ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜಿಟಿಡಿ ಜೊತೆ ಸಿದ್ದರಾಮಯ್ಯ ಸ್ನೇಹ; ಈಶ್ವರಪ್ಪ
ಮೈಸೂರು, ಡಿಸೆಂಬರ್ 1: "ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡರ ಜೊತೆ ಸ್ನೇಹ ಬೆಳೆಸಿದ್ದಾರೆ," ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, "ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರನ್ನು ಸೋಲಿಸಲು ಎಲ್ಲರೂ ಜಿ.ಟಿ. ದೇವೇಗೌಡರಿಗೆ ಬೆಂಬಲ ನೀಡಿದರು. ಇದೀಗ ಸಿದ್ದರಾಮಯ್ಯಗೆ ಗತಿ ಇಲ್ಲ, ಹೇಗಾದರೂ ಮಾಡಿ ನನ್ನನ್ನು ಉಳಿಸಪ್ಪಾ ಎಂದು ಜಿಟಿಡಿ ಬಳಿ ಬಂದಿದ್ದಾರೆ," ಎಂದು ವ್ಯಂಗ್ಯವಾಡಿದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ, ಜೆಡಿಎಸ್ ಅಭ್ಯರ್ಥಿಯಾಗಿ ಜಿಟಿ ದೇವೇಗೌಡ ಸ್ಪರ್ಧಿಸಿದ್ದರು. ಮುಖ್ಯಮಂತ್ರಿ ಹುದ್ದೆಯಲ್ಲಿದ್ದೂ ಸಿದ್ದರಾಮಯ್ಯ ಸೋಲನುಬವಿಸಬೇಕಾಯಿತು. ಆದರೆ ದೂರದ ಬಾದಾಮಿ ಕ್ಷೇತ್ರದಲ್ಲಿ ಗೆದ್ದು, ಸಮಾಧಾನ ಪಟ್ಟುಕೊಳ್ಳಬೇಕಾಯಿತು.
"ಮುಂದಿನ ವಿಧಾನಸಭೆ ಚುನಾವಣೆ ವೇಳೆ ಬಾದಾಮಿ ಕ್ಷೇತ್ರದ ಜನ ಸಿದ್ದರಾಮಯ್ಯರನ್ನು ಸೋಲಿಸುತ್ತಾರೆ. ಹೀಗಾಗಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜಿ.ಟಿ. ದೇವೇಗೌಡ ಜೊತೆ ಸ್ನೇಹ ಬೆಳೆಸಿದ್ದಾರೆ. ಸಿದ್ದರಾಮಯ್ಯ ಜೊತೆಗೆ ಕೈ ಜೋಡಿಸಿ ನೀವು ಒಬ್ಬ ಅವಕಾಶವಾದಿ ರಾಜಕಾರಣಿ ಆಗಬೇಡಿ ಎಂದು ಜಿ.ಟಿ. ದೇವೇಗೌಡರಿಗೆ ಸಲಹೆ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ, ನಾವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನೇ ಸೋಲಿಸಿದ್ದೀವಿ, ಇನ್ನು ಜಿಟಿಡಿ-ಸಿದ್ದು ಒಂದಾದರೆ ಭಯ ಯಾಕೆ?," ಎಂದು ಪ್ರಶ್ನಿಸಿದರು.
"ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳಿಗೆ ಏನೂ ಮಾಡಲಿಲ್ಲ. ಹೀಗಾಗಿ ದಲಿತರು, ಹಿಂದುಳಿದವರು ಕಾಂಗ್ರೆಸ್ ಅನ್ನು ದೂರ ಮಾಡಿದ್ದಾರೆ. ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ ಅನ್ನುತ್ತಿದ್ದರು, ಆದರೆ ಈಗ ಆ ಪರಿಸ್ಥಿತಿ ಇಲ್ಲ. ಹಿಂದುಳಿದವರು, ದಲಿತರು ನಮ್ಮ ಜೊತೆ ಬರುತ್ತಿದ್ದಾರೆ," ಎಂದು ಈಶ್ವರಪ್ಪ ಹೇಳಿದರು.
"ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎಚ್.ಡಿ. ದೇವೇಗೌಡರ ಭೇಟಿ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ನೀಡಿದ ಗೌರವವನ್ನು ಸಿದ್ದರಾಮಯ್ಯ ನೋಡಿರಬೇಕು. ಸಿದ್ದರಾಮಯ್ಯನವರು ಇದನ್ನು ನೋಡಿ ಕಲಿಯಬೇಕಿದೆ. ಎಲ್ಲರನ್ನೂ ಏಕವಚನದಲ್ಲಿ ಸಿದ್ದರಾಮಯ್ಯ ಕರೆಯುತ್ತಾರೆ. ಹೀಗಾಗಿ, ಅವರಿಗೆ ಅದೇ ರೀತಿಯಲ್ಲಿ ನಾವು ಉತ್ತರ ಕೊಡುತ್ತಿದ್ದೇವೆ. ನರೇಂದ್ರ ಮೋದಿ ಮತ್ತು ದೇವೇಗೌಡರ ಭೇಟಿ ರಾಷ್ಟ್ರದ ರಾಜಕಾರಣಿಗಳಿಗೆ ಮಾದರಿ," ಎಂದರು.
"ಜಾತಿ ಜನಗಣತಿಗೆ ಕಾರ್ಯದರ್ಶಿಯೇ ಸಹಿ ಮಾಡಿಲ್ಲ. ಸಹಿ ಮಾಡಿಲ್ಲ ಅಂದರೆ ಅದು ರದ್ದಿ ಕಾಗದ. ಯಾವತ್ತು ಹಿಂದುಳಿದ ವರ್ಗಗಳ ಆಯೋಗ ಸರಿಯಾದ ರೀತಿಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸುತ್ತದೋ ಅಂದೇ ವರದಿ ಮೇಲೆ ಸರಕಾರ ಕ್ರಮ ಕೈಗೊಳ್ಳುತ್ತದೆ."
"ಜಾತಿ ಗಣತಿ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬರೀ ಸುಳ್ಳು ಹೇಳುತ್ತಿದ್ದು, ಆ ಮೂಲಕ ಬರೀ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ," ಎಂದು ಮೈಸೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.