ಸಿದ್ದರಾಮಯ್ಯ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ: ಕೃಷ್ಣ ಟೀಕೆ
ಕಾಂಗ್ರೆಸ್ ಸರ್ಕಾರ ದೂರದೃಷ್ಟಿ, ಗೊತ್ತುಗುರಿ ಇಲ್ಲದ ಸರ್ಕಾರ ಎಂದು ಇಂದಿನಿಂದ ಬಿಜೆಪಿ ಪರ ಪ್ರಚಾರ ಕಾರ್ಯ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹೇಳಿದ್ದಾರೆ.
ಮೈಸೂರು, ಏಪ್ರಿಲ್ 3 : ರಾಜ್ಯದಲ್ಲಿ ಆಡಳಿತದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ದೂರ ದೃಷ್ಟಿ, ಗೊತ್ತು ಗುರಿ ಇಲ್ಲ. ಒಂದು ಅಂದಾಜಿನ ಪ್ರಕಾರ ರಾಜ್ಯ ಸರ್ಕಾರ ನಡೆಯುತ್ತಿದೆ ಎಂದು ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಟೀಕಿಸಿದರು.
ನಂಜನಗೂಡಿನಲ್ಲಿ ಏಪ್ರಿಲ್ 9, ಭಾನುವಾರದಂದು ನಡೆಯಲಿರುವ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಪರ ಪ್ರಚಾರಕ್ಕೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಇಂದಿನ ಸರ್ಕಾರಕ್ಕೆ ಇರಬೇಕಾದ ಮಾನದಂಡಗಳನ್ನ ಸೂಕ್ಷ್ಮವಾಗಿ ಪರಿಶೀಲಿಸಿದರೆ ದಿನದ 24 ಗಂಟೆ ಕಾರ್ಯನಿರ್ವಹಿಸುವಂತೆ ಕಾಣಿಸುತ್ತಿಲ್ಲ.
ಸಂಜೆ ಕಚೇರಿ ಬಾಗಿಲು ಹಾಕಿ ಬೆಳಿಗ್ಗೆ ಬಂದು ಬಾಗಿಲು ತೆಗೆಯುತ್ತಿರುವಂತೆ ಭಾಸವಾಗುತ್ತಿದೆ ಎಂದು ವ್ಯಂಗ್ಯವಾಡಿದರು.[ಅಧಿಕಾರ ದುರ್ಬಳಕೆಯ ಆರೋಪ ತಳ್ಳಿಹಾಕಿದ ಪರಮೇಶ್ವರ]
ಸ್ವಾಭಿಮಾನದ ಬಾವುಟ ನಂಜನಗೂಡಿನಲ್ಲಿ ಬಹಳ ಎತ್ತರಕ್ಕೆ ಹಾರಬೇಕಿದೆ.ರಾಜಕೀಯ ಧ್ರುವೀಕರಣ ನಿರಂತರ ಪ್ರಕ್ರಿಯೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದು ಯಾಕೆ ಅಂತ ಈಗಾಗಲೇ ಹೇಳಿದ್ದೇನೆ.
ನಾನು ನೋಡಿದ ಅತಿ ಕೆಟ್ಟ ಸರ್ಕಾರ ಇದು ಎಂದು ವಿಷಾದದಿಂದ ಹೇಳಬಯಸುತ್ತೇನೆ ಎಂದರು.[ಉಪಚುನಾವಣೆ ಪ್ರಚಾರಕ್ಕಾಗಿ ಮೈಸೂರಿಗೆ ಬಂದ ಕೃಷ್ಣ]
ಅಹಂ ಬ್ರಹ್ಮಾಸ್ಮಿ ಎಂಬ ಕಾರ್ಯಕ್ರಮದಲ್ಲಿ ಒಂದೂವರೆ ವರ್ಷಗಳ ಹಿಂದೆ ನನ್ನ ಭಾವನೆಗಳನ್ನು ಹೇಳಿದ್ದೇನೆ. ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮನೆಗಳಿಗೆ ಹೋಗಿ ಸಾಂತ್ವನ ಹೇಳಿದ್ದೇನೆ.
ಯಾವುದೇ ಆಸೆ ಆಕಾಂಕ್ಷೆ ಇಟ್ಟುಕೊಂಡು ಬಿಜೆಪಿಗೆ ಸೇರ್ಪಡೆ ಆಗಿಲ್ಲ. ದೇಶಕ್ಕೊಬ್ಬ ಬಲಿಷ್ಠ ನಾಯಕ ಸಿಕ್ಕರುವುದರಿಂದ ಬಿಜೆಪಿ ಗೆ ಸೇರ್ಪಡೆಯಾಗಿದ್ದೇನೆಂದು ಹೇಳಿದರು.
ಇದೇ ಸಂದರ್ಭದಲ್ಲಿ, 'ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದೊದಗಿದ್ದು, ನೀವು(ಮಾಧ್ಯಮ) ಹುಡುಕುವುದಕ್ಕೆ ಸಹಾಯ ಮಾಡಿ' ಎಂದು ಪತ್ರಕರ್ತರ ಬಳಿ ಹಾಸ್ಯಚಟಾಕಿ ಹಾರಿಸಿದರು.[ಯಡಿಯೂರಪ್ಪ ಸಂದರ್ಶನ: 'ನಾನು ಸಾವಿನ ಮನೆಯಲ್ಲಿ ರಾಜಕಾರಣ ಮಾಡಲ್ಲ]
ಕಾಂಗ್ರೆಸ್ ಮುಖಂಡರಾಗಿದ್ದ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 13, ಗುರುವಾರದಂದು ಫಲಿತಾಂಶ ಹೊರಬೀಳಲಿದೆ.
ಬಿಜೆಪಿಗೆ ಸೇರಿದ ನಂತರ ಮೊಟ್ಟಮೊದಲ ಬಾರಿಗೆ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿರುವ ಕೃಷ್ಣ ಆಗಮನದಿಂದ ಕ್ಷೇತ್ರದ ಕಳೆ ಮತ್ತಷ್ಟು ಹೆಚ್ಚಿದೆ.