ಉಪಚುನಾವಣೆ ಪ್ರಚಾರಕ್ಕಾಗಿ ಮೈಸೂರಿಗೆ ಬಂದ ಕೃಷ್ಣ
ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದ ಎಸ್ ಎಂ ಕೃಷ್ಣ, ಮಾರ್ಚ್ 22 ರಂದು ಅಧಿಕೃತವಾಗಿ ಬಿಜೆಪಿ ಸೇರಿದ ಮೇಲೆ ಇದೇ ಮೊದಲಬಾರಿಗೆ ಉಪಚುನಾವಣಾ ಪ್ರಚಾರಕ್ಕಾಗಿ ಮೈಸೂರಿಗೆ ಬಂದಿದ್ದಾರೆ.
ಮೈಸೂರು, ಏಪ್ರಿಲ್ 3: ನಂಜನಗೂಡು ಮತ್ತು ಗುಂಡ್ಲೆಪೇಟೆ ಎರಡು ಉಪಚುನಾವಣಾ ಕ್ಷೇತ್ರಗಳಲ್ಲೂ ಬಿಜೆಪಿ ಅದ್ಭುತ ಜಯ ದಾಖಲಿಸಲಿದೆ ಎಂದು ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದು, ಬಿಜೆಪಿ ಅದ್ಭುತ ಜಯ ಸಾಧಿಸಲಿದೆ ಎಂದು ಅನುಭವದ ಮಾತುಗಳನ್ನಾಡಿದರು. ಬಿಜೆಪಿ ಸೇರಿದ ಮೇಲೆ ಅವರು ಮೊದಲ ಬಾರಿಗೆ ಪ್ರಚಾರಕ್ಕೆ ಇಳಿದಿದ್ದಾರೆ.
ಏಪ್ರಿಲ್ 9, ಭಾನುವಾರದಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪರಂಥ ಘಟಾನುಘಟಿ ನಾಯಕರ ಉಪಸ್ಥಿತಿ ಮತ್ತಷ್ಟು ಕಳೆತಂದಿದೆ. ಇದೀಗ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಸಹ ಪ್ರಚಾರ ಕಣಕ್ಕಿಳಿದಿರುವುದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.[ಎಸ್.ಎಂ. ಕೃಷ್ಣ ಅಧಿಕೃತವಾಗಿ ಬಿಜೆಪಿ ಸೇರ್ಪಡೆ]
ಅರಮನೆ ನಗರಿಗೆ ಕೃಷ್ಣಾಗಮನ
ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದ ಎಸ್ ಎಂ ಕೃಷ್ಣ, ಮಾರ್ಚ್ 22 ರಂದು ಅಧಿಕೃತವಾಗಿ ಬಿಜೆಪಿ ಸೇರಿದ ಮೇಲೆ ಇದೇ ಮೊದಲಬಾರಿಗೆ ಉಪಚುನಾವಣಾ ಪ್ರಚಾರಕ್ಕಾಗಿ ಮೈಸೂರಿಗೆ ಬಂದಿದ್ದಾರೆ. ಅವರ ಅಭಿಮಾನಿಗಳಿಗೆ ಕೃಷ್ಣ ಆಗಮನದಿಂದ ಮತ್ತಷ್ಟು ಬಲಬಂದಂತಾಗಿದೆ.[ಕೃಷ್ಣ ಸೇರಿದ್ದೇ ಸೇರಿದ್ದು, ಬಿಜೆಪಿ ಲೆಕ್ಕಾಚಾರವೂ ಬದಲು!]
ಟ್ರೇನಿನಲ್ಲಿ ಬಂದ ಕೃಷ್ಣ
ಬೆಂಗಳೂರಿನಿಂದ ಅರಮನೆ ನಗರಿಗೆ ಇಂದು (ಏಪ್ರಿಲ್ 3), ಟಿಪ್ಪು ಎಕ್ಸ್ ಪ್ರೆಸ್ ಟ್ರೇನಿನಲ್ಲಿ ಬಂದ ಕೃಷ್ಣ ಅವರೊಂದಿಗೆ ಬಿಜೆಪಿ ಮುಖಂಡ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸಹ ಇದ್ದರು.[ಮೋದಿ ಆದರ್ಶಗಳಿಗೆ ಮರುಳಾಗಿ ಬಿಜೆಪಿ ಸೇರಿದೆ: ಎಸ್ಸೆಂ ಕೃಷ್ಣ]
ಸ್ಟಾರ್ ಐಕಾನ್ ಗೆ ಆತ್ಮೀಯ ಸ್ವಾಗತ
ಬಿಜೆಪಿಯ ಸ್ಟಾರ್ ಐಕಾನ್ ಎಸ್.ಎಂ.ಕೃಷ್ಣ ಅವರನ್ನು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ನಗರಾಧ್ಯಕ್ಷ ಬಿ.ಮಂಜುನಾಥ್ ಸೇರಿದಂತೆ ಹಲವು ಕಾರ್ಯಕರ್ತರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಗದ್ದುಗೆ ಬಿಜೆಪಿಗೇ!
ಈ ಸಂದರ್ಭ ಮಾತನಾಡಿದ ಎಸ್.ಎಂ.ಕೃಷ್ಣ ಇಂದಿನಿಂದ ಎರಡೂ ಕ್ಷೇತ್ರಗಳ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿ ಅದ್ಭುತ ಗೆಲುವನ್ನು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭವಿಷ್ಯ ನಿಜವಾಗುತ್ತಾ?
ಏಪ್ರಿಲ್ 13, ಗುರುವಾರದಂದು ಹೊರಬೀಳಲಿರುವ ಫಲಿತಾಂಶ ಎಸ್.ಎಂ.ಕೃಷ್ಣ ಅವರು ನುಡಿದ ಭವಿಷ್ಯ ನಿಜವಾಗುತ್ತದೆಯೇ, ಇಲ್ಲವೆ ಎಂಬುದನ್ನು ನಿರ್ಧರಿಸಲಿದೆ.