ಆಷಾಢ ಶುಕ್ರವಾರ, ಚಾಮುಂಡೇಶ್ವರಿಗೆ ನಮೋ ಎಂದ ಜನಸಾಗರ
ಮೈಸೂರು, ಜೂನ್ 30 : ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಆಷಾಡ ಶುಕ್ರವಾರ ಸಂಭ್ರಮ ಮನೆ ಮಾಡಿದೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನಕ್ಕೆ ಹಾತೊರೆಯುತ್ತಿದ್ದಾರೆ.
ಇಂದು ಮುಂಜಾನೆ ಸುಮಾರು ಎರಡು ಗಂಟೆಯಿಂದಲೇ ಚಾಮುಂಡಿಬೆಟ್ಟದತ್ತ ತೆರಳುತ್ತಿರುವ ಭಕ್ತರು ಹೇಗಾದರಾಗಲಿ ದೇವಿಯ ದರ್ಶನ ಪಡೆದೇ ತೀರಬೇಕೆಂಬ ಸಂಕಲ್ಪತೊಟ್ಟು ಚಾಮುಂಡೇಶ್ವರಿ ತಾಯಿಗೆ ನಮೋ ಎನ್ನುತ್ತಿದ್ದಾರೆ.
ಆಷಾಢ ಮಾಸದ ಮೊದಲ ಶುಕ್ರವಾರಕ್ಕೆ ರಾಜ್ಯ ಮೂಲೆ ಮೂಲೆಗಳಿಂದ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದು ಇಂದು ಮುಂಜಾನೆ 3 ಗಂಟೆಗೆ ಚಾಮುಂಡಿ ತಾಯಿಗೆ ರುದ್ರಾಭಿಷೇಕ, ಪಂಚಾಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಆಷಾಡ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ತೆರಳೋರು ಗಮನಿಸಿ..
ಬಳಿಕ ಬೆಳಗ್ಗೆ 5.30ಕ್ಕೆ ಸಾರ್ವಜನಿಕ ದರ್ಶನಕ್ಕೆ ಆವಕಾಶ ಮಾಡಿಕೊಟ್ಟಿದ್ದು ರಾತ್ರಿ 10 ಗಂಟೆಯ ತನಕ ತಾಯಿಯ ದರ್ಶನದ ವ್ಯವಸ್ಥ ಕಲ್ಪಿಸಕೊಡಲಾಗಿದೆ.
ನಾಡ ಅಧಿದೇವತೆಯಾಗಿ ಚಾಮುಂಡಿಬೆಟ್ಟದ ಮೇಲೆ ನೆಲೆನಿಂತಿರುವ ಚಾಮುಂಡೇಶ್ವರಿಯನ್ನು ಆಷಾಡದಲ್ಲಿ ಅದರಲ್ಲೂ ಶುಕ್ರವಾರದಂದು ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆಯಲ್ಲದೆ ಆಯುರಾರೋಗ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.
ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ ಇಂತಹ ಸಂದರ್ಭದಲ್ಲಿ ಶಕ್ತಿ ದೇವತೆ ದರ್ಶನ ಪಡೆದರೆ ಒಳಿತಾಗುತ್ತದೆ. ಅದರಲ್ಲೂ ಜ್ಞಾನ ಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಇರುವ ಚಾಮುಂಡಿತಾಯಿಗೆ ಆಷಾಢ ಮಾಸದಲ್ಲಿ ಪೂಜೆ ಸಲ್ಲಿಸಿದರೆ ಒಳ್ಳೆಯಾದಗುತ್ತದೆ ಎಂದು ಪ್ರಧಾನ ಅರ್ಚಕ ಶಶಿಧರ್ ದೀಕ್ಷಿತ್ ತಿಳಿಸಿದರು.
ಮೊದಲ ಆಷಾಢ ಶಕ್ರವಾರದ ಸಂಭ್ರಮ ಹಿನ್ನಲೆಯಲ್ಲಿ ಭಕ್ತರಿಗೆ ಸಂಘ ಸಂಸ್ಥೆಗಳಿಂದ ಪ್ರಸಾದ ವಿನಿಯೋಗ ನಡೆಯುತ್ತಿದೆ.ಲಕ್ಷಾಂತರ ಮಂದಿಗೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರಸಾದ ವ್ಯವಸ್ಥೆ.ವಿವಿಧ ರೀತಿಯಷವಾದ ಪುಷ್ಪಾಲಂಕಾರ ಮಾಡಿದ್ದು ಮುಂಜಾನೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಶ್ರದ್ದ ಭಕ್ತಿಯಿಂದ ತಾಯಿಯ ದರ್ಶನ ಪಡೆಯುತ್ತಿದ್ದಾರೆ.