ಮೋದಿಯನ್ನು ಬೈದರೆ ಆಕಾಶಕ್ಕೆ ಉಗುಳಿದಂತೆ: ಪ್ರತಾಪ್ ಸಿಂಹ
ಮೈಸೂರು, ಅಕ್ಟೋಬರ್ 02: ಪ್ರವಾಹ ಪರಿಸ್ಥಿತಿಗೆ ಸ್ಪಂದಿಸುವಲ್ಲಿ ಪ್ರಧಾನಿ ಮೋದಿಯವರು ರಾಜ್ಯದ ಬಗ್ಗೆ ಮಲ ತಾಯಿ ಧೋರಣೆ ಹೊಂದಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮೈಸೂರು ಸಂಸದ ಪ್ರತಾಪ ಸಿಂಹ, 'ದೇಶದ ಪ್ರಧಾನಿಗಳಲ್ಲೇ ಅತ್ಯತ್ತಮ ಕೆಲಸ ಮಾಡುತ್ತಿರುವ ಮೋದಿಯವರನ್ನು ದೂಷಿಸುವುದು ಆಕಾಶಕ್ಕೆ ಉಗುಳಿದಂತೆ' ಎಂದು ಹೇಳಿದ್ದಾರೆ.
"ನೀವು ಆಕಾಶದಲ್ಲಿ ಉಗುಳಲು ಪ್ರಯತ್ನಿಸಿದರೆ, ಅದು ನಿಮ್ಮ ಮೇಲೆಯೇ ಬೀಳುತ್ತದೆ. ಈ ಹಿಂದೆ ವಿರೋಧ ಪಕ್ಷದ ನಾಯಕರನ್ನು ದೂಷಿಸುತ್ತಾ ಸಮಯ ವ್ಯರ್ಥ ಮಾಡುತಿದ್ದವರು ಈಗ ಪ್ರಧಾನಿಗಳನ್ನೇ ದೂಷಿಸುತಿದ್ದಾರೆ' ಎಂದರು.
ಪ್ರವಾಹ, ಪರಿಹಾರ; ಪರ-ವಿರೋಧ; ಪ್ರತಾಪ್ ಸಿಂಹ ಹೇಳಿಕೆ
ರಾಜ್ಯದಲ್ಲಿ 17 ಸಂಸದರು ಇದ್ದಾಗ ಕಾವೇರಿ ಮತ್ತು ಮಹಾದಾಯಿ ನದಿ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಏನು ಪ್ರಯೋಜನ ಆಯಿತು ನಿಮಗೆ ಗೊತ್ತೇ ಇದೆಯಲ್ಲವೆ ಎಂದ ಅವರು ಕರ್ನಾಟಕದ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿಲ್ಲ ಮತ್ತು ಬಿಹಾರ ಪ್ರವಾಹದ ಬಗ್ಗೆ ಟ್ವೀಟ್ ಮಾಡಿದರು ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಗೃಹ ಸಚಿವ ಅಮಿತ್ ಶಾ ಅವರನ್ನು ಮೋದಿಯವರು ರಾಜ್ಯಕ್ಕೆ ಕಳುಹಿಸಿದ್ದಾರೆ ಎಂಬುದನ್ನು ನೀವು ಮರೆತಿದ್ದೀರಾ? ಸಂಸದರು ಪ್ರಧಾನ ಮಂತ್ರಿಯನ್ನು ಹೆದರುತ್ತಾರೆ ಎಂದು ಅವರು ಹೇಳುತ್ತಾರೆ "ನಮ್ಮ ಕೆಲಸವನ್ನು ಮಾಡಲು ನಾವು ಇಲ್ಲಿದ್ದೇವೆ. ನಮ್ಮ ಕೆಲಸವನ್ನು ಮಾಡಲು ನಾವು ಯಾಕೆ ಭಯಪಡಬೇಕು? ಮೋದಿಯ ವಿರುದ್ಧದ ಈ ಹೇಳಿಕೆಗಳು ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಅವರು ಹೇಳಿದರು.
ದೇಶದಲ್ಲಿ ಕನಿಷ್ಠ 11 ರಾಜ್ಯಗಳು ಪ್ರವಾಹಕ್ಕೆ ತುತ್ತಾಗಿವೆ ಮತ್ತು ಹಲವಾರು ರಾಜ್ಯಗಳು ಇನ್ನೂ ಪ್ರವಾಹ ಪರಿಹಾರ ಹಣವನ್ನು ಪಡೆದಿಲ್ಲ ಎಂದು ಮಾಹಿತಿ ನೀಡಿದ ಪ್ರತಾಪ್ ಸಿಂಹ, ರಾಜ್ಯವು ಮೊದಲ ಬಾರಿಗೆ ಬರಗಾಲಕ್ಕೆ ತುತ್ತಾದ ಕಾರಣ, ಅಧ್ಯಯನ ತಂಡವು ಬರ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಶಿಫಾರಸುಗಳನ್ನು ಮಾಡಿತು. ಆದ್ದರಿಂದ ಬರ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಅಮಿತ್ ಶಾ ಅವರು ರಾಜ್ಯದ ಪರಿಸ್ಥಿತಿಯನ್ನು ನೋಡಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಹಾರವು ಶೀಘ್ರದಲ್ಲೇ ರಾಜ್ಯವನ್ನು ತಲುಪಲಿದೆ ಅವರು ಹೇಳಿದರು.
ಪ್ರತಾಪ್ ಸಿಂಹ ಅವರು ಇದೇ ಸಮಯದಲ್ಲಿ ಆಡಿದ ಮಾತೊಂದು ಚರ್ಚೆಗೆ ಗ್ರಾಸವಾಗಿದೆ. 'ಯಾರೂ ಅವರ ಜೇಬಿನಿಂದ ದುಡ್ಡು ಕೊಡಲು ಸಾಧ್ಯವಿಲ್ಲ, ಸ್ವಲ್ಪ ತಡವಾಗುತ್ತದೆ' ಎಂದು ಸಿಂಹ ಹೇಳಿದ್ದರು. ಪ್ರತಾಪ್ ಸಿಂಹ ಅವರ ಹೇಳಿಕೆಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, 'ನಮ್ಮ ತೆರಿಗೆ ಹಣವನ್ನು ನಮಗೆ ಕೊಡಿ' ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.