ಕಾಂಗ್ರೆಸ್ ಗೆ ಶಕ್ತಿ ತುಂಬಲು ಅಖಾಡಕ್ಕಿಳಿದ ಸೋನಿಯಾ ಗಾಂಧಿ ಬ್ರಿಗೇಡ್
ಮೈಸೂರು, ಜುಲೈ 1: ಕರ್ನಾಟಕ ಸೇರಿದಂತೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬೆನ್ನಲ್ಲೇ, ರಾಷ್ಟ್ರಮಟ್ಟದಲ್ಲಿ ಸೋನಿಯಾ ಗಾಂಧಿ ಬ್ರಿಗೇಡ್ ಕಾರ್ಯಾಚರಣೆಗಿಳಿದಿದ್ದು, ಎಲ್ಲೆಡೆ ಮಹಿಳೆಯರನ್ನು ಸಂಘಟನೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯಕ್ಕೆ ಮುಂದಾಗಿದೆ.
Recommended Video
ಸ್ವಾತಂತ್ರ್ಯ ನಂತರದ ಒಂದಷ್ಟು ದಶಕಗಳ ಕಾಲ ಯಾವುದೇ ಭಯವಿಲ್ಲದೆ ಅಧಿಕಾರ ಅನುಭವಿಸಿದ ಪಕ್ಷ, ಇದೀಗ ದೇಶ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದರಿಂದ ಮತ್ತೆ ತಳಮಟ್ಟದಿಂದ ಸಂಘಟನೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬಂದು ನಿಂತಿದೆ.
ಮಂಡ್ಯದ ಪಾರುಪತ್ಯೆಗಾಗಿ 3 ರಾಜಕೀಯ ಪಕ್ಷಗಳ ತಯಾರಿ!
ರಾಷ್ಟ್ರ ಮಟ್ಟದಲ್ಲಿ ರಾಜಕಾರಣ ಬದಲಾಗಿದೆ. ಈಗ ದೇಶದಾದ್ಯಂತ ಮೋದಿ ಹವಾ ಶುರುವಾಗಿದೆ. ಅದರ ನೇರ ಹೊಡೆತ ಕಾಂಗ್ರೆಸ್ ಮೇಲೆ ಪರಿಣಾಮ ಬೀರಿದೆ. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಇನ್ಮುಂದೆ ಗಾಂಧಿ ಕುಟುಂಬದ ಸಾಧನೆಗಳನ್ನೇ ಹೇಳಿಕೊಂಡು ರಾಜಕೀಯ ಮಾಡುವುದು ಕಾಂಗ್ರೆಸ್ ನಾಯಕರಿಗೆ ಕಷ್ಟವಾಗಿದೆ. ಹೀಗಾಗಿ ಅವರು ತಮ್ಮ ರಾಜಕೀಯ ವರಸೆಗಳನ್ನು ಬದಲಾಯಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
ಮೋದಿಯನ್ನು ಟೀಕಿಸಿದರೆ ಯಾವುದೇ ಪ್ರಯೋಜನವಿಲ್ಲ
ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ತನ್ನ ಹಿಡಿತ ಕಳೆದುಕೊಂಡಂತೆ ಭಾಸವಾಗುತ್ತಿದೆ. ಬಹಳಷ್ಟು ಹಿರಿಯ ನಾಯಕರು ಮಂಕಾಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಮೋದಿಯನ್ನು ಎಷ್ಟೇ ಟೀಕೆ ಮಾಡಿದರೂ ಯಾವುದೇ ಪ್ರಯೋಜನ ಕಾಣುತ್ತಿಲ್ಲ. ಅದಕ್ಕೆ ಕಾರಣವೂ ಇದೆ. ಬಿಜೆಪಿ ಸಾಮಾಜಿಕ ಜಾಲವನ್ನು ಸಮರ್ಪಕ ಬಳಕೆ ಮಾಡುತ್ತಿದ್ದು, ಯಾವುದೇ ಟೀಕೆಗಳು ಬಂದರೂ ಅದಕ್ಕೆ ಸಮರ್ಪಕ ಉತ್ತರ ನೀಡಿ ಅದನ್ನು ಜನರ ಬಳಿಗೆ ತಲುಪಿಸುವ ತಂತ್ರ ಕಲಿತುಕೊಂಡಿದೆ. ಜತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಹೇಗೆ ತಲುಪಿಸಬೇಕು? ಕ್ರಿಯೆಗೆ ಪ್ರತಿಕ್ರಿಯೆ ನೀಡುವುದು ಹೇಗೆ, ಆರೋಪಗಳಿಗೆ ಪ್ರತ್ಯಾರೋಪಗಳನ್ನು ಹೇಗೆ ನೀಡಬೇಕು? ಮತ್ತು ಅದನ್ನು ದೇಶದ ಜನತೆಗೆ ತಲುಪಿಸುವುದು ಹೇಗೆ ಎಂಬುದು ಚೆನ್ನಾಗಿ ಗೊತ್ತಿದೆ.
