ಮೈಸೂರಿನ ಸರಕಾರಿ ಶಾಲೆ ಮಕ್ಕಳಿಗೆ ಸ್ಪೇನ್ ನಿಂದ ಬಂದವರ ಪಾಠ
ಮೈಸೂರು, ಜುಲೈ 19 : ಸುಣ್ಣ ಬಣ್ಣ ಕಾಣದ ಸರಕಾರಿ ಶಾಲೆಯ ಗೋಡೆಗಳ ಮೇಲೆ ಅಂದವಾದ ಚಿತ್ತಾರಗಳು ಮೂಡಿ ಬಂದಿದ್ದವು. ಆಟದ ಮೈದಾನ ಸ್ವಚ್ಛವಾಗಿ, ಆಕರ್ಷಕವಾಗಿತ್ತು. ಪಾಠದ ಜೊತೆಗೆ ಆಟಗಳನ್ನು ಆಡುತ್ತಾ, ಚಿತ್ರ ಬಿಡಿಸುತ್ತಾ ಹೊಸತನ್ನು ಕಲಿಯುವ ವಾತಾವರಣ ಶಾಲೆಯಲ್ಲಿತ್ತು.
ಸ್ಪೇನ್ ವಿದ್ಯಾರ್ಥಿಗಳಾದ ಸಾರಾ, ಮಾರ್ಥ,ಲೂಸಿಯಾ, ಪ್ಲಾನಿಕಾ ಇವರ ನೇತೃತ್ವದಲ್ಲಿ ಬಂದಿರುವ ದ್ವಿತೀಯ ಪಿಯುಸಿಯ 15 ವಿದ್ಯಾರ್ಥಿಗಳ ತಂಡ ಇಲ್ಲಿನ ವಿನಾಯಕನಗರ ಬಡಾವಣೆಯ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳಿಗೆ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಪಾಠ ಮಾಡುವುದರ ಜೊತೆಗೆ ಭಾರತದ ಸಂಸ್ಕೃತಿಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳಿಗೆ ಕಿಟ್ ನೀಡಿದ ಸ್ಯಾಮ್ ಸಂಗ್!
'ಮಕ್ಕಳೇ ನಿತ್ಯ ಬೆಳಿಗ್ಗೆ ಎದ್ದಿದ್ದೇ ಹಲ್ಲು ಉಜ್ಜಿ, ಮುಖ ತೊಳೆಯಬೇಕು. ನಿತ್ಯ ಸ್ನಾನ ಮಾಡಬೇಕು. ಆಹಾರ ತಿನ್ನುವ ಮೊದಲು ಕೈ ತೊಳೆಯಬೇಕು. ಶುದ್ಧವಾದ ಬಟ್ಟೆ ಧರಿಸಿ, ಸ್ವಚ್ಛವಾಗಿದ್ದರೆ ರೋಗ ಬರುವುದಿಲ್ಲ' ಎಂದು ತಿಳಿ ಹೇಳುತ್ತಿದ್ದಾರೆ.
ಸ್ಪೇನ್ ನಿಂದ ಬಂದು ಇಲ್ಲಿ ಪಾಠ ಮಾಡಿದರೆ, ಕನ್ನಡ ಮಾತಾಡುವ ಮಕ್ಕಳಿಗೆ ಹೇಗೆ ಅರ್ಥ ಆಗುತ್ತದೆ ಎಂಬ ಪ್ರಶ್ನೆ ನಿಮ್ಮದಾದರೆ, ಮುಖ್ಯೋಪಾಧ್ಯಾಯಿನಿ ಅವರು ನೆರವಾಗುತ್ತಿರುವ ವಿಷಯ ಹೇಳಲೇಬೇಕು. ರುಕ್ಮಿಣಿ ಅವರು ದುಭಾಷಿಗಳಾಗಿ ಸಹಾಯ ಮಾಡುತ್ತಿದ್ದಾರೆ.
ಸ್ಪೇನ್ ನ ಇಪ್ಪತ್ನಾಲ್ಕು ವಿದ್ಯಾರ್ಥಿಗಳು
ಬೆಂಗಳೂರಿನ ಎಫ್ಎಸ್ಎಲ್ ಇಂಡಿಯಾ' ಸಂಸ್ಥೆ ವತಿಯಿಂದ ನಗರಕ್ಕೆ ಬಂದಿರುವ ಸ್ಪೇನ್ ದೇಶದ 24 ವಿದ್ಯಾರ್ಥಿಗಳು ಬೆಂಗಳೂರು, ಮೈಸೂರು ಹಾಗೂ ಹುಣಸೂರು ತಾಲೂಕಿನ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಪಠ್ಯೇತರ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಸ್ತ್ರೀಶಕ್ತಿ ಕೇಂದ್ರಕ್ಕೆ ಭೇಟಿ
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇರುವ ಸರಕಾರದ ಯೋಜನೆಗಳ ಬಗ್ಗೆ ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದ ಸ್ತ್ರೀಶಕ್ತಿ ಸ್ವಯುಂ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಮಹಿಳೆಯರು ಸಿದ್ಧಪಡಿಸಿರುವ ಬ್ಯಾಸ್ಕೆಟ್ ಗಳು, ಓಲೆಗಳು ಇತ್ಯಾದಿ ಕರಕುಶಲ ವಸ್ತುಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಅವುಗಳ ಮಾರುಕಟ್ಟೆಯ ಬಗ್ಗೆ ಅಧ್ಯಯನ ಮಾಡಿದ್ದಾರೆ.
ಸಮವಸ್ತ್ರ, ಬಿಸಿಯೂಟದ ಬಗ್ಗೆ ಮೆಚ್ಚುಗೆ
ದೇಶದ ಶಿಕ್ಷಣ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡುವ ಸಲುವಾಗಿ ಭೇಟಿ ನೀಡಿರುವ ವಿದೇಶೀಯರು ರಾಜ್ಯದಲ್ಲಿ ಸರಕಾರಿ ಶಾಲೆಯ ಮಕ್ಕಳಿಗೆ ನೀಡುತ್ತಿರುವ ಸಮವಸ್ತ್ರ, ಬಿಸಿಯೂಟ, ಅಕ್ಷರ ದಾಸೋಹ ಇವುಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವೇನ್ ನಲ್ಲೂ ಶಿಕ್ಷಣ ವ್ಯವಸ್ಥೆ ಹೀಗೆ ಇದ್ದರೂ ವಿದ್ಯಾರ್ಥಿಗಳಿಗೆ ಸವಲತ್ತುಗಳು ಇಲ್ಲ.
ನಿಮಗೆ ಸರಕಾರದಿಂದ ಇಷ್ಟೆಲ್ಲಾ ಸಮಲತ್ತುಗಳು ಸಿಕ್ಕಿವೆ. ನೀವೇ ಭಾಗ್ಯವಂತರು ಎಂದು ಹೇಳಿದ್ದಾರೆ.
ಗೋಡೆಗಳಿಗೆ ಬಣ್ಣ ಹಾಕಿದ ವಿದೇಶೀಯರು
ಹಲವು ವರ್ಷಗಳಿಂದ ಬಣ್ಣ ಕಾಣದ ಕೊಠಡಿಯ ಗೋಡೆ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಿದ್ದಾರೆ. ಮಕ್ಕಳಿಗೆ ಚಿತ್ರಕಲೆಯನ್ನೂ ಕಲಿಸುತ್ತಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ರುಕ್ಮಿಣಿ ಮಾತನಾಡಿ, ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯ ವಿದೇಶೀಯರಿಂದ ನಡೆಯುತ್ತಿದೆ. ಅವರು ಈ ಶಾಲೆಯನ್ನೇ ಆಯ್ಕೆ ಮಾಡಿಕೊಂಡು ಮಕ್ಕಳಿಗೆ ಪಾಠ ಮಾಡುತ್ತಿರುವುದು ಖುಷಿ ತಂದಿದೆ ಎನ್ನುತ್ತಾರೆ. ಮಕ್ಕಳೂ ತನ್ಮಯರಾಗಿ ಪಾಠವನ್ನು ಕಲಿಯುತ್ತಿದ್ದಾರೆ.