ಮೋದಿ ಗೆಲುವಿಗೆ ಮೈಸೂರಿನಲ್ಲಿ ಹೋಮ–ಹವನ
ಮೈಸೂರು, ಮೇ 22 : ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮುನ್ನಡೆಸಬೇಕು ಹಾಗೂ ಈ ರಾಷ್ಟ್ರದ ನೇತೃತ್ವ ವಹಿಸಬೇಕು ಎಂದು ವಿವಿಧ ಸಂಘ- ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಗರದ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ವಿಜಯ ದುರ್ಗಾ ಹೋಮ ಮತ್ತು ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ನರೇಂದ್ರ ಮೋದಿ ಅಭಿಮಾನಿ ಬಳಗದ ಅಧ್ಯಕ್ಷ ಜಯಸಿಂಹ ಶ್ರೀಧರ್ ಮಾತನಾಡಿ, ನರೇಂದ್ರ ಮೋದಿಯವರ 5 ವರ್ಷದ ಆಡಳಿತ ಅತ್ಯಂತ ತೃಪ್ತಿದಾಯಕವಾಗಿದ್ದು, ಅವರು 2019ರ ಲೋಕಸಭಾ ಚುನಾವಣೆಯಲ್ಲಿ, 7 ಹಂತಗಳಲ್ಲಿ 3 ಲಕ್ಷ ಕಿ.ಮೀ.ಪ್ರಯಾಣ ಮಾಡಿ 154 ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ದೇಶಭಕ್ತ ಮೋದಿಯವರಿಗೆ ಒಳ್ಳೆಯದಾಗಲಿ. ಮತ್ತೆ ಅವರು ಪ್ರಧಾನಮಂತ್ರಿಗಳಾಗಿ ಸುಭದ್ರ ಸರ್ಕಾರ ನೀಡಿ ದೇಶವನ್ನು ಮುನ್ನಡೆಸಲಿ. ಅವರೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಆಶಿಸಿ ಹೋಮ-ಪೂಜೆಗಳನ್ನು ಮಾಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಮತದಾರರ ಬಲದೊಂದಿಗೆ ದೈವಬಲವೂ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಮೋದಿಗಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ವಿಶೇಷ ಪೂಜೆ
ಇದರೊಟ್ಟಿಗೆ ಮೈಸೂರಿನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೂ ಬಿಜೆಪಿ ಕಾರ್ಯಕರ್ತರಿಂದ ಮೋದಿಯವರಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್ ನೇತೃತ್ವದಲ್ಲಿ ಪೂಜೆ ನಡೆಯಿತು.