್ ನ ಹಣ ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೋಗಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು. ಇಂದ್ರಜಿತ್ ಹೇಗೆ ವಿಚಾರಣೆ ಮಾಡುತ್ತಿದ್ದಿರೋ ಅದೇ ರೀತಿ ಕುಮಾರಸ್ವಾಮಿ ಅವರನ್ನು ಕೂಡಾ ವಿಚಾರಣೆ ಮಾಡಿ ಎಂದು ಒತ್ತಾಯಿಸಿದರು.