ದಸರೆಯ ಆನೆಗಳಿಗೆ ಬೆಣ್ಣೆಮಿಶ್ರಿತ ಪುಷ್ಕಳ ಭೋಜನ; ಹೀಗಿದೆ ಆನೆಗಳ ಆಹಾರಕ್ರಮ
ಮೈಸೂರು, ಆಗಸ್ಟ್ 31:ನಾಡಹಬ್ಬಕ್ಕಾಗಿ ನಗರದಲ್ಲಿ ಬೀಡುಬಿಟ್ಟಿರುವ ಅರ್ಜುನ ನೇತೃತ್ವದ ಗಜಪಡೆಗೆ ಪ್ರತಿದಿನ ಪೌಷ್ಟಿಕ ಆಹಾರ ನೀಡುವುದರೊಂದಿಗೆ ಅವುಗಳ ಸಾಮರ್ಥ್ಯವನ್ನು ವೃದ್ಧಿಸುವ ಕೆಲಸ ಭರದಿಂದ ಸಾಗುತ್ತಿದೆ. ಇತ್ತ ಜಂಬೂಸವಾರಿಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಆನೆಗಳಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ನೀಡಲಾಗುವ ಪೌಷ್ಟಿಕ ಆಹಾರದ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ.
ನಾಡಹಬ್ಬ ದಸರಾ ಪೋಸ್ಟರ್, ವೆಬ್ ಸೈಟ್ ಬಿಡುಗಡೆ
ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಿಂದ, ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ 4 ಕಿ.ಮೀ. ಕ್ರಮಿಸುವ ದಸರಾ ಆನೆಗಳಿಗೆ ಭೂರಿ ಭೋಜನವನ್ನು ನೀಡಿ ಸಾಮರ್ಥ್ಯ ವೃದ್ಧಿಗೆ ಆರೈಕೆ ಮಾಡಲಾಗುತ್ತಿದೆ. ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲು ಆನೆಗಳಿಗೆ ಬಲ ತುಂಬುವ ಕೆಲಸವನ್ನು ಅರಣ್ಯ ಇಲಾಖೆ ನೆರವೇರಿಸುತ್ತಿದೆ.
ಸದ್ಯಕ್ಕೆ ಪ್ರತಿದಿನ ಎರಡು ಬಾರಿ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಮುಂಜಾನೆ ಹಾಗೂ ಸಂಜೆಗೆ ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸುಬಲಕ್ಕಿ, ಈರುಳ್ಳಿ ಬೇಯಿಸಿ ಮಿಶ್ರಣ ಮಾಡಿ ಅದಕ್ಕೆ ಹಸಿ ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಗೆಡ್ಡೆಕೋಸು, ಸೌತೆಕಾಯಿ ತುಂಡುಗಳೊಂದಿಗೆ ನೀಡಲಾಗುತ್ತಿದೆ. ಆನೆಗಳಿಗೆ ಅಡುಗೆ ತಯಾರಿಸಲು ಅತಿ ಕಾಳಜಿ ವಹಿಸಲಾಗುತ್ತಿದ್ದು, ಆನೆ ಉಸ್ತುವಾರಿ ಸಹಾಯಕ ರಂಗರಾಜು ಆಹಾರ ತಯಾರಿಕೆ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದಾರೆ. ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಆಹಾರ ತಯಾರಿಕಾ ವಿಭಾಗದಲ್ಲಿ ಆನೆಗಳಿಗೆ ಅಡುಗೆ ತಯಾರಿಸಲಾಗುತ್ತಿದೆ.