ಬಿಜೆಪಿಗೆ ಹಿಂದೂಪರ ಸಂಘಟನೆಗಳ ಬೆಂಬಲ
ಇನ್ನು ಬಿಜೆಪಿ ಪಕ್ಷಕ್ಕೆ ಬೆಂಬಲವಾಗಿ ಹಿಂದೂಪರ ಸಂಘಟನೆಗಳಿವೆ. ಅವು ಏನೇ ಮಾಡಿದರೂ ಅದರ ಒಳಿತು ಬಿಜೆಪಿಗೆ ಆಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ತಳಮಟ್ಟದಿಂದ ಸಂಘಟನೆ ಮಾಡುವುದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅದು ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡು ಹೋಗಲು ಅಧಿಕಾರ ಹಿಡಿಯಲು ಸಾಧ್ಯವಾಗಿದೆ.
ಭೂ ಹೋರಾಟ ಜಿಲ್ಲೆಯಿಂದ ಬಂದ ಸಿಎಂ ಹೀಗೆ ಮಾಡಬಹುದಾ?: ಎಚ್ಸಿಎಂ
ರಾಷ್ಟ್ರ ಮತ್ತು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಕೂತಿರುವ ಕಾಂಗ್ರೆಸ್ ನಾಯಕರಿಗೆ ಈಗ ನಾವು ಎಲ್ಲಿ ಎಡವಿದ್ದೇವೆ ಎಂಬುದು ನಿಧಾನವಾಗಿ ಗೊತ್ತಾಗುತ್ತಿದೆ. ತಳಮಟ್ಟದಿಂದ ಸಂಘಟನೆ ಮಾಡದಿರುವುದು, ತಳಮಟ್ಟದ ನಾಯಕರ ಮತ್ತು ಕಾರ್ಯಕರ್ತರ ಅಭಿಪ್ರಾಯ ಕೇಳದೆ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದು, ಅದರಿಂದ ಒಂದಷ್ಟು ಶಾಸಕರನ್ನು ಕಳೆದುಕೊಂಡಿದ್ದು ಎಲ್ಲವೂ ಕಾಂಗ್ರೆಸ್ ನಾಯಕರ ಅರಿವಿಗೆ ಬಂದಿದೆ. ಇನ್ನು ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಕೂಡ ಕಾಂಗ್ರೆಸ್ ಗೆ ಮುಳುಗು ನೀರಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಅಖಾಡಕ್ಕಿಳಿದ ಸೋನಿಯಾ ಗಾಂಧಿ ಬ್ರಿಗೇಡ್
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯಬೇಕಾದರೆ ಅದು ಕಾರ್ಯವೈಖರಿ, ಪ್ರಚಾರದ ಶೈಲಿ, ಸಂಘಟನೆ ಮಾಡುವ ವಿಧಾನವನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸೋನಿಯಾ ಗಾಂಧಿ ಬ್ರಿಗೇಡ್ ಹುಟ್ಟಿಕೊಂಡಿದೆ. ಇದು ಸಂಪೂರ್ಣ ಮಹಿಳೆಯರ ಸಂಘಟನೆಯಾಗಿದ್ದು, ಮಹಿಳೆಯರನ್ನು ತಳಮಟ್ಟದಿಂದ ಸಂಘಟನೆ ಮಾಡಿಕೊಂಡು ಅಧಿಕಾರ ಪಡೆಯುವುದು ಸೋನಿಯಾ ಗಾಂಧಿ ಬ್ರಿಗೇಡ್ ನ ಪ್ರಮುಖ ಅಜೆಂಡಾವಾಗಿದೆ.
ರಾಜ್ಯದಲ್ಲಿ ಸೋನಿಯಾ ಗಾಂಧಿ ಬ್ರಿಗೇಡ್ ನ್ನು ಮುನ್ನೆಲೆಗೆ ತರುವ ಹಿನ್ನೆಲೆಯಲ್ಲಿ ಅಧ್ಯಕ್ಷೆ ಗೀತಾ ಕದರಮಂಡಲಗಿ ಸೇರಿದಂತೆ ಪದಾಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಅಧ್ಯಕ್ಷೆ ಗೀತಾ ಕದರಮಂಡಲಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಬಿಜೆಪಿಯಲ್ಲಿ ಆರ್ಎಸ್ಎಸ್, ಭಜರಂಗದಳ ಯಾವ ರೀತಿ ಕೆಲಸ ಮಾಡುತ್ತೋ ಅದೇ ಮಾದರಿಯಲ್ಲಿ ಸೋನಿಯಾಗಾಂಧಿ ಬ್ರಿಗೇಡ್ ಕಾರ್ಯ ನಿರ್ವಹಿಸಲಿದೆ.
ತಳಮಟ್ಟದಿಂದ ಮಹಿಳಾ ಸಂಘಟನೆ
ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಗ್ರಾಮೀಣ ಪ್ರದೇಶಗಳಿಂದ ಆರಂಭವಾಗಿ ಪಟ್ಟಣದವರೆಗೆ ಮಹಿಳೆಯರನ್ನು ಸಂಘಟಿಸಿ ಆ ಮೂಲಕ ಪಕ್ಷಕ್ಕೆ ಬಲತುಂಬಲು ಸೋನಿಯಾಗಾಂಧಿ ಬ್ರಿಗೇಡ್ ಕಾರ್ಯತಂತ್ರ ರೂಪಿಸಲಿದೆ. ಇದೀಗ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಸಾರಥ್ಯ ವಹಿಸಿಕೊಳ್ಳುತ್ತಿರುವುದು ಸೋನಿಯಾಗಾಂಧಿ ಬ್ರಿಗೇಡ್ ಗೆ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಇದರ ಕಾರ್ಯತಂತ್ರ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.