ಬಿಜೆಪಿ ನೋಟಿಸ್ ಗೆ ಹೆದರಲ್ಲ, ನಾನೂ ಒಬ್ಬ ಲಾಯರ್; ಸಿದ್ದರಾಮಯ್ಯ
ಮೈಸೂರು, ಆಗಸ್ಟ್ 01: "ಬಿಜೆಪಿ ನಾಯಕರು ನೀಡಿರುವ ನೋಟಿಸ್ ಗೆ ನಾನೇನೂ ಹೆದರುವುದಿಲ್ಲ. ನಾನೂ ಒಬ್ಬ ಲಾಯರ್ ತಾನೇ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪಕ್ಕೆ ನೋಟಿಸ್ ನೀಡಿದ ವಿಚಾರದ ಬಗ್ಗೆ ಕಿಡಿಕಾರಿದರು. ನೋಟಿಸ್ ಬಂಡವಾಳ ಏನು ನನಗೆ ಗೊತ್ತಿಲ್ವಾ? ನಾನೇನು ನೋಟಿಸ್ ಗೆ ಹೆದರಿಕೊಳ್ತಿನಾ? ನಾನು ಆರೋಪ ಮಾಡಿರೋದು ಸರ್ಕಾರದ ಮೇಲೆ. ಅವನ್ಯಾರೋ ನೋಟಿಸ್ ಕೊಟ್ಟಿದ್ದಾನೆ. ಯಾರೋ ನೋಟಿಸ್ ಕೊಟ್ಟರೆ ಏನ್ ಪ್ರಯೋಜನ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಲೀಗಲ್ ನೋಟಿಸ್ ನೀಡಿದ ಬಿಜೆಪಿ
ಜೈಲಿಗೆ ಹೋಗಿ ಬಂದ ಡಿಕೆಶಿ ಪಕ್ಕದಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಇವರಿಗೇನು ಬಹಳ ನೈತಿಕತೆ ಇದೆಯೇ? ಡಿಕೆಶಿ ತಪ್ಪಿತಸ್ಥ ಅಂತ ತೀರ್ಮಾನ ಆಗಿದ್ಯಾ? ಅದು ರಾಜಕೀಯ ದುರುದ್ದೇಶದಿಂದ ಹಾಕಿರುವ ಕೇಸ್. ಅವರಿಗೆ ಕೋರ್ಟು ಜಾಮೀನು ಕೊಟ್ಟಿದೆ. ಆ ಬಗ್ಗೆ ನಾನು ಮಾತನಾಡೋಲ್ಲ. ಈ ಸಂದರ್ಭದಲ್ಲಿ ಅದರ ಅವಶ್ಯಕತೆ ಇಲ್ಲ" ಎಂದು ಬಿಜೆಪಿ ನಾಯಕರ ಆರೋಪಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಹೂಬ್ಲೋಟ್ ವಾಚ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ಹೂಬ್ಲೋಟ್ ವಾಚ್ ವಿವಾದ ಮುಗಿದು ಹೋದ ಕಥೆ ಮತ್ಯಾಕೆ ಅದು?. ನಾನು ಯಡಿಯೂರಪ್ಪರ ಹಳೆ ಕೇಸ್ ಬಗ್ಗೆ ಮಾತಾಡ್ಲಾ? ನಾನು ಸರ್ಕಾರಕ್ಕೆ ಆ ವಾಚ್ ವಾಪಸ್ಸು ಕೊಟ್ಟಿದ್ದೇನೆ. ಎಸಿಬಿ ತನಿಖೆ ಆಗಿ ಕ್ಲೀನ್ ಚಿಟ್ ಸಿಕ್ಕಿದೆ. ನಾನೇನು ವಾಚ್ ಸರ್ಕಾರದ ದುಡ್ಡಿನಿಂದ ತೆಗೆದುಕೊಂಡಿದ್ನಾ?. ಸರ್