ಒಂದ ದೊಡ್ಡ ಪಾತ್ರೆಯಲ್ಲಿ ಉದ್ದಿನ ಕಾಳು, ಗೋಧಿಯನ್ನು ಮೊದಲು ಬೇಯಿಸಿ ಆ ಪಾತ್ರೆಗೆ ಹೆಸರು ಕಾಳು, ಕುಸುಬಲಕ್ಕಿ, ಈರುಳ್ಳಿಯೊಂದಿಗೆ ಎರಡೂವರೆ ಗಂಟೆಗಳ ಕಾಲ ಕುದಿಸಲಾಗುತ್ತದೆ. ಬಳಿಕ ಒಂದು ಗಂಟೆ ಇದನ್ನು ಹದ ಮಾಡಲಾಗುತ್ತದೆ. ನಂತರ ಬೇಯಿಸಿದ ಧಾನ್ಯವನ್ನು ಟ್ರೇಗೆ ಹಾಕಿ ಮುದ್ದೆ ಕಟ್ಟಿ ತಾಲೀಮು ಹೊರಡುವ ವೇಳೆ ಅವುಗಳಿಗೆ ಉಂಡೆಯ ರೂಪದಲ್ಲಿ ನೀಡಲಾಗುತ್ತದೆ.
ರಾತ್ರಿ ಆಹಾರ ಪದಾರ್ಥಗಳನ್ನು ಬೇಯಿಸಿ ದಾಸ್ತಾನು ಕೊಠಡಿಯಲ್ಲಿಟ್ಟು ಬೀಗ ಜಡಿಯಲಾಗುತ್ತದೆ. ಮುಂಜಾನೆ ಅದನ್ನು ಮುದ್ದೆ ಕಟ್ಟಿ ತಾಲೀಮು ಹೊರಡುವ ಮುಂಚೆ ಎಲ್ಲ ಆನೆಗಳಿಗೂ ನೀಡಲಾಗುತ್ತದೆ. ಹೀಗೆ ಪ್ರತಿ ದಿನ ಎರಡು ಬಾರಿ ಆನೆಗಳ ಆಹಾರ ತಯಾರಿಗೆ 70ಕೆ.ಜಿ ಕಾಳು ಹಾಗೂ 70 ಕೆ.ಜಿ ತರಕಾರಿಯನ್ನು ಬಳಸಲಾಗುತ್ತಿದೆ.
ಜಂಬೂಸವಾರಿ ಮಾರ್ಗದಲ್ಲಿ ವಾಕ್ ಮಾಡಿ ಸಮಸ್ಯೆ ಕೇಳಿದ ಸಚಿವ ಸೋಮಣ್ಣ
ಅಂಬಾರಿ ಆನೆ ಅರ್ಜುನನಿಗೆ ಒಮ್ಮೆಗೆ 25 ರಿಂದ 30 ಕೆ.ಜಿ. ಆಹಾರ ನೀಡಲಾಗುತ್ತದೆ. ಇದರೊಂದಿಗೆ ಹೆಣ್ಣಾನೆಗಳನ್ನು ಹೊರತುಪಡಿಸಿ ಗಂಡಾನೆಗೆ ಅರ್ಧ ಕೆ.ಜಿ.ಯಂತೆ ದಿನಕ್ಕೆ1 ಕೆ.ಜಿ. ಬೆಣ್ಣೆ ನೀಡಲಾಗುತ್ತದೆ. ಆದರೆ ಅರ್ಜುನ ಪ್ರತಿ ದಿನಕ್ಕೆ ಒಂದೂವರೆ ಕೆ.ಜಿ. ಬೆಣ್ಣೆ ತಿನ್ನುತ್ತಾನೆ. ಪೌಷ್ಟಿಕ ಆಹಾರದ ಜೊತೆಗೆ ಆನೆಗೆ ದಿನಕ್ಕೆ 40 ರಿಂದ 400 ಕೆ.ಜಿ. ಆಲದ ಸೊಪ್ಪು, 250 ಕೆ.ಜಿ. ಹುಲ್ಲು, 50 ಕೆ.ಜಿ. ಭತ್ತದ ಹುಲ್ಲು ನೀಡಲಾಗುತ್ತದೆ.