ಸಹಾಯವಾಣಿ ಮೂಲಕ ರಾಷ್ಟ್ರಧ್ವಜವನ್ನು ಸಂಗ್ರಹಿಸಲು ಸಂಘ-ಸಂಸ್ಥೆಗಳ ಒಕ್ಕೂಟ ನಿರ್ಧಾರ
ಮೈಸೂರು, ಆಗಸ್ಟ್ 17: ಸ್ವಾತಂತ್ರ್ಯೋತ್ಸವದ ಸಂಭ್ರಮ ಮುಗಿದಿದೆ. ಎಲ್ಲರ ಮನೆ ಮೇಲೂ ರಾಷ್ಟ್ರಧ್ವಜ ಹಾರಾಡಿದೆ. ಇದೀಗ ರಾಷ್ಟ್ರಧ್ವಜವನ್ನು ಏನು ಮಾಡುವುದು ಎಂಬ ಚಿಂತೆಯೇ? ನೀವು ಒಂದು ಕರೆ ಮಾಡಿದರೆ ಸಾಕು, ಸ್ವಯಂಸೇವಕರು ಬಂದು ರಾಷ್ಟ್ರಧ್ವಜವನ್ನು ಗೌರವಯುತವಾಗಿ ಸಂಗ್ರಹಿಸುತ್ತಾರೆ.
75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಹಾರಿಸಬೇಕೆಂದು ಕೇಂದ್ರ ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಈ ಅಭಿಯಾನಕ್ಕೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಸರಾ ವಿಶೇಷ; ಮೈಸೂರು ದಸರಾ ಗಜಪಡೆಯ ದಿನಚರಿ ಹೇಗಿದೆ ಗೊತ್ತಾ?
ಆದರೆ, ಹಾರಿಸಿದ ನಂತರ ರಾಷ್ಟ್ರಧ್ವಜವನ್ನು ಗೌರವಯುತವಾಗಿ ಸಂಗ್ರಹ ಮಾಡಬೇಕಾಗುತ್ತದೆ. ಸ್ವಾತಂತ್ರ್ಯದ ಸಂಭ್ರಮ ಮುಗಿದ ಮೇಲೆ ಧ್ವಜವನ್ನು ಎಲ್ಲೆಂದರಲ್ಲಿ ಬಿಸಾಕಬಾರದು. ಇದು ರಾಷ್ಟ್ರಧ್ವಜ ಸಂಹಿತೆಗೂ ವಿರುದ್ಧವಾದ ನಡೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ 'ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟ' ಧ್ವಜಾರೋಹಣದ ನಂತರ ರಾಷ್ಟ್ರಧ್ವಜವನ್ನು ಸಂಗ್ರಹ ಮಾಡಲು ಮುಂದಾಗಿದೆ.
ಧ್ವಜ ಸ್ವೀಕರಿಸಲು ಸಹಾಯವಾಣಿ
ಈಗಾಗಲೆ ಬಹುಪಾಲು ಮನೆಗಳಲ್ಲಿ ಬಾವುಟ ಹಾರಿಸುತ್ತಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆದರೆ, ಸ್ವಾತಂತ್ರ್ಯೋತ್ಸವ ಮುಗಿದ ಮೇಲೆ ಧ್ವಜವನ್ನು ಏನು ಮಾಡಬೇಕೆಂಬ ಗೊಂದಲ ಹಲವರಲ್ಲಿ ಇದೆ. ಎಷ್ಟೋ ಜನರ ಮನೆಯಲ್ಲಿ ಮಕ್ಕಳು ಇರುವುದರಿಂದ ಅವರಿಗೆ ಇದು ಆಟಿಕೆ ವಸ್ತು ಆಗಬಾರದು. ಜೊತೆಗೆ ಧ್ವಜವನ್ನು ಗಲೀಜು ಮಾಡುವುದು, ಹರಿಯುವುದು ಮಾಡಬಾರದು. ಈ ನಿಟ್ಟಿನಲ್ಲಿ ನಮ್ಮ ಒಕ್ಕೂಟದ ವತಿಯಿಂದ ಧ್ವಜವನ್ನು ಗೌರವಯುತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಸಹಾಯವಾಣಿವೊಂದನ್ನು ಮಾಡಿದ್ದು, ಜನರು ಕರೆ ಮಾಡಿದರೆ ಖುದ್ದು ನಾವೇ ಹೋಗಿ ಧ್ವಜ ಸಂಗ್ರಹ ಮಾಡುತ್ತೇವೆ' ಎಂದು ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.
ಸೂಕ್ತ ವಿಧಾನದಲ್ಲಿ ವಿಲೇವಾರಿ
" ಭಾರತದ ಸಂವಿಧಾನದ ಪ್ರಕಾರ ರಾಷ್ಟ್ರಧ್ವಜವನ್ನು ವಿಲೇವಾರಿ ಮಾಡಲು ಒಂದು ರೀತಿ-ನೀತಿ ಇದೆ. ಒಂದು ವೇಳೆ ತ್ರಿವರ್ಣ ಧ್ವಜವು ಬಳಸಲಾಗದಷ್ಟು ಕೊಳೆಯಾಗಿದ್ದಲ್ಲಿ ಅಥವಾ ಹರಿದಿದ್ದಲ್ಲಿ ಅದನ್ನು ಸಕಲ ಸರಕಾರಿ ಗೌರವಗಳೊಂದಿಗೆ ಆಹುತಿ ಮಾಡಬೇಕು. ಸಂವಿಧಾನದಲ್ಲಿ ತಿಳಿಸಿರುವ ನೀತಿ- ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟವು ಮೈಸೂರಿನಲ್ಲಿ ಉತ್ಪತ್ತಿಯಾಗಿರುವ, ಬಳಸಲಾಗಿರುವ, ಕೊಳೆಯಾಗಿರುವ ಅಥವಾ ಹರಿದಿರುವ ಧ್ವಜಗಳನ್ನು ಕಾನೂನಿನ ಪ್ರಕಾರ ವಿಲೇವಾರಿ ಮಾಡಲು ಮುಂದಾಗಿದೆ" ಎಂದು ಬಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.
ಧ್ವಜಗಳನ್ನು ಸಲ್ಲಿಸಲು ಸ್ಥಳಗಳ ಗುರುತು
ಸಾರ್ವಜನಿಕರು ಆಗಸ್ಟ್ 15ರ ನಂತರ ತಾವು ಬಳಸಿದ ಧ್ವಜಗಳನ್ನು, ಕೊಳೆಯಾಗಿರುವ ಅಥವಾ ಹರಿದ ಧ್ವಜಗಳನ್ನು ಬಿಸಾಡಬೇಡಿ. ಬದಲಿಗೆ ನಿಮ್ಮ ಹತ್ತಿರದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಪೆಟ್ರೋಲ್ ಬಂಕ್ಗಳಿಗೆ ಅಥವಾ ಚಾಮರಾಜ ಜೋಡಿ ರಸ್ತೆಯಲ್ಲಿರುವ ಗಾಯತ್ರಿ ಚಿತ್ರಮಂದಿರಕ್ಕೆ ತಲುಪಿಸಿ. ನಿಮಗೆ ರಸ್ತೆಯಲ್ಲಿ ಎಲ್ಲಿಯಾದರೂ ತ್ರಿವರ್ಣ ಧ್ವಜ ಕಂಡರೆ ಅದನ್ನೂ ಈ ಮೇಲಿನ ಸ್ಥಳಗಳಿಗೆ ತಲುಪಿಸಿ. ಎಲ್ಲವನ್ನೂ ಒಟ್ಟು ಮಾಡಿ ಸಂವಿಧಾನದ ಪ್ರಕಾರ ಮುಂದಿನ ಕ್ರಮವನ್ನು ಈ ಸಂಸ್ಥೆ ಕೈಗೊಳ್ಳುತ್ತೇವೆ. ತ್ರಿವರ್ಣ ಧ್ವಜದ ಗೌರವಕ್ಕೆ ಎಂದಿಗೂ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ. ಅದನ್ನು ಪಾಲಿಸಲು ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟದ ಸಣ್ಣ ಪ್ರಯತ್ನ ಇದು.
ಕರೆ ಮಾಡಿ, ಧ್ವಜ ನೀಡಿ
" ಧ್ವಜಗಳು ಕಸದಬುಟ್ಟಿಯಲ್ಲಿ ಅಥವಾ ರಸ್ತೆಗಳಲ್ಲಿ ಬೀಳುವುದನ್ನು ನಾವು ಬಯಸುವುದಿಲ್ಲ. ಇದು ನಮ್ಮ ಹೆಮ್ಮೆ. ಧ್ವಜಕ್ಕೆ ಗೌರವವನ್ನು ನೀಡಬೇಕು. ಧ್ವಜಗಳನ್ನು ಸರಿಯಾಗಿ ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಅಧಿಕಾರಿಗಳು ಮತ್ತು ನಮ್ಮ ಮುಂದಿರುವ ಪ್ರಮುಖ ಸವಾಲು ಎಂಬುದು ಅವರ ಕಾಳಜಿ, ಮೈಸೂರು ನಗರದಲ್ಲಿ ಎಲ್ಲೆ ಧ್ವಜ ಹಾರಿಸಿರಲಿ, ಅದು ಗಲೀಜಾಗುವುದಕ್ಕೆ ಮುನ್ನವೇ ಸಂಬಂಧಪಟ್ಟವರು ಕರೆ ಮಾಡಿದರೆ, ನಾವು ಅದನ್ನು ಸಂಗ್ರಹ ಮಾಡುತ್ತೇವೆ. ಅಥವಾ ನಮ್ಮ ಒಕ್ಕೂಟದ ಅಡಿಯಲ್ಲಿ ಬರುವ ಯಾವುದೇ ಸಂಘಟನೆಯ ಪದಾಧಿಕಾರಿಗಳು ಅಥವಾ ಸದಸ್ಯರಿಗೆ ತಿಳಿಸಿದರೆ ಸಾಕು ನಾವು ಸಂಗ್ರಹ ಮಾಡಿಕೊಳ್ಳುತ್ತೇವೆ" ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.
ರಾಷ್ಟ್ರಧ್ವಜವನ್ನು ನೀಡಬಯಸುವವರು ಈ ನಂಬರ್ಗೆ ಕರೆ ಮಾಡಿ ನೀಡಬಹುದಾಗಿದೆ. 08214001100