ವಿದ್ಯುತ್ ಕಂಬ ಮುಕ್ತ ನಗರವಾಗಲಿದೆಯೇ ಮೈಸೂರು?
ಮೈಸೂರು, ಜೂನ್ 18: ಮಳೆ, ಗಾಳಿ ಬಂತೆಂದರೆ ಸಾಕು ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ತೊಂದರೆಯಾಗುವುದು ಸಹಜ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಒಂದೆಡೆ ಮಹಾನಗರ ಪಾಲಿಕೆ ಹಳೆ ಮರಗಳನ್ನು ಕತ್ತರಿಸಲು ಮುಂದಾದರೆ, ಮತ್ತೊಂದೆಡೆ ಮೈಸೂರನ್ನು ವಿದ್ಯುತ್ ಕಂಬ ಮುಕ್ತ ನಗರವನ್ನಾಗಿ ಮಾಡಲು ಸೆಸ್ಕ್ ಮುಂದಾಗಿದೆ.
ಮಳೆ ಸುರಿದ ಸಂದರ್ಭ ಅಥವಾ ಅನೇಕ ವೇಳೆ ಟೆನ್ಷನ್ ಲೈನ್ ನಿಂದ ಹಲವು ಅಪಾಯಗಳು ಸಂಭವಿಸುತ್ತಿವೆ. ಇದನ್ನು ಮನಗಂಡ ಸೆಸ್ಕ್ ಈ ವಿದ್ಯುತ್ ಕಂಬಗಳೇ ಇಲ್ಲವಾದಂತೆ ಮಾಡುವ ಹೊಸ ಯೋಜನೆಗೆ ಅಣಿಯಾಗಿದೆ. ಮೈಸೂರು ನಗರ ಮತ್ತು ಹೊರವಲಯದ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕಂಬಗಳ ಬದಲಿಗೆ ಅಂಡರ್ ಗ್ರೌಂಡ್ ಕರೆಂಟ್ ಕನೆಕ್ಷನ್ ಕಲ್ಪಿಸುವ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಚಿಕ್ಕಮಗಳೂರಿನಲ್ಲಿ ನಿರಂತರ ಮಳೆಗೆ ಮರ, ಕಂಬಗಳು ರಸ್ತೆಪಾಲು
ವಿದ್ಯುತ್ ಕಂಬ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಈಗಾಗಲೇ ಬರೋಬ್ಬರಿ 300 ಕೋಟಿ ರೂಪಾಯಿಯ ಪೈಲೆಟ್ ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡಿದೆ. ಮಾಡೆಲ್ ಸಬ್ ಡಿವಿಷನ್ ಹೆಸರಿನ ಯೋಜನೆಯಡಿ ಹೈಟೆನ್ಷನ್ ಮತ್ತು ಲೋಟೆನ್ಷನ್ ಲೈನ್ ಸಂಪರ್ಕವನ್ನು ಮಣ್ಣಿನ ಆಳದೊಳಗೆ ಅಗೆದು ಭೂಮಿಯೊಳಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ.
ಈಗಾಗಲೇ ನಗರದ ಹಲವೆಡೆ ಸೆಸ್ಕ್ ಕಾಮಗಾರಿ ನಡೆಸುತ್ತಿದೆ. ಮೂರು ಹಂತಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಹೈಟೆನ್ಷನ್ ಹಾಗೂ ಲೋಟೆನ್ಷನ್ ಲೈನ್ ಗಳನ್ನು ಭೂಮಿಯಾಳದಲ್ಲಿ ಕೇಬಲ್ ಮೂಲಕ ಅಳವಡಿಸಲಾಗುತ್ತಿದೆ. ಇದು ನಗರದ ಸೌಂದರ್ಯವನ್ನು ಹೆಚ್ಚಿಸಲೂ ಸಹಕಾರಿಯಾಗಿದೆ. ಈಗಾಗಲೇ ದೊಡ್ಡ ದೊಡ್ಡ ದೇಶದ ನಗರಗಳಲ್ಲಿ ಇಂತಹ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ.
ಇನ್ಮುಂದೆ ಗಾಳಿ, ಮಳೆ ಬಂದರೂ ಬೆಂಗಳೂರಲ್ಲಿ ವಿದ್ಯುತ್ ಸಮಸ್ಯೆಯಾಗಲ್ಲ
ಕೇಂದ್ರ ವ್ಯಾಪ್ತಿ ಮತ್ತು ಸೆಸ್ಕ್ ಉಪ ವಿಭಾಗದ ಪ್ರದೇಶದಲ್ಲಿ ಈಗಾಗಲೇ ಪ್ರಯೋಗಾರ್ಥವಾಗಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದು ಯಶಸ್ವಿಯಾದ ಬಳಿಕ ಹಂತ ಹಂತವಾಗಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗುತ್ತದೆ. ಬೀದಿ ದೀಪ ಅಳವಡಿಸಲು ಪಾಲಿಕೆ ಪರ್ಯಾಯ ವ್ಯವಸ್ಥೆ ಮಾಡಲಿದೆ ಎಂದು ಮಾಹಿತಿ ನೀಡಿದರು ಸೆಸ್ಕ್ ಮುಖ್ಯ ಎಂಜಿನಿಯರ್ ಅಫ್ತಾಬ್ ಅಹ್ಮದ್.