ಸಿದ್ದು-ತನ್ವೀರ್ ಅಸಮಾಧಾನದ ಬೆಂಕಿಗೆ ಮೂವರು 'ಕೈ' ಕಾರ್ಯಕರ್ತರಿಗೆ ಅಮಾನತು ಶಿಕ್ಷೆ
ಮೈಸೂರು, ಮಾರ್ಚ್ 19: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಾಳಯದಲ್ಲಿ ಸೃಷ್ಟಿಯಾಗಿದ್ದ ಭಿನ್ನಮತ ಸ್ಪೋಟಕ್ಕೆ ಕಡೆಗೂ ಮೂವರು ಕಾಂಗ್ರೆಸ್ ಕಾರ್ಯಕರ್ತರ ತಲೆದಂಡವಾಗಿದೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಸಂಬಂಧಿಸಿದಂತೆ ಶಾಸಕ ತನ್ವೀರ್ ಸೇಠ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭಿನ್ನಮತ ಭುಗಿಲೆದ್ದಿತ್ತು.
ಮೈಸೂರು ಪಾಲಿಕೆ ಅಸಮಾಧಾನದ ಬೆಂಕಿ: ಶಾಸಕ ತನ್ವೀರ್ ಆಪ್ತನಿಗೆ ನೋಟಿಸ್ ನೀಡಿದ ಕಾಂಗ್ರೆಸ್
ಈ ಬೆಳವಣಿಗೆಯ ನಡುವೆಯೇ ನಡೆದ ಪ್ರತಿಭಟನೆಯಲ್ಲಿ ಶಾಸಕ ತನ್ವೀರ್ ಸೇಠ್ ಬೆಂಬಲಿಗರು, ತಮ್ಮದೇ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುವ ಮೂಲಕ ದೊಡ್ಡಮಟ್ಟದ ಅಸಮಾಧಾನಕ್ಕೆ ಕಾರಣವಾಗಿದ್ದರು.
ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿರುವ ಕಾಂಗ್ರೆಸ್, ಶಾಸಕ ತನ್ವೀರ್ ಸೇಠ್ ಬೆಂಬಲಿಗರಾದ ಅಬ್ದುಲ್ ಖಾದರ್ ಶಾಯಿದ್, ಅನ್ವರ್ ಪಾಷಾ ಹಾಗೂ ಪಿ.ರಾಜು ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಾರೆ.
ಮೇಯರ್ ಚುನಾವಣೆ ಮೈತ್ರಿ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ತನ್ವೀರ್ ಸೇಠ್ ನಡುವಿನ ಸಮರದಲ್ಲಿ ಮೂವರಿಗೆ ಪಕ್ಷದಿಂದ ಅಮಾನತು ಶಿಕ್ಷೆ ವಿಧಿಸಲಾಗಿದ್ದು, ಪಕ್ಷ ವಿರೋಧಿ ಚಟುವಟಿಕೆ ಎಂದು ಗುರುತಿಸಿ ಅಮಾನತು ಮಾಡಲಾಗಿದೆ. ಮೂವರನ್ನು ಅಮಾನತು ಮಾಡುವಂತೆ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಶಿಫಾರಸ್ಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಅಮಾನತು ಆದೇಶ ಪತ್ರ ಬಿಡುಗಡೆ ಮಾಡಿದ್ದಾರೆ.
Recommended Video
ಒಟ್ಟಾರೆ ಕಾಂಗ್ರೆಸ್ ನಾಯಕರ ಅಸಮಾಧಾನದ ಜ್ವಾಲೆಗೆ ಮೂವರು ಕಾರ್ಯಕರ್ತರ ತಲೆ ದಂಡವಾಗಿದ್ದು, ಈ ಮಹತ್ವದ ಬೆಳವಣಿಗೆಯಿಂದ ಮೈಸೂರು ಕಾಂಗ್ರೆಸ್ ಪಾಳಯದಲ್ಲಿ ಯಾವ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ ಎಂಬುದು ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ.