'ನನ್ನ ಸೋಲಿಗಿಂತ ಸಿದ್ದರಾಮಯ್ಯರ ಸೋಲು ನೋವುಂಟು ಮಾಡಿದೆ'
ಮೈಸೂರು, ಮೇ 28 : ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ. ಕ್ಷೇತ್ರದಲ್ಲಿ ನನಗೂ ಸೋಲು ಆಗಿದ್ದು, ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರಿಂದ ಜಿಲ್ಲೆಯಲ್ಲಿ ಪಕ್ಷದ ಸೋಲಿಗೆ ನಾನೇ ಜವಾಬ್ದಾರಿ. ಸ್ವ ಕ್ಷೇತ್ರದ ಸೋಲಿಗೂ ನಾನೇ ನೇರ ಹೊಣೆ ಎಂದು ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಮತದಾರರಿಗೆ ಕೃತಜ್ಞತೆ ಹಾಗೂ ಸೋಲಿನ ಆತ್ಮಾವಲೋಕನಾ ಸಭೆಯಲ್ಲಿ ಅವರು ಭಾವನಾತ್ಮಕ ನುಡಿಗಳನ್ನಾಡಿದರು. ಈಗಲೂ ಚುನಾವಣೆ ನಡೆದರೆ ಸೋತಿರುವ ಅಂತರದಲ್ಲಿ ಮತ್ತೆ ನನ್ನನ್ನು ಗೆಲ್ಲಿಸುವಷ್ಟು ಆಕ್ರೋಶ ಇಲ್ಲಿ ಸೇರಿರುವ ಕಾರ್ಯಕರ್ತರು ಮತ್ತು ಮುಖಂಡರಲ್ಲಿದೆ ಎಂದು ಹೇಳಿದರು.
ಟಿ. ನರಸೀಪುರದಲ್ಲಿ ಮಹದೇವಪ್ಪಗೆ ಮುಖಭಂಗ
ನನ್ನ ಕೈಯಲ್ಲಿ ಮಾಡಲು ಸಾಧ್ಯವಿಲ್ಲದ ಕೆಲಸಗಳನ್ನು ಗೆದ್ದಿರುವವರು ಮಾಡಲಿ ಎಂದು ಶುಭವನ್ನು ಹಾರೈಸುವುದಾಗಿ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಹಲವು ದಶಕಗಳ ಕಾಲ ಚುನಾವಣೆಯಲ್ಲಿ ಕೈ ಹಿಡಿದು ಜನರು ಅಧಿಕಾರ ಕೊಟ್ಟಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದರಿಂದ ಯಾರೂ ಕಂಡರಿಯದ ಮಟ್ಟಿಗೆ ಅಭಿವೃದ್ಧಿ ಕೆಲಸವನ್ನು ಮಾಡಿದೆ. ಅಭಿವೃದ್ಧಿಯೇ ಗೆಲುವಿಗೆ ಮಾನದಂಡ ಅಲ್ಲ ಎಂಬುದನ್ನು ಚುನಾವಣೆ ತೋರಿಸಿಕೊಟ್ಟಿದೆ ಎಂದರು.
ಇನ್ನು ನನ್ನ ಸೋಲಿಗಿಂತ ಹೆಚ್ಚು ನೋವು ತಂದಿದ್ದು ಸಿದ್ದರಾಮಯ್ಯನವರ ಸೋಲು. ನಿಮ್ಮಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಎಂದು ಕುಮಾರಸ್ವಾಮಿಯನ್ನು ಲೇವಡಿ ಮಾಡುತ್ತಿದ್ದ ಸಿದ್ದರಾಮಯ್ಯನವರೇ ಇಂದು ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡಿರುವುದು ಬಿಜೆಪಿಯವರನ್ನು ದೂರ ಮಾಡಲು ಮಾತ್ರ ಎಂದು ಜೆಡಿಎಸ್ ಜತೆಗಿನ ಕಾಂಗ್ರೆಸ್ ಮೈತ್ರಿಯನ್ನು ಸಮರ್ಥಿಸಿಕೊಂಡರು.