ಮೈಸೂರಿನಲ್ಲಿ ಹೆಲ್ಮೆಟ್ ಸುಟ್ಟು ಹಿಂಬದಿ ಸವಾರರ ಆಕ್ರೋಶ
ಮೈಸೂರು,ಜನವರಿ,28: ದ್ವಿಚಕ್ರ ವಾಹನದ ಹಿಂಬದಿ ಸವಾರನಿಗೆ ಸುಪ್ರಿಂ ಕೋರ್ಟ್ ಹೆಲ್ಮೆಟ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆದ್ದಾರಿ ತಡೆ ನಡೆಸಿ ಹೆಲ್ಮೆಟ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿನ ಕುವೆಂಪು ವೃತ್ತದಲ್ಲಿ ನೂರಾರು ಕಾರ್ಯಕರ್ತರು ಬೈಕ್ ಗಳನ್ನು ಅಡ್ಡ ನಿಲ್ಲಿಸಿ ಸುಪ್ರಿಂ ಕೋರ್ಟಿನ ತೀರ್ಪು ಬಡ ಹಾಗೂ ಮಧ್ಯಮ ವರ್ಗದವರಿಗೆ ಮಾರಕವಾಗಿದೆ ಎಂದು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.[ಹಿಂಬದಿ ಸವಾರರು ಹೆಲ್ಮೆಟ್ ಯಾಕೆ ಧರಿಸಬೇಕು?]
ಸುಪ್ರೀಂ ಕೋರ್ಟ್ ತೀರ್ಪಿನಿಂದ ಹೆಲ್ಮೆಟ್ ಕಂಪನಿಗಳಿಗೆ ಲಾಭವಾಗುತ್ತಿದೆ. ಜೊತೆಗೆ ಇಬ್ಬರು ಹೆಲ್ಮೆಟ್ ಧರಿಸಿ ಓಡಾಡಬೇಕೆನ್ನುವುದು ಅವೈಜ್ಞಾನಿಕ ಕ್ರಮ. ಇದರಿಂದ ಸರಗಳ್ಳರು ನಿರ್ಭೀತಿಯಿಂದ ಓಡಾಡಲು ಅನುಕೂಲವಾಗಿದೆ. ಆದ್ದರಿಂದ ಸುಪ್ರಿಂಕೋರ್ಟ್ ತನ್ನ ತೀರ್ಪನ್ನು ಮತ್ತೊಮ್ಮೆ ಮರುಪರಿಶೀಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಮುಖಂಡ ಬಸವರಾಜು, ಬಿಜೆಪಿ ತಾಲೂಕು ಅಧ್ಯಕ್ಷ ದೇವರಾಜು, ಸೇವಾದಳದ ಅಧ್ಯಕ್ಷ ಶಿವಸ್ವಾಮಿ, ಪುರಸಭಾ ಸದಸ್ಯ ಪ್ರಕಾಶ್, ಮಾಜಿ ಅಧ್ಯಕ್ಷ ಬಲರಾಂ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.[ಹೆಲ್ಮೆಟ್ ಕಡ್ಡಾಯ: ಮೈಸೂರು, ತುಮಕೂರು, ಬೆಳಗಾವಿಗೆ ವಿನಾಯಿತಿ]
ಚಾಮರಾಜನಗರದಲಿ ಮಹಿಳೆ ಅನುಮಾನಸ್ಪದ ಸಾವು
ಚಾಮರಾಜನಗರ, ಜನವರಿ,28: ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಮಹಿಳೆಯೊಬ್ಬಳ ಶವ ಇಟ್ಟಿಗೆ ಕಾರ್ಖಾನೆಯೊಂದರ ಶೆಡ್ ನಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಚಾಮರಾಜನಗರ ತಾಲೂಕಿನ ಉತ್ತವಳ್ಳಿ ಗ್ರಾಮದ ರಾಜಮ್ಮ (54) ಎಂಬಾಕೆ ಅನುಮಾನಾಸ್ಪದವಾಗಿ ಮೃತಪಟ್ಟ ಮಹಿಳೆ. ರಾಜಮ್ಮಳ ಗಂಡ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದನು. ಮಕ್ಕಳಿಬ್ಬರು ಮೈಸೂರಿನಲ್ಲಿ ವಾಸ ಮಾಡುತ್ತಿದ್ದು, ಈಕೆ ಒಂಟಿಯಾಗಿ ಗ್ರಾಮದಲ್ಲಿ ಜೀವನ ಸಾಗಿಸುತ್ತಿದ್ದಳು. ಇದೀಗ ಈಕೆಯ ಶವ ಶೆಡ್ ನಲ್ಲಿ ಪತ್ತೆಯಾಗಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.