ಐವರ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಸಾವಿನ ಸುತ್ತ ಅನುಮಾನಗಳ ಹುತ್ತ
ಮೈಸೂರು, ಆಗಸ್ಟ್ 16 : ಚಾಮರಾಜನಗರದ ಗುಂಡ್ಲುಪೇಟೆ ಬಳಿಯ ಜಮೀನೊಂದರಲ್ಲಿ ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಗುಂಡ್ಲುಪೇಟೆಯಲ್ಲಿ ಒಂದೇ ಕುಟುಂಬದ ಐವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಐವರು ಮೃತರನ್ನು ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾಗಿರುವ ಓಂ ಪ್ರಕಾಶ್, ಪತ್ನಿ ನಿಖಿತಾ, ಮಗ ಆರ್ಯ ಕೃಷ್ಣ, ತಾಯಿ ಹೇಮಲತಾ, ತಂದೆ ನಾಗರಾಜು ಭಟ್ಟಚಾರ್ಯ ಎಂದು ಗುರುತಿಸಲಾಗಿದೆ. ಹಣಕಾಸಿನ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಈ ಕುಟುಂಬದ ಸಾವಿನ ಸುತ್ತ ಅನುಮಾನಗಳು ಕಂಡುಬರುತ್ತಿದೆ.
ಒಂದು ವಾರದ ಹಿಂದೆ ಮನೆ ಖಾಲಿ ಮಾಡಿದ್ದ ಕುಟುಂಬ
ಮೂಲತಃ ತುಮಕೂರಿನವರಾದ ಓಂಪ್ರಕಾಶ್ ಕುಟುಂಬದವರು ಮೈಸೂರಿನ ತಮ್ಮ ಸ್ವಂತ ಮನೆಯನ್ನು ಕಳೆದ ವಾರದ ಕೆಳಗೆ ಖಾಲಿ ಮಾಡಿದ್ದರು. ಅಲ್ಲದೇ ಹಾಲಿನವರು ಹಾಗೂ ಪೇಪರ್ ಹಾಕುವವರಿಗೆ ನಾವು ಹೇಳುವ ತನಕ ಏನೂ ಹಾಕಬೇಡಿ ಎಂದು ಹೇಳಿದ್ದರು. ಅವರ ಕುಟುಂಬದಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಮನೆಯಿಂದ ಕಾರಿನಲ್ಲಿ ತೆರಳಿದ್ದ ಕುಟುಂಬಸ್ಥರು ಮೂರು ದಿನಗಳ ಹಿಂದೆ ಗುಂಡ್ಲುಪೇಟೆಗೆ ಆಗಮಿಸಿ, ಎಲಚೆಟ್ಟಿ ಗ್ರಾಮದ ಸ್ನೇಹಿತನ ಫಾರ್ಮ್ ಹೌಸ್ ನಲ್ಲಿ ಉಳಿದುಕೊಂಡಿದ್ದರು. ಬಳಿಕ ಗುರುವಾರ ರಾತ್ರಿ ಗುಂಡ್ಲುಪೇಟೆ ನಂದಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು.
ಜಿ.ವಿ. ಇನ್ಫೋಟೆಕ್ ಕಂಪನಿ ನಡೆಸುತ್ತಿದ್ದ ಓಂಪ್ರಕಾಶ್
ಮೈಸೂರಿನ ಜಿ.ವಿ. ಇನ್ಫೋಟೆಕ್ ಕಂಪನಿ ನಡೆಸುತ್ತಿದ್ದ ಓಂ ಪ್ರಕಾಶ್ ಹಲವು ವರ್ಷಗಳಿಂದ ಅನಿಮೇಷನ್ ಚಿತ್ರಗಳನ್ನು ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ತಮ್ಮ ಸಂಸ್ಥೆಯಲ್ಲಿಯೇ ದಿಗ್ಗಜ ನಟರಾದ ರಾಜ್ ಕುಮಾರ್, ಶಂಕರ್ ನಾಗ್ ರನ್ನು ಅನಿಮೇಷನ್ ಮೂಲಕ ಬಳಸಿ ಚಿತ್ರವನ್ನು ಮಾಡಲು ಯೋಜನೆ ನಡೆಸಿ, ತಂತ್ರಜ್ಞರು ಕೈಕೊಟ್ಟ ಕಾರಣ ಅರ್ಧಕ್ಕೆ ಸ್ಥಗಿತಗೊಳಿಸಿದ್ದರು. ತಮಗೆ ಜೀವ ಭಯವಿದೆಯೆಂದು ನಾಲ್ವರು ಗನ್ ಮ್ಯಾನ್ ಗಳನ್ನು ಸಹ ಇಟ್ಟುಕೊಂಡಿದ್ದರು ಎನ್ನುತ್ತಾರೆ ಅವರ ಲೀಗಲ್ ಅಡ್ವೈಸರ್ ಅಮರ್.
ಸ್ನೇಹಿತರೊಂದಿಗೆ ದುಃಖ ಹೇಳಿಕೊಂಡಿದ್ದರು
ಘಟನೆ ನಡೆದ ಮಧ್ಯರಾತ್ರಿ ಓಂಪ್ರಕಾಶ್ ಸ್ನೇಹಿತರಿಗೆ ಕರೆ ಮಾಡಿ, ನಾನು ಜೀವನದಲ್ಲಿ ಸೋತಿದ್ದೇನೆ. ನಾನು ಯಾರನ್ನು ನಂಬಿದ್ದೇನೋ ಅವರೇ ನನಗೆ ಕೈ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಗುಂಡ್ಲುಪೇಟೆ ಬಳಿ ಕಾರು ನಿಲ್ಲಿಸಿದ್ದೇವೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಓಂ ಪ್ರಕಾಶ್ ಹೊರತುಪಡಿಸಿ ಮಿಕ್ಕ 4 ನಾಲ್ವರಿಗೆ ಹಣೆಗೆ ಗುಂಡಿಟ್ಟು ಕೊಲ್ಲಲಾಗಿದ್ದು, ಓಂ ಪ್ರಕಾಶ್ ತಲೆಯ ಭಾಗಕ್ಕೆ ಗುಂಡು ಹೊಡೆದುಕೊಂಡು ಸಾವಿಗೀಡಾಗಿದ್ದಾರೆ.
ಮಹೇಶ್ ಚಂದ್ರ ಗುರು ಸ್ಪಷ್ಟನೆ
ಐವರು ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಜಮೀನಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೆಲ ಮಾಧ್ಯಮಗಳು ಬಿಂಬಿಸುತ್ತಿದೆ. ಅದು ನನ್ನ ಜಮೀನಲ್ಲ. ನನಗೂ ಅವರು ಯಾರೆಂಬುದು ಗೊತ್ತಿಲ್ಲ. ಸುಖಾ ಸುಮ್ಮನೆ ನನ್ನ ಹೆಸರು ತರುವುದು ಸರಿಯಲ್ಲ ಎಂದು ಚಿಂತಕ ಪ್ರೊ.ಮಹೇಶ್ ಚಂದ್ರ ಗುರು ಒನ್ ಇಂಡಿಯಾಗೆ ಸ್ಪಷ್ಟಪಡಿಸಿದ್ದಾರೆ.
ಈ ಸಾಮೂಹಿಕ ಆತ್ಮಹತ್ಯೆ ವಿಷಯ ತಿಳಿದು ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಆನಂದ್ ಕುಮಾರ್ ಭೇಟಿ ನೀಡಿದ್ದಾರೆ. ಅಲ್ಲದೆ ವಿಧಿ ವಿಜ್ಞಾನ ತಜ್ಞರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಓಂ ಪ್ರಕಾಶ್ ಸಹೋದರಿ ಸೇರಿದಂತೆ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದರು.