ಕಂದನ ಕಾಣಲು ಕಾಯುತ್ತಿದ್ದ ಹೆತ್ತ ಕರುಳಿಗೆ ಸಾವಿನ ಸಿಡಿಲು!
ಮೈಸೂರು, ಡಿಸೆಂಬರ್.01: ಅಮೇರಿಕಾದಲ್ಲಿದ್ದ ಮಗನನ್ನು ಹೊಸ ವರ್ಷಕ್ಕೂ ಮುನ್ನ ನೋಡಲು ತಾಯಿ ಸಿದ್ಧತೆ ನಡೆಸಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳ ಮೂರನೇ ವಾರದಲ್ಲಿ, 20 ತಿಂಗಳ ನಂತರ ತಾಯಿ ಮಗನ ಸಮ್ಮಿಲನ ಆಗಬೇಕಿತ್ತು. ಆದರೆ, ಮೊನ್ನೆ ದಿಢೀರಾಗಿ ಬಂದ ಸಾವಿನ ಸುದ್ದಿ ಇಡೀ ಕುಟುಂಬವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಮಗನನ್ನು ಕಾಣುವ ತವಕದಲ್ಲಿದ್ದ ತಾಯಿಗೆ ದೇವರೇ ಆಘಾತ ಉಂಟಾ ಮಾಡಿದ್ದಾನೆ.
ಹೌದು, ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ತೆರಳಿದ ಮೈಸೂರಿನ ಯುವಕ ಅಭಿಷೇಕ್ ಸಾವು ಇಂದಿಗೂ ತಾಯಿ ನಂದಿನಿ ಐತಾಳ್ ರನ್ನೂ ಶಾಕ್ ಗೆ ತಳ್ಳಿದೆ. ಅಭಿಷೇಕ್ ಜೊತೆ ಗುರುವಾರವಷ್ಟೇ ಮನೆಮಂದಿಯೆಲ್ಲ ಫೇಸ್ ಬುಕ್ ಲೈವ್ ನೊಂದಿಗೆ ಮಾತಾಡಿದ್ದೆವು. ಆದರೆ, ಆ ಮಾತುಗಳೇ ಕೊನೆಯಾದವು ಅಂತಾ ನೊಂದುಕೊಳ್ಳುತ್ತಾರೆ ಸಹೋದರ ಅಭಿಶ್ರೇಷ್ಠ.
ಅಭಿಷೇಕ್ ಹತ್ಯೆಗೆ ಟ್ವಿಸ್ಟ್; ಹೋಟೆಲ್ ಗ್ರಾಹಕನೇ ಹಣೆಗೆ ಗುಂಡಿಕ್ಕಿದ್ದ
ಮೈಸೂರಿನ ಕುವೆಂಪುನಗರದ ಯೋಗ ಶಿಕ್ಷಕ ಸುದೇಶ್ ಚಂದ್ ಭಟ್ ಮತ್ತು ನಂದಿನಿ ಐತಾಳ್ ಪುತ್ರ ಅಭಿಷೇಕ್, ಸಾಹಿತಿ ಕೆ.ಶಿವರಾಮ್ ಐತಾಳ್ ಅವರ ಮೊಮ್ಮಗನಾಗಿದ್ದರು. ಚಿಕ್ಕಂದಿನಿಂದ ಪ್ರತಿಭಾವಂತರಾಗಿದ್ದ ಅಭಿಷೇಕ್ ಬಿಇ ಪದವ ಜೊತೆಗೆ ಸಂಗೀತದಲ್ಲೂ ಆಸಕ್ತಿ ಹೊಂದಿದ್ದರು.
ಸಂಗೀತದಲ್ಲೂ ಸಹೋದರರಿಗಿಲ್ಲ ಸರಿಸಾಟಿ
ಇಬ್ಬರೂ ಪೀಟಿಲು ಕಲಿಕೆಯಲ್ಲಿ ತೊಡಗಿದ್ದು, ಉತ್ತಮ ಪಿಟೀಲು ವಾದಕರಾಗಿದ್ದರು. ಇಬ್ಬರು ಕೂಡ ಸ್ಪರ್ಧೆ ಇಳಿದವರಂತೆ ಸಂಗೀತ ಅಭ್ಯಾಸ ಮಾಡುವ ಮೂಲಕ ಗುರುಗಳ ಮೆಚ್ಚುಗೆ ಪಾತ್ರರಾಗಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಅವರ ಸಹಪಾಠಿ ನಾಗೇಶ್.
ಅಭಿಷೇಕ್ ನೆನಪಿನಲ್ಲಿ ಅಭಿಷ್ರೇಷ್ಠ ಕಣ್ಣೀರು
ಕೆಲವು ತಿಂಗಳ ಹಿಂದೆಯಷ್ಟೇ ಅಭಿಷೇಕ್ ತಂದೆ ಸುದೇಶ್ ಚಂದ್ ಭಟ್ ಅಮೆರಿಕಕ್ಕೆ ತೆರಳಿದ್ದರು. ತಮ್ಮ ಪುತ್ರನೊಂದಿಗೆ ಮೂರು ವಾರಗಳ ಕಾಲ ತಂಗಿದ್ದು, ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಿಕೊಂಡು ಬಂದಿದ್ದರು. ತಮ್ಮನೂ ಕೂಡ ಅಣ್ಣನನ್ನು ನೋಡಲು ಕಾತುರರಾಗಿದ್ದರು. ಅಷ್ಟರಲ್ಲಿ ಅಣ್ಣನ ಸಾವಿನ ಸುದ್ದಿ ಬಂದಿದೆ ಎಂದು ಅಭಿಶ್ರೇಷ್ಠ ಕಂಬನಿ ಮಿಡಿದರು.
ಅಮೆರಿಕದಲ್ಲಿ ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಬಲಿಯಾದ ಮೈಸೂರಿನ ಯುವಕ
ಬಾಗಿಲು ತೆರೆಯಿರಿ ಎಂದಿದ್ದೇ ತಪ್ಪಾಯಿತು!
ಒಂದೂವರೆ ವರ್ಷದ ಹಿಂದೆ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದಲ್ಲಿ ಅಭಿಷೇಕ್ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಬಿಡುವಿನ ವೇಳೆ ಹೋಟೆಲ್ವೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಹೋಟೆಲ್ ನಲ್ಲಿ ಕೊಠಡಿ ಪಡೆದಿದ್ದ ವಿಕೃತನೊಬ್ಬ ರೂಂ ಕ್ಲೀನ್ ಮಾಡಲು ಬಾಗಿಲು ತೆರೆಯದಿದ್ದಾಗ, ಅಭಿಷೇಕ್ ತಾವೇ ಹೋಗಿ ಬಾಗಿಲು ತಟ್ಟಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿ ಏಕಾಎಕಿ ಬಾಗಿಲು ತೆರೆದು ಅಭಿಷೇಕ್ ಮೇಲೆ ಗುಂಡು ಹಾರಿಸಿದ್ದಾನೆ.
ಅಮೆರಿಕಾಗೆ ತೆರಳಲು ಕುಟುಂಬಕ್ಕೆ ವೀಸಾ ಪ್ಲಾಬ್ಲಂ
ಇನ್ನು, ಅಭಿಷೇಕ್ ಶವವನ್ನು ಸ್ಥಳೀಯ ಪೊಲೀಸರು, ಶವಗಾರದಲ್ಲಿರಿಸಿದ್ದು ಮರಣೋತ್ತರ ಪರೀಕ್ಷೆ ನಡೆಯಲು ಇನ್ನೂ ಸಮಯಬೇಕಿದೆ. ಇತ್ತ ಮೃತನ ಕುಟುಂಬದವರು ಅಮೆರಿಕಕ್ಕೆ ತುರ್ತಾಗಿ ತೆರಳಲು ವೀಸಾ ಸಮಸ್ಯೆ ಎದುರಾಗಿದೆ. ಕುಟುಂಬಸ್ಥರು ಜಿಲ್ಲಾಧಿಕಾರಿ ಹಾಗೂ ಸಂಸದ ಪ್ರತಾಪ ಸಿಂಹ ಮೂಲಕ ವಿದೇಶಾಂಗ ಇಲಾಖೆಯ ಸಂಪರ್ಕದಲ್ಲಿದ್ದಾರೆ. ಮೃತರ ಮನೆಗೆ ಸಚಿವ ಶ್ರೀರಾಮುಲು ಹಾಗೂ ಪ್ರತಾಪ ಸಿಂಹ ಭೇಟಿ ನೀಡಿ ಸಾಂತ್ವನ ಹೇಳಿದರು. ವೀಸಾ ದೊರೆತ ಕೂಡಲೇ ಕುಟುಂಬ ಸದಸ್ಯರು ಅಮೆರಿಕಾಗೆ ತೆರಳಲಿದ್ದಾರೆ. ಈ ಸ್ಥಿತಿ ಯಾರಿಗೂ ಬೇಡ, ನನ್ನ ಮಗನಿಗಾದ ಸ್ಥಿತಿ ಮತ್ಯಾರಿಗೂ ಆಗಬಾರದು ಅನ್ನೋದು ತಂದೆಯ ನೋವಿನ ನುಡಿ.