ಮೈಸೂರು; ನಗರದ ಕೆಲ ಭಾಗಗಳು ನಿಶ್ಶಬ್ದ ವಲಯಗಳಾಗಿ ಘೋಷಣೆ
ಮೈಸೂರು, ನವೆಂಬರ್ 13: ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದಲ್ಲಿ ಪಟಾಕಿಗಳ ಶಬ್ದವು ರೋಗಿಗಳಿಗೆ, ವೃದ್ಧರಿಗೆ, ಪ್ರಾಣಿ ಪಕ್ಷಿಗಳ ಪಾಲಿಗೆ ಭಯ ಹಾಗೂ ಸಂಕಷ್ಟದ ಸನ್ನಿವೇಶ ಸೃಷ್ಟಿಸಲಿದೆ. ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಂಡು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಕೆಲವು ಪ್ರದೇಶಗಳನ್ನು ನಿಶ್ಶಬ್ದ ವಲಯ ಪ್ರದೇಶವೆಂದು ಘೋಷಿಸಿ ಆದೇಶ ಹೊರಡಿಸಿದ್ದು, ಪಟಾಕಿ ಸಿಡಿಸಿ ಶಬ್ದ ಮಾಡಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ನಗರದಲ್ಲಿ ಈಗಾಗಲೇ ವಾಹನಗಳ ಹೆಚ್ಚಳದಿಂದಾಗಿ ವಾಯು ಹಾಗೂ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ. ಪಟಾಕಿ ಸಿಡಿಸುವುದರಿಂದ ರಾಸಾಯನಿಕ ಪದಾರ್ಥಗಳು ವಾತಾವರಣದಲ್ಲಿ ಸೇರಿ ಉಸಿರಾಟದ ತೊಂದರೆ, ಶ್ವಾಸಕೋಶದ ಸೋಂಕಿನಂತಹ ಸಮಸ್ಯೆಗಳು ಕಾಡಲಿದ್ದು ಹಬ್ಬದ ಆಚರಣೆಯ ಸಂದರ್ಭದಲ್ಲಿ ಉಂಟಾಗುವ ಶಬ್ದ ಹಾಗೂ ವಾಯು ಮಾಲಿನ್ಯದಿಂದಾಗಿ ಹಿರಿಯ ನಾಗರಿಕರು, ರೋಗಿಗಳು ಹಾಗೂ ಪ್ರಾಣಿಪಕ್ಷಿಗಳಿಗೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.
ಹಬ್ಬಕ್ಕಿಂತ ಜೀವ ಮುಖ್ಯ; ಹೈಕೋರ್ಟ್ ಆದೇಶಕ್ಕೆ ಹಸ್ತಕ್ಷೇಪ ಮಾಡಲ್ಲ ಎಂದ ಸುಪ್ರೀಂ
ಸರ್ವೋಚ್ಛ ನ್ಯಾಯಾಲಯದ ಉಲ್ಲೇಖಿತ ಆದೇಶದಲ್ಲಿ ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ಸಿಡಿಸುವುದರ ಕುರಿತು ಕಂಡಿಕೆ71(4) ರಲ್ಲಿ ಆಸ್ಪತ್ರೆಗಳು, ನರ್ಸಿಂಗ್ ಹೋಂ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಆರೋಗ್ಯ ಕೇಂದ್ರ, ಶೈಕ್ಷಣಿಕ ಸಂಸ್ಥೆಗಳು, ನ್ಯಾಯಾಲಯ ಧಾರ್ಮಿಕ ಸ್ಥಳಗಳು ಹಾಗೂ ಇತರೆ ಯಾವುದೇ ಸ್ಥಳಗಳನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರವು ನಿಶ್ಶಬ್ದ ವಲಯ ಎಂದು ಘೋಷಿಸಬಹುದೆಂದು ಸೂಚಿಸಲಾಗಿದ್ದು, ಮೈಸೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನಿಶ್ಶಬ್ದ ವಲಯಗಳೆಂದು ಘೋಷಿಸಲು ಆದೇಶ ಹೊರಡಿಸಿರುವುದಾಗಿ ತಿಳಿಸಿದರು.
ಮೈಸೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಚಾಮರಾಜೇಂದ್ರ ಮೃಗಾಲಯ, ಕುಕ್ಕರಹಳ್ಳಿ ಕೆರೆ ಪ್ರದೇಶ, ಕಾರಂಜಿಕೆರೆ ಪ್ರದೇಶ, ಲಿಂಗಾಂಬುಧಿ ಕೆರೆ ಪ್ರದೇಶ, ಸಾರ್ವಜನಿಕ ಉದ್ಯಾನವನಗಳು, ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳು, ಶೈಕ್ಷಣಿಕ ಸಂಸ್ಥೆಗಳು, ನ್ಯಾಯಾಲಯ, ಧಾರ್ಮಿಕ ಸ್ಥಳಗಳ 100 ಮೀಟರ್ ಸುತ್ತಳತೆ ಪ್ರದೇಶವನ್ನು ನ.13ರಂದು ಬೆಳಿಗ್ಗೆ 6ರಿಂದ ನ.16ರ ಮಧ್ಯರಾತ್ರಿ 12ಗಂಟೆಯವರೆಗೆ ನಿಶ್ಶಬ್ದವಲಯವಾಗಿ ಘೋಷಿಸಿರುವುದಾಗಿ ತಿಳಿಸಿದರು.
ಈ ನಿಶಬ್ದವಲಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದು, ಪಟಾಕಿ ಸಿಡಿಸಿ ನಿಯಮ ಉಲ್ಲಂಘಿಸಿದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.