ಮೈಸೂರಿನಲ್ಲಿ ಐಎಂಎನಿಂದ ಲಾಭ ಮಾಡಿಕೊಂಡವರೂ ಇದ್ದಾರೆ
ಮೈಸೂರು, ಜೂನ್ 15: ಐಎಂಎ ಕಂಪನಿಯಲ್ಲಿ ಹಣ ಹೂಡಿ ಮೋಸ ಹೋದವರು ಮಾತ್ರವಲ್ಲ, ಸಿರಿವಂತರಾದವರೂ ಬಹಳಷ್ಟು ಮಂದಿ ಇದ್ದಾರೆ ಎಂದು ಮೈಸೂರಿನಲ್ಲಿ ದೂರು ನೀಡಲು ಬಂದಿದ್ದ ವ್ಯಕ್ತಿಯೊಬ್ಬರು ಹೇಳಿದರು. ಈ ಸಂಸ್ಥೆ ಕಳೆದ 10 ವರ್ಷಗಳಿಂದ ನಿಯಮಿತವಾಗಿ ಲಾಭಾಂಶ ನೀಡುತ್ತಿದೆ. ಈಗ ಮೂರು ತಿಂಗಳಿನಿಂದ ನೀಡಿಲ್ಲ. ಬಹು ಹಿಂದೆಯೇ ಹೂಡಿಕೆ ಮಾಡಿದ್ದವರು ಒಳ್ಳೆಯ ಲಾಭವನ್ನೇ ಮಾಡಿಕೊಂಡಿದ್ದಾರೆ. ಕಟ್ಟಡವನ್ನು ಖರೀದಿಸಿದವರೂ ಬಹಳಷ್ಟು ಮಂದಿ ಇದ್ದಾರೆ. ಆದರೆ ಮೂರ್ನಾಲ್ಕು ವರ್ಷಗಳಿಂದೀಚೆಗೆ ಹೂಡಿಕೆ ಮಾಡಿದ್ದವರಿಗೆ ಬಹುದೊಡ್ಡ ನಷ್ಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಐಎಂಎ ಪ್ರಕರಣ : ಶಿವಮೊಗ್ಗದಲ್ಲಿ ಸುಮಾರು 60 ಲಕ್ಷ ವಂಚನೆ
ಶುಕ್ರವಾರ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣವನ್ನು ಸ್ವೀಕರಿಸುವ ಕೆಲಸ ನಡೆದಿತ್ತು. ಈ ವೇಳೆ ಐಎಂಎ ಕುರಿತು ಹಲವು ವಿಚಾರಗಳೂ ಚರ್ಚೆಯಾಗುತ್ತಿದ್ದವು. ಬಟ್ಟೆ ಹೊಲಿದು ಸಂಪಾದಿಸಿದ ಹಣವನ್ನು ಚಿಟ್ ಫಂಡ್ ನಲ್ಲಿ ತೊಡಗಿಸಿದ್ದ ಶಕೀಲಾ ಎಂಬುವರು ಚಿಟ್ ಫಂಡ್ ನಿಂದ ಹಣ ತೆಗೆದು, ಅಧಿಕ ಲಾಭಾಂಶದ ನಿರೀಕ್ಷೆಯಲ್ಲಿ ಇಲ್ಲಿ ಹೂಡಿಕೆ ಮಾಡಿದ್ದರು. ಈಗ ಹಣವೂ ಇಲ್ಲದೇ ಚಿಟ್ ಫಂಡ್ ನ ಕಂತನ್ನೂ ಕಟ್ಟಲಾಗದೇ ಪರಿತಪಿಸುತ್ತಿದ್ದಾರೆ. ಮನೆಯ ಭೋಗ್ಯದ ಹಣವನ್ನು ಮಹಮ್ಮದ್ ಅಸ್ಗರ್ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಈಗ ಭೋಗ್ಯದವರು ಮನೆ ಖಾಲಿ ಮಾಡುತ್ತಿದ್ದಾರೆ. ಹಣ ಎಲ್ಲಿಂದ ಕೊಡುವುದು ಎಂದು ಬೇಸರದಿಂದ ಕೇಳುತ್ತಿದ್ದರು. ನಿವೇಶನ ಮಾರಾಟ ಮಾಡಿ ಹಣ ಹಾಕಿದವರು, ಒಡವೆಗಳನ್ನು ಗಿರವಿ ಇಟ್ಟು ಹಣ ತೊಡಗಿಸಿದವರು, ನಿವೃತ್ತಿ ಬಳಿಕ ಬರುವ ಪಿಎಫ್ ಹಾಗೂ ಗ್ರಾಚುಟಿ ಹಣವನ್ನು ಹೂಡಿಕೆ ಮಾಡಿದ್ದವರು ಅಲ್ಲಿದ್ದರು.
ಐಎಂಎ ಸಂಸ್ಥೆಯಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿದವರಲ್ಲಿ ಕೆಲವರು ಮಾತ್ರ ದೂರು ನೀಡಿದ್ದು, ಬಹುತೇಕರು ದೂರು ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಕಂಪನಿಯಲ್ಲಿ ನಗರದ ನಾಗರಿಕರು ಒಟ್ಟು 40 ಕೋಟಿಗೂ ಹೂಡಿಕೆ ಮಾಡಿ ವಂಚಿತರಾಗಿದ್ದಾರೆ ಎಂಬುದು ಇದೀಗ ದೂರಿನ ಮೂಲಕ ಬಹಿರಂಗಗೊಂಡಿದೆ. ಉದಯಗಿರಿ ಮಂಡಿ, ನರಸಿಂಹರಾಜ ಪೊಲೀಸ್ ಠಾಣೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.