ಸಿದ್ದರಾಮಯ್ಯ ನನ್ನ ತಂದೆ ಸಮಾನ, ತಮಾಷೆಗೆ ಹೊಡೆದರಷ್ಟೆ; ಕಪಾಳಮೋಕ್ಷ ಮಾಡಿಸಿಕೊಂಡ ಬೆಂಬಲಿಗನ ಸ್ಪಷ್ಟನೆ
ಮೈಸೂರು, ಸೆಪ್ಟೆಂಬರ್ 4: "ಸಿದ್ದರಾಮಯ್ಯನವರು ನನ್ನ ತಂದೆ ಇದ್ದ ಹಾಗೆ. ಅವರು ಹೊಡೆದಿದ್ದು ನನಗೆ ಯಾವ ಬೇಸರವನ್ನೂ ತರಿಸಿಲ್ಲ" ಎಂದು ಬೆಳಿಗ್ಗೆ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಕಪಾಳಮೋಕ್ಷ ಮಾಡಿಸಿಕೊಂಡ ಬೆಂಬಲಿಗ ಸ್ಪಷ್ಟನೆ ನೀಡಿದ್ದಾರೆ.
ಡಿಕೆಶಿ ಬೆಂಬಲಿಗನ ಕೆನ್ನೆಗೆ ಬಾರಿಸಿದ ಸಿದ್ದರಾಮಯ್ಯ
ನಾಡನಹಳ್ಳಿ ರವಿ ಸಿದ್ದರಾಮಯ್ಯನವರ ಆಪ್ತ. ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯರವರು ಆಗಮಿಸಿದ ವೇಳೆ ರವಿ ಕೆನ್ನೆಗೆ ಹೊಡೆದಿದ್ದರು. ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ರವಿ, "ಅವರು ನನಗೆ ತಮಾಷೆಗೆ ಕಪಾಳಕ್ಕೆ ಹೊಡೆದರಷ್ಟೆ. ನಾನು ಅದನ್ನು ತಪ್ಪಾಗಿ ತಿಳಿದಿಲ್ಲ" ಎಂದರು.
"ನಾನು ಸಿದ್ದರಾಮಯ್ಯನವರನ್ನು ಮೈಸೂರಿನಲ್ಲಿ ಡಿಕೆಶಿ ಪರ ನಡೆಯುತ್ತಿದ್ದ ಪ್ರತಿಭಟನೆಗೆ ಆಹ್ವಾನಿಸಲು ಬಂದಿದ್ದೆ. ನಾನು ಕೇಳಿದ್ದಕ್ಕೆ, ಬರಲ್ಲ ನೀವೇ ಪ್ರತಿಭಟನೆ ಮಾಡಿ ಅಂದರು. ಆದರೆ ಮರಿಗೌಡರು ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ಕೊಡೋಕೆ ಹೇಳಿದ್ದರು. ಅದಕ್ಕೆ ಕೊಡೋಕೆ ಹೋದೆ. ಅದಕ್ಕೆ ತಮಾಷೆಗೆ ಅವರು ಕಪಾಳಕ್ಕೆ ಹೊಡೆದರು. ಇದರಲ್ಲಿ ಬೇರೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ" ಎಂದು ಸಿದ್ದರಾಮಯ್ಯ ಆಪ್ತರು ಹಾಗೂ ಗ್ರಾಮಪಂಚಾಯಿತಿ ಮಾಜಿ ಸದಸ್ಯ ನಾಡನಹಳ್ಳಿ ರವಿ ಸ್ಪಷ್ಟಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಹಿಂತಿರುಗಿ ತೆರಳುತ್ತಿದ್ದ ಸಮಯದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗ ರವಿಯವರು ಫೋನ್ ಮಾಡಿ ಮಾತನಾಡುವಂತೆ ಅವರಿಗೆ ಕೊಟ್ಟಿದ್ದರು. ಇದಕ್ಕೆ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ಮೊಬೈಲ್ ತಳ್ಳಿ, ಬೆಂಬಲಿಗನ ಕೆನ್ನೆಗೆ ಬಾರಿಸಿ, ನಡಿಯೋ ಎಂದು ಕರೆದುಕೊಂಡು ಹೋಗಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಯಿತು.