ಕಪಿಲಾ ನದಿ ನೀರಿನ ಹರಿವು ಹೆಚ್ಚಳ: ನೂರಾರು ಎಕರೆ ಭತ್ತದ ಬೆಳೆ ನಾಶ
ಮೈಸೂರು, ಜೂನ್.17: ಕಪಿಲಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಸುತ್ತೂರು, ಕುಪ್ಪರವಳ್ಳಿ, ನಗರ್ಲೆ, ಸರಗೂರು, ಬೊಕ್ಕಹಳ್ಳಿ, ಆಲತ್ತೂರು, ಹೊಸಕೋಟೆ, ಬಿಳುಗಲಿ ಹಾಗೂ ತಾಯೂರು ಗ್ರಾಮದಲ್ಲಿ ಪ್ರವಾಹ ಉಂಟಾಗಿ ಹುಲ್ಲಹಳ್ಳಿ ನಾಲೆಯಲ್ಲಿ ರೈತರು ಬೆಳೆದಿರುವ ನೂರಾರು ಎಕರೆ ಪ್ರದೇಶದ ಭತ್ತದ ಬೆಳೆ ಜಲಾವೃತಗೊಂಡಿದೆ.
ಬಹುತೇಕ ಹೆಚ್ಚಿನ ಬೆಳೆ ಕಟಾವಿಗೆ ಸಿದ್ಧಗೊಂಡಿದ್ದು ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಭತ್ತದ ಕಟಾವನ್ನು ಮುಂದೂಡಿದ್ದರು. ಇದೀಗ ಉಕ್ಕಿ ಹರಿಯುತ್ತಿರುವ ಕಪಿಲಾ ನದಿ ನೀರಿನಲ್ಲಿ ಭತ್ತದ ಬೆಳೆ ಕೊಚ್ಚಿ ಹೋಗುವ ಭೀತಿ ರೈತರಿಗೆ ಕಾಡುತ್ತಿದೆ.
ಕೆಲ ರೈತರ ಜಮೀನಿನಲ್ಲಿ ಬೆಳೆದಿರುವ ಕಬ್ಬು, ಬಾಳೆ, ತರಕಾರಿ ಸೇರಿದಂತೆ ಹೂತೋಟಗಳೂ ನೀರಿನಲ್ಲಿ ಮುಳುಗಡೆಯಾಗಿದ್ದು ,ನದಿಯಲ್ಲಿ ನೀರಿನ ಹರಿವು ಹೆಚ್ಚಾದಂತೆ ರೈತರಲ್ಲಿ ಆತಂಕವೂ ಹೆಚ್ಚುತ್ತಿದೆ ಎಂದು ಸುತ್ತೂರು ಗ್ರಾಮದ ರೈತ ಮಹದೇವನಾಯಕ ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸುತ್ತೂರು ಗ್ರಾಮದ ಕಪಿಲಾ ನದಿ ಸೇತುವೆವರೆಗೆ ಕಪಿಲಾ ನೀರು ತುಂಬಿ ಹರಿಯುತ್ತಿದ್ದು , ನದಿಯಲ್ಲಿ ಐದಾರು ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಯುವಿಕೆ ಹೆಚ್ಚಾದಲ್ಲಿ ಸುತ್ತೂರು ಸೇತುವೆ ಮುಳುಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರೀ ವರ್ಷಧಾರೆಗೆ ಮೈದುಂಬಿದ ಜಲಾಶಯಗಳು: ರೈತರ ಮೊಗದಲ್ಲಿ ಖುಷಿ
ತುಂಬಿ ತುಳುಕುತ್ತಿರುವ ಕಪಿಲಾ ನದಿಯ ರುದ್ರ ರಮಣೀಯ ನೋಟವನ್ನು ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಜನರು ನಗರದ ಪ್ರವೇಶ ದ್ವಾರದಲ್ಲಿರುವ ದಳವಾಯಿ ಸೇತುವೆ ಹಾಗೂ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಬಳಿ ಇರುವ ಹೆಜ್ಜಿಗೆ ಸೇತುವೆಗೆ ಭೇಟಿ ನೀಡುತ್ತಿದ್ದಾರೆ. ಮೈದುಂಬಿ ಹರಿಯುತ್ತಿರುವ ಕಪಿಲಾ ನದಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.