ಕೆ.ಆರ್.ನಗರದಲ್ಲಿ ಬೆಂಕಿ ತಗುಲಿ ತಂದೆ ಮಗನ ಸಾವು
ಮೈಸೂರು, ಫೆಬ್ರವರಿ 14: ನೀರು ಕಾಯಿಸುವ ಒಲೆಯಿಂದ ಆಕಸ್ಮಿಕ ಬೆಂಕಿ ತಗುಲಿದ್ದ ತಂದೆಯನ್ನು ರಕ್ಷಿಸಲು ಹೋದ ಪುತ್ರ ಸಾವನ್ನಪ್ಪಿದ್ದು, ಬೆಂಕಿ ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಕೆ.ಆರ್.ನಗರದಲ್ಲಿ ನಡೆದಿದೆ.
ಮೃತರನ್ನು ಕೆ.ಆರ್.ನಗರದ ಈಶ್ವರ ನಗರದಲ್ಲಿ ವಾಸವಿದ್ದ ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸಟೇಬಲ್ ರೇಣುಕಾಸ್ವಾಮಿ(45) ಮತ್ತವರ ಪುತ್ರ ತೇಜಸ್(14) ಎಂದು ಹೇಳಲಾಗಿದೆ.
ನಂಜನಗೂಡಲ್ಲಿ ಹುಚ್ಚು ನಾಯಿ ಕಡಿದು ಐವರು ಮಕ್ಕಳಿಗೆ ಗಂಭೀರ ಗಾಯ
ಹೆಡ್ ಕಾನ್ಸಟೇಬಲ್ ಪತ್ನಿ ಪುಷ್ಪಲತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಡ್ ಕಾನ್ಸಟೇಬಲ್ ರೇಣುಕಾಸ್ವಾಮಿಯವರು ನೀರು ಕಾಯಿಸಲು ಒಲೆಗೆ ತೆಂಗಿನ ಸಿಪ್ಪೆ ಹಾಕಿ ಬೆಂಕಿ ಹಚ್ಚಿದ್ದರು. ಬೆಂಕಿ ಸರಿಯಾಗಿ ಉರಿಯದ ಕಾರಣ ಪಕ್ಕದಲ್ಲೇ ಇದ್ದ ಸೀಮೆಎಣ್ಣೆ ಕ್ಯಾನ್ ತೆರೆದು ಸ್ವಲ್ಪ ಸೀಮೆಎಣ್ಣೆಯನ್ನು ಒಲೆಗೆ ಎರೆಚಿದ್ದರು.
ಈ ವೇಳೆ ಸೀಮೆ ಎಣ್ಣೆ ಕ್ಯಾನ್ ಗೆ ಬೆಂಕಿ ತಗುಲಿದ್ದು, ಕ್ಯಾನ್ ಉರುಳಿ ಸೀಮೆ ಎಣ್ಣೆಯು ನೆಲದ ಮೇಲೆ ಚೆಲ್ಲಿದ್ದರಿಂದ ಬೆಂಕಿಯ ಕೆನ್ನಾಲಗೆ ಎಲ್ಲೆಡೆ ಹರಡಿತ್ತು. ರೇಣುಕಾಸ್ವಾಮಿಯವರನ್ನು ರಕ್ಷಿಸಲು ಬೆಂಕಿಯನ್ನು ಆರಿಸಲು ಬಂದ ಪುಷ್ಪಲತಾ ಅವರ ಸೀರೆಗೆ ಬೆಂಕಿ ತಗುಲಿ ಅವರು ಕಿರುಚುತ್ತಾ ಓಡಿ ಬರುತ್ತಿದ್ದರು.
ಅಪಘಾತದಲ್ಲಿ ಸಾವನ್ನಪ್ಪಿದ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬ
ತಾಯಿ ಮತ್ತು ತಂದೆಯನ್ನು ರಕ್ಷಿಸಲು ಬಂದ ಪುತ್ರ ತೇಜಸ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ನೆರೆ ಹೊರೆಯವರು ಬಾಗಿಲು ಒಡೆದು ಒಳಪ್ರವೇಶಿಸಿ ಬೆಂಕಿ ಆರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ. ಪುಷ್ಪಲತಾ ಅವರು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ರಿ ಚಿನ್ಮಯಿ ಮಾತ್ರ ಅಪಾಯದಿಂದ ಪಾರಾಗಿದ್ದಾರೆ.
ಕೆ.ಆರ್.ನಗರ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ಪಿ.ಕೆ.ರಾಜು ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.