ನುರಿತ ವೈದ್ಯರ ತಂಡವನ್ನು ಮೈಸೂರಿಗೆ ಕಳುಹಿಸಿ: ಎಚ್.ವಿಶ್ವನಾಥ್
ಮೈಸೂರು, ಮಾರ್ಚ್ 30: ಮೈಸೂರು ನಗರದಲ್ಲಿ ಕೊರೊನಾ ಮಹಾಮಾರಿಯ ಬಗ್ಗೆ ಕೆಲವು ಅಧಿಕಾರಿಗಳು ಸರಿಯಾಗಿ ನಿಗಾವಹಿಸಿ ಕೆಲಸ ಮಾಡುತ್ತಿಲ್ಲ, ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸಿಎಂ ಯಡಿಯೂರಪ್ಪಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಸ್ವತಃ ವಿಡಿಯೋ ಮಾಡಿರುವ ಎಚ್.ವಿಶ್ವನಾಥ್ ಅವರು, ಮೈಸೂರು ನಗರದಲ್ಲಿ ಕೊರೊನಾ ಮಹಾಮಾರಿಯ ನರ್ತನ ಜಾಸ್ತಿಯಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಪಕ್ಕದ ನಂಜನಗೂಡು ನರಕ ಸದೃಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬಹುಶಃ ಮೈಸೂರು ನಗರವನ್ನು ಕೊರೊನಾ ಮಹಾಮಾರಿಯು ಮರಣ ಮೃದಂಗ ಬಾರಿಸುವ ನಗರಗಳಲ್ಲಿ ಮುಂಚೂಣಿಯಲ್ಲಿ ಬಂದು ನಿಲ್ಲಬಹುದು ಎಂದು ಭಾಸವಾಗುತ್ತದೆ ಎಂದರು.
ಹಾಗಾಗಿ ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತಿದ್ದೇನೆ. ತಾವು ಮೈಸೂರು ಜಿಲ್ಲೆಯಿಂದ ಅಸಮರ್ಥ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡು ಸಮರ್ಥ ಅಧಿಕಾರಿಗಳನ್ನು ಕಳುಹಿಸಿ, ವಿಶೇಷ ತಂಡವನ್ನು ರಚಿಸಿ ಮೈಸೂರು ಕೊರೊನಾ ಮಹಾಮಾರಿಯ ಹಿಡಿತದಿಂದ ತಪ್ಪಿಸಬೇಕೆಂದು ವಿನಂತಿ ಮಾಡುತ್ತೇನೆ ಎಂದು ಸ್ವತಃ ಎಚ್.ವಿಶ್ವನಾಥ್ ಮುಖ್ಯಮಂತ್ರಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.