ಬಿಸಿಲ ಬೇಗೆಯಲ್ಲೂ ಮೈಸೂರು ಮೃಗಾಲಯ ಕೂಲ್ ಕೂಲ್!
ಮೈಸೂರು, ಏಪ್ರಿಲ್ 5: ಬೇಸಿಗೆ ಕಾಲದ ಬಿಸಿಲ ತಾಪ ಜನರನ್ನು ಹೈರಾಣಾಗಿಸಿದೆ. ಇನ್ನು ಪ್ರಾಣಿಗಳ ಕಥೆ ಹೇಳುವುದೇ ಬೇಡ. ಆದರೆ, ಮೈಸೂರು ಮೃಗಾಲಯದ ಪ್ರಾಣಿ-ಪಕ್ಷಿಗಳು ಕೂಲ್ ಆಗಿದ್ದು, ಬಿಸಿಲ ಧಗೆ ತಪ್ಪಿಸಲು ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.
ಬಿಸಿಲ ಧಗೆಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕರು ಎಳನೀರು, ತಂಪು ಪಾನೀಯ, ಹಣ್ಣಿನ ಜ್ಯೂಸ್ ಮೊರೆ ಹೋಗಿದ್ದಾರೆ. ಸದ್ಯ ಮೈಸೂರಿನಲ್ಲಿ ತಾಪಮಾನ ಈಗಾಗಲೇ 35 ಡಿಗ್ರಿ ಸೆಲ್ಸಿಯಸ್ ಏರಿದೆ. ಹಾಗಾಗಿ ಮೃಗಾಲಯದಲ್ಲಿರುವ ಮೂಕ ಜೀವಿಗಳು ಪಡಿಪಾಟಲು ಪಡಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿದ್ದಾರೆ.
ಪ್ಲಾಸ್ಟಿಕ್ ನಿರ್ಮೂಲನೆಗೆ ಮೈಸೂರು ಮೃಗಾಲಯ ವಿನೂತನ ಉಪಾಯ
ಆನೆಗಳಿಗೆ ಶವರ್ ಬಾತ್, ಜಿರಾಫೆಗೆ ನೀರಿನ ಸಿಂಚನ, ಸಿಂಹಕ್ಕೆ ಕೃತಕ ಮಳೆ, ಕಾಡೆಮ್ಮೆಗೆ ಸ್ಪ್ರಿಂಕ್ಲರ್ ಮೂಲಕ ನೀರು ಹರಿಸಲಾಗುತ್ತಿದೆ. ಏಕರೂಪದ ಸ್ಥಳದಲ್ಲಿ ವಾಸಿಸುವ ಮೃಗಾಲಯದ ಪ್ರಾಣಿಗಳಿಗೆ ಬೇಸಿಗೆ ಕಾಡಬಾರದು ಎಂಬ ಉದ್ದೇಶದಿಂದ ತಂಪು ವಾತಾವಾರಣ ನಿರ್ಮಾಣ ಮಾಡಲಾಗಿದೆ.
ಮೈಸೂರು ಮೃಗಾಲಯದ ಪ್ರತಿ ಪ್ರಾಣಿಗಳ ಮನೆಗಳ ಬಳಿ ಸ್ಪ್ರಿಂಕ್ಲರ್ ಯಂತ್ರಗಳನ್ನು ಅಳವಡಿಸಲಾಗಿದೆ. ಅಲ್ಲದೆ ಆಯಾ ಪ್ರಾಣಿಗಳ ಮನೆ ಸಮೀಪ ಪ್ರಾಣಿಗಳಿಗೆ ಹೇಗೆ ಬೇಕೋ ಹಾಗೇ ನೀರನ್ನು ಸಿಂಪಡಿಸಲಾಗುತ್ತಿದೆ. ಆನೆಗಳಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿರುವ ಶವರ್, ಜಿರಾಫೆಗಳಿಗೆ ಎತ್ತರದಿಂದ ನೀರು ಬೀಳುವ ವ್ಯವಸ್ಥೆ ಮಾಡಲಾಗಿದೆ.
ಕಾಡೆಮ್ಮೆ, ಸಿಂಹ ಚಿರತೆ ಮನೆಗೆಳಿಗೆ ಸಣ್ಣ ಪ್ರಮಾಣದ ನೀರು ಸಿಂಪಡನೆಯಾಗುತ್ತಿದೆ. ಚಿಂಪಾಂಜಿಗಳಿಗೆ ಮಧ್ಯಾಹ್ನ ಎರಡೆರಡು ಎಳನೀರು, ಹಿಮಾಲಯನ್ ಕರಡಿಗಳಿಗೆ ಮೂಸಂಬಿ, ದ್ರಾಕ್ಷಿ, ಕಿತ್ತಳೆ ಜ್ಯೂಸ್ ನೀಡಲಾಗುತ್ತಿದೆ. ಆನೆಗಳಿಗೆ ಮಣ್ಣಿನ ಬಾತ್ನಲ್ಲಿ ಆಡಲು ಅವಕಾಶ ಕಲ್ಪಿಸಲಾಗಿದೆ. ಕರಡಿ ತಿನ್ನುವ ಹಣ್ಣುಗಳ ಮಧ್ಯೆ ಐಸ್ ಟ್ಯೂಬ್ ಇಡಲಾಗುತ್ತಿದೆ. ಮೃಗಾಲಯದಲ್ಲಿ ಹಸಿರು ಬೆಳೆಸಲು ಹೆಚ್ಚಿನ ಒತ್ತು ನೀಡಲಾಗಿದೆ.
"ಮಧ್ಯಾಹ್ನದ ವೇಳೆಗೆ ಅಂದರೆ 12 ಗಂಟೆಯಿಂದ 3 ಗಂಟೆಯ ಅವಧಿಯಲ್ಲಿ ಸ್ಪ್ರಿಂಕ್ಲರ್ಗಳನ್ನು ಆನ್ ಮಾಡಲಾಗುತ್ತದೆ. ಇದರಿಂದ ಚಿಮ್ಮುವ ನೀರಿನಲ್ಲಿ ಮೃಗಾಲಯದ ಪ್ರಾಣಿಗಳು ಸಖತ್ ಎಂಜಾಯ್ ಮಾಡುತ್ತಿವೆ. ಇದು ಪ್ರಾಣಿಗಳ ದೇಹದಲ್ಲಿನ ಉಷ್ಣಾಂಶವನ್ನು ಸರಾಸರಿಯಲ್ಲಿಡಲು ಸಹಾಯ ಮಾಡುತ್ತಿದೆ. ಅಲ್ಲದೆ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಎದುರಾಗಬಹುದಾದ ಅನಾರೋಗ್ಯ ಸಮಸ್ಯೆಯಿಂದಲೂ ದೂರ ಮಾಡಬಹುದಾಗಿದೆ," ಎಂದು ಮೃಗಾಲಯ ಕಾರ್ಯ ನಿರ್ವಾಹಕ ಅಧಿಕಾರಿ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.
ಬಿಸಿಲ ಬೇಗೆ ಪ್ರಾಣಿಗಳ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿ ಪ್ರಾಣಿ, ಪಕ್ಷಿಗಳಿಗೆ ನೀಡುವ ಆಹಾರದಲ್ಲಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ನಿಯಮಿತವಾಗಿ ನೀಡುವ ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಲಾಗಿದೆ. ಸಾಧ್ಯವಾದಷ್ಟು ಪ್ರಾಣಿ-ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ಹೆಚ್ಚು ಮಾಡುವ ಪದಾರ್ಥಗಳನ್ನೇ ಆಹಾರವಾಗಿ ನೀಡಲಾಗುತ್ತಿದೆ.
ಸಸ್ಯಾಹಾರಿ ಪ್ರಾಣಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಪದಾರ್ಥಗಳನ್ನು ನೀಡಲಾಗುತ್ತಿದೆ. ಎಳನೀರು ಸೇರಿದಂತೆ ದ್ರವರೂಪದ ಪದಾರ್ಥಗಳನ್ನು ನೀಡಲಾಗುತ್ತಿದೆ. ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಮೃಗಾಲಯ ಆಡಳಿತ ಮಂಡಳಿ ಈ ಕ್ರಮವನ್ನು ಕೈಗೊಂಡಿದ್ದು, ಬೇಸಿಗೆ ಮುಗಿಯುವರೆಗೂ ಈ ರೀತಿಯ ಆಹಾರ ನೀಡಲು ತೀರ್ಮಾನಿಸಿದೆ.
"ಮೃಗಾಲಯದ ಪ್ರಾಣಿಗಳು ವಾಸವಿರುವ ತಾಣವನ್ನು ಹಸಿರಿನಿಂದ ತಂಪಾಗಿ ಇಡಲಾಗಿದೆ. ಹುಲಿ, ಸಿಂಹ, ಆನೆ, ಚೀತಾ ಸೇರಿದಂತೆ ಇತರ ಪ್ರಾಣಿಗಳ ಮನೆಗಳನ್ನು ತಂಪಾಗಿ ಇಡಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ಬೇಸಿಗೆಯಲ್ಲೂ ಪ್ರಾಣಿಗಳನ್ನು ಕ್ರಿಯಾಶೀಲತೆಯಿಂದ ಇರಿಸಲು ಎಳನೀರು, ಹಣ್ಣುಗಳನ್ನು ಒದಗಿಸಲಾಗುತ್ತಿದೆ. ಎಲ್ಲೆಡೆ ಶೆಲ್ಟರ್ ನಿರ್ಮಾಣ ಮಾಡಲಾಗಿದೆ," ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ.