ಸ್ವಾಮೀಜಿ ಹೆಸರು ಬಳಸಿ ವಿಶ್ವನಾಥ್ ಕೀಳುಮಟ್ಟದ ಪ್ರಚಾರ ಎಂದು ಸಿದ್ದು ಟ್ವೀಟ್
ಮೈಸೂರು, ಡಿಸೆಂಬರ್ 4: "ಹುಣಸೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಕೀಳುಮಟ್ಟದ ಅಪಪ್ರಚಾರ ನಡೆಸುತ್ತಿದ್ದಾರೆ" ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
"'ಸರ್ವಜನ ಮಾನ್ಯರಾಗಿರುವ ಸ್ವಾಮೀಜಿ ಹೆಸರನ್ನು ರಾಜಕೀಯ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸುತ್ತೇನೆ. ಸುಳ್ಳು ಸುದ್ದಿಯನ್ನು ಯಾರೂ ನಂಬದಿರಿ. ಉಂಡ ಮನೆಗೆ ಎರಡು ಬಗೆದವರನ್ನು ಸೋಲಿಸಿ'' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮೂಲಕ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ
'ಕುರುಬ ಸಮಾಜದ ಶ್ರೀ ನಿರಂಜನಾ ನಂದಪುರಿ ಸ್ವಾಮೀಜಿ ಸಂಧಾನ ಫಲ' ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹರಿದಾಡುತ್ತಿರುವ ವಿಷಯವನ್ನು ಸಿದ್ದರಾಮಯ್ಯ ತಮ್ಮ ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.
ದೇವರಾಜು ಅರಸು ಬೆನ್ನಿಗೆ ಚೂರಿ ಹಾಕಿದ್ದ ವಿಶ್ವನಾಥ್: ಸಿದ್ದರಾಮಯ್ಯ
ವಿಶ್ವನಾಥ್ ಗೆ ಬೆಂಬಲ ಸುಳ್ಳು
ಸಿದ್ದರಾಮಯ್ಯ ಅವರು ಹುಣಸೂರು ತಾಲೂಕಿನ ಕುರುಬ ಸಮುದಾಯದ ಹಳ್ಳಿಗಳಿಗೆ ಭೇಟಿ ನೀಡದಂತೆ ಸ್ವಾಮೀಜಿಗಳಿಂದ ಸೂಚನೆ ಬಂದಿದೆ. ಹೀಗಾಗಿ, ಸ್ವಾಮೀಜಿ ಅವರ ಆಶಯದ ಮೇರೆಗೆ ಹುಣಸೂರಿನ ಹಳ್ಳಿಗಳ ಪ್ರವಾಸವನ್ನು ಸಿದ್ದರಾಮಯ್ಯ ದಿಢೀರ್ ರದ್ದುಪಡಿಸಿ ಸಮಾಜದ ಹಿರಿಯ ರಾಜಕಾರಣಿ ಅಡಗೂರು ಎಚ್.ವಿಶ್ವನಾಥ್ ಅವರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೋಸ್ಟರ್ ನಲ್ಲಿನ ಸುದ್ದಿ ಸುಳ್ಳು ಎಂದ ಜಿಟಿಡಿ
ಇದೇ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಮಂಗಳವಾರ ಮಾಧ್ಯಮ ಹೇಳಿಕೆ ನೀಡಿ, "ತಾವು ಹುಣಸೂರು ಕ್ಷೇತ್ರದಲ್ಲಿ ವಿಶ್ವನಾಥ್ ಅವರಿಗೆ ಬೆಂಬಲ ನೀಡಿದ್ದೇನೆಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾದ ವಿಚಾರ. ಇಂತಹ ಸುದ್ದಿ ಸೃಷ್ಟಿಸಿದವರ ವಿರುದ್ಧ ಹಾಗೂ ಇಂತಹ ಸುದ್ದಿ ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ" ಎಂದಿದ್ದಾರೆ.
ಜೆಡಿಎಸ್ ನವರೆಲ್ಲ ಕಾಂಗ್ರೆಸ್ ಗೆ ಮತ ಹಾಕಿ ಎಂದಿದ್ದೇಕೆ ಸಿದ್ದು?
ಚುನಾವಣೆಯಲ್ಲಿ ಜಿಟಿಡಿ ತಟಸ್ಥ
"ಈ ಉಪ ಚುನಾವಣೆಯಲ್ಲಿ ತಟಸ್ಥನಾಗಿದ್ದೇನೆ. ಯಾವ ಪಕ್ಷದ ಅಭ್ಯರ್ಥಿ ಪರವೂ ಮತ ಕೇಳಿಲ್ಲ. ಯಾವ ಅಭ್ಯರ್ಥಿ ಪರವೂ ಒಲವು ತೋರಿಸಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಒಕ್ಕಲಿಗ ಸಮುದಾಯ ಒಗ್ಗೂಡಿ ಬೆಂಬಲಿಸಬೇಕೆಂದು ತಮ್ಮ ಹೆಸರಿನಲ್ಲಿ ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ. ಕಿಡಿಗೇಡಿಗಳು ಸೃಷ್ಟಿಸಿರುವ ಇಂತಹ ಸುಳ್ಳು ಸುದ್ದಿಗೆ ಮತದಾರರು ಕಿವಿಗೊಡಬಾರದು ಎಂದು ಜಿ.ಟಿ.ದೇವೇಗೌಡ ಮನವಿ ಮಾಡಿದ್ದಾರೆ.