ರೋಹಿಣಿ ಸಿಂಧೂರಿ ವಿರುದ್ಧ ಅಧಿಕಾರಿಗಳಿಗೆ 1200 ಪುಟಗಳ ದಾಖಲೆ ನೀಡಿದ ಸಾರಾ ಮಹೇಶ್
ಮೈಸೂರು, ಆಗಸ್ಟ್ 19: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಕೆ.ಆರ್.ನಗರ ಶಾಸಕ ಸಾರಾ ಮಹೇಶ್ ನಡುವಿನ ಮುಸುಕಿನ ಗುದ್ದಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ . ಸಿಂಧೂರಿ ವಿರುದ್ಧದ ಅಕ್ರಮ, ಭ್ರಷ್ಟಾಚಾರ ಮತ್ತು ಕರ್ತವ್ಯಲೋಪಕ್ಕೆ ಸಂಬಂಧಿಸಿ ಐದು ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಸಮಿತಿಯೊಂದನ್ನು ನೇಮಕ ಮಾಡಿತ್ತು. ಇದೀಗ ವಿಚಾರಣಾಧಿಕಾರಿಯೂ ಆದ ವಸತಿ ಇಲಾಖೆ ಕಾರ್ಯದರ್ಶಿ ಡಾ.ಜೆ. ರವಿಶಂಕರ್ ಶುಕ್ರವಾರ ಮೈಸೂರಿನ ಡಿಸಿ ಕಚೇರಿಗೆ ಆಗಮಿಸಿ ಶಾಸಕ ಸಾ.ರಾ. ಮಹೇಶ್ ಹಾಗೂ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಚಾಮರಾಜನಗರದಲ್ಲಿ ಆಕ್ಸಿಜನ್ ಅಭಾವದಿಂದ ಸಂಭವಿಸಿದ ದುರಂತ, ನಿಯಮಬಾಹಿರವಾಗಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ, ಬಟ್ಟೆ ಬ್ಯಾಗ್ ಹಗರಣ, ಪಾರಂಪರಿಕ ಕಟ್ಟಡವಾದ ಜಿಲ್ಲಾಧಿಕಾರಿ ಕಚೇರಿ ನವೀಕರಣ ಹಾಗೂ ಕೋವಿಡ್ ನಿಂದ ಮೃತಪಟ್ಟವರ ಬಗ್ಗೆ ತಪ್ಪು ಮಾಹಿತಿ ನೀಡಿಕೆ ಬಗ್ಗೆ ಶಾಸಕ ಸಾ.ರಾ. ಮಹೇಶ್ 1200 ಕ್ಕೂ ಹೆಚ್ಚು ಪುಟಗಳ ಮಾಹಿತಿಯನ್ನು ತನಿಕಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ 1 ವರ್ಷ, ಕಣ್ಣೀರು ನಿಂತಿಲ್ಲ
ಇದೇ ವೇಳೆ ವಿಚಾರಣಾಧಿಕಾರಿಗಳು ಆರೋಪಗಳಿಗೆ ಸಂಬಂಧಿಸಿದಂತೆ ರೆವೆನ್ಯೂ, ಆರೋಗ್ಯ, ಲೋಕೋಪಯೋಗಿ ಇಲಾಖೆ, ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿಗಳಿಂದ ವೌಖಿಕವಾಗಿ ಚರ್ಚಿಸಿ ದಾಖಲೆಗಳನ್ನು ಪಡೆದುಕೊಂಡರು.
ಬಳಿಕ ಸಾ.ರಾ. ಮಹೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, " 2021 ರ ಜೂನ್ ತಿಂಗಳಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 219 ಎಂದು ಸರಕಾರಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ಆದರೆ ಆರೋಗ್ಯ ಇಲಾಖೆ ಹಾಗೂ ಸ್ಮಶಾನಗಳಿಂದ ಪಡೆದ ಮಾಹಿತಿ ಪ್ರಕಾರ ಆ ತಿಂಗಳಲ್ಲಿ 969 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ನನ್ನ ಹೋರಾಟದಿಂದ ಈ ಎಲ್ಲಾ ಮೃತರ ಕುಟುಂಬಕ್ಕೆ ರಾಜ್ಯ , ಕೇಂದ್ರ ಸರಕಾರದ ಪರಿಹಾರ ದೊರೆಯಲಿದೆ" ಎಂದರು.
ಮೈಸೂರು ಮಾಜಿ ಡಿಸಿ ಸಿಂಧೂರಿಗೆ ಮತ್ತೆ ಎದುರಾಯ್ತು ಸಂಕಷ್ಟ
ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ 28 ಕ್ಕೂ ಹೆಚ್ಚು ಮಂದಿ ಕೋವಿಡ್ನಿಂದ ಮೃತಪಟ್ಟರು. ಚಾಮರಾಜನಗರ ಜಿಲ್ಲಾಧಿಕಾರಿಗಳು ಆ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿ ಮೈಸೂರು ಜಿಲ್ಲಾಧಿಕಾರಿ ಆಕ್ಸಿಜನ್ ಸರಬರಾಜು ತಡೆ ಹಿಡಿದಿರುವುದೇ ದುರಂತಕ್ಕೆ ಕಾರಣ ಎಂದು ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರೋಹಿಣಿ ಅಧಿಕಾರಿಯೊಂದಿಗೆ ಮಾತನಾಡಿರುವ ಆಡಿಯೊ ಕೂಡ ಇದೆ. ಅಧಿಕಾರಿಗಳು ತಮ್ಮ ಸ್ವಹಿತಕ್ಕಾಗಿ ಜೀವಗಳೊಂದಿಗೆ ಚೆಲ್ಲಾಟವಾಡಿದ್ದು ಸರಿಯಲ್ಲ ಎಂದು ಕಿಡಿ ಕಾರಿದರು.
"ತನಿಖಾಧಿಕಾರಿಗಳು ಶಾಸಕರು ಹಾಗೂ ಅಧಿಕಾರಿಗಳಿಂದ ಸಂಗ್ರಹಿಸಿರುವ ಈ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ಪರಾಮರ್ಶೆ ಮಾಡಿ ಮುಂದಿನ 30 ದಿನಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಇದರ ಆಧಾರದಲ್ಲಿ ಆರೋಪಕ್ಕೆ ಒಳಗಾಗಿರುವ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಈ ಆರೋಪಗಳು ಸಾಬೀತಾದಲ್ಲಿ ರೋಹಿಣಿ ಅವರನ್ನು ಕೆಲಸದಿಂದ ವಜಾಗೊಳಿಸುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಈ ವಿಚಾರಣೆಯಿಂದ ನ್ಯಾಯ ದೊರೆಯದಿದ್ದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಯುತ್ತದೆ. ಮಾತ್ರವಲ್ಲದೇ ಈ ಕುರಿತು ವೈಯಕ್ತಿಕವಾಗಿ ನಾನು ಸಾರ್ವಜನಿಕ ಹೋರಾಟವನ್ನು ಮುಂದುವರಿಸುತ್ತೇನೆ," ಎಂದು ಸಾರಾ ತಿಳಿಸಿದ್ದಾರೆ.
Recommended Video