ಚಾಮುಂಡಿಬೆಟ್ಟದಲ್ಲಿ ವೈಭವದ ಮೊದಲ ಆಷಾಢ ಶುಕ್ರವಾರ ಪೂಜಾ ಮಹೋತ್ಸವ
ಮೈಸೂರು, ಜುಲೈ 5: ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ವೈಭವವಾಗಿ ನಡೆಯುತ್ತಿರುವ ವಿಶೇಷ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದು ಸಂಪನ್ನರಾಗುತ್ತಿದ್ದಾರೆ.
ದೇಗುಲದಲ್ಲಿ ಬೆಳಗಿನ ಜಾವ 3.30ರಿಂದಲೇ ವಿಶೇಷ ಪೂಜೆಗಳು ಆರಂಭಗೊಂಡಿವೆ. ಪ್ರಧಾನ ಅರ್ಚಕ ಎನ್.ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಚಾಮುಂಡಿ ದೇವಿಗೆ ಮಹನ್ಯಾಸಪೂರ್ವ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಸಹಸ್ರ ನಾಮಾರ್ಚನೆ ನಡೆದವು. ಬೆಳಿಗ್ಗೆ 5.30ರಿಂದ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ರಾತ್ರಿ 10ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟ ಕಾರಣ, ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.
ಆಷಾಢ ಶುಕ್ರವಾರ ಚಾಮುಂಡಿಗೆ ನೈವೇದ್ಯಗೊಳ್ಳಲಿದೆ ಲಡ್ಡು
ಮುಂಜಾನೆಯಿಂದಲೇ ಬೆಟ್ಟಕ್ಕೆ ಕಾಲ್ನಡಿಗೆ, ಮೆಟ್ಟಿಲು ಹತ್ತಿ ಅನೇಕ ಭಕ್ತರು ಬರುವುದನ್ನು ನಿರೀಕ್ಷಿಸಿದ್ದ ಕಾರಣ, ಖಾಸಗಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಬೆಟ್ಟದಲ್ಲಿ ಧರ್ಮ ದರುಶನ 59ರ ಟಿಕೆಟ್ ಹಾಗೂ 300ರೂ ಅಭಿಷೇಕದ ಟಿಕೆಟ್ ಪಡೆದವರಿಗೆಂದೇ ಪ್ರತ್ಯೇಕವಾದ 3 ಸಾಲುಗಳು ಇರಲಿವೆ. ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಭಕ್ತರು ಸಾವಧಾನವಾಗಿ ವರ್ತಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ. ಕೆಎಸ್ ಆರ್ಟಿಸಿ ಬಸ್ ನಿಲ್ದಾಣದಿಂದ ನಿತ್ಯ 12ರಿಂದ 15 ಬಸ್ಗಳು ಬೆಟ್ಟಕ್ಕೆ ಸಂಚರಿಸುತ್ತಿದ್ದವು. ಹೆಲಿಪ್ಯಾಡ್ ನಿಂದ 25 ಬಸ್ಗಳು ಹೊರಡಲಿದ್ದು, ಇಲ್ಲಿಂದ ಹೊರಡುವವರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಬೆಟ್ಟದಿಂದ ರಾತ್ರಿ ಭಕ್ತರೆಲ್ಲರೂ ನಿರ್ಗಮಿಸುವವರೆಗೂ ಬಸ್ಗಳು ಸಂಚರಿಸಲಿವೆ.
ದೇವಸ್ಥಾನಕ್ಕೆ ಬರುವ ಅಂಗವಿಕಲರಿಗೆ, ವೃದ್ಧರಿಗೆ ಉಚಿತ ಎಲೆಕ್ಟ್ರಿಕ್ ವಾಹನಗಳ ವ್ಯವಸ್ಥೆ ಮಾಡಿದ್ದು, ಮಹಿಷಾಸುರ ಪ್ರತಿಮೆಯಿಂದ ದೇವಸ್ಥಾನದವರೆಗೆ ಈ ವ್ಯವಸ್ಥೆ ಇರುತ್ತದೆ. ಪ್ರಸಾದ ವಿನಿಯೋಗದ ವಾಹನಗಳಿಗೆ ಜಿಲ್ಲಾಡಳಿತದಿಂದ ನೀಡುವ ಪಾಸ್ ಕಡ್ಡಾಯವಾಗಿದೆ. ನಿಗದಿಪಡಿಸಿದ ಸಮಯದಲ್ಲಿಯೇ ಪ್ರಸಾದ ವಿನಿಯೋಗ ಮಾಡಬೇಕು ಹಾಗೂ ಆಹಾರ ನಿರೀಕ್ಷಕರ ಪರಿಶೀಲನೆ ನಂತರವೇ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸುವುದು ಕಡ್ಡಾಯ ಎಂದು ಪೊಲೀಸರು ಸೂಚಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಪೂಜೆಗೆ ಭಾರಿ ಬಂದೋಬಸ್ತ್
ವಿವಿಧ ಹರಕೆಗಳನ್ನು ತೀರಿಸಲೆಂದೇ ಭಕ್ತರು ಬೆಟ್ಟದ ಮೆಟ್ಟಿಲುಗಳನ್ನು ಹತ್ತಿದರು. ಬೆಟ್ಟದ ಎಲ್ಲ ಮೆಟ್ಟಿಲುಗಳಿಗೂ ಅರಿಶಿನ - ಕುಂಕುಮ ಹಚ್ಚಿ, ದೀಪ ಬೆಳಗಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮೆಟ್ಟಿಲು ಹತ್ತಿ ಸಂಭ್ರಮಿಸಿದರು. ದೇಗುಲವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಹೂವುಗಳಿಂದ ಸಿಂಗರಿಸಲಾಗಿತ್ತು. ನಾಲ್ಕು ಬಣ್ಣದ ಸೇವಂತಿಗೆ ಹೂವು, ಎರಡು ಬಣ್ಣದ ಚೆಂಡು ಹೂವಿನಿಂದ ದೇವಾಲಯದ ಪ್ರಾಂಗಣ, ಗರ್ಭಗುಡಿಯ ಮುಂಭಾಗದ ಆವರಣವನ್ನು ಅಲಂಕರಿಸಲಾಗಿತ್ತು.
ಬೆಳಿಗ್ಗೆ ಬೆಟ್ಟಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಸಚಿವ ಜಿ.ಟಿ. ದೇವೇಗೌಡ ಆಗಮಿಸಿ ದೇವಿಯ ದರ್ಶನ ಪಡೆದರು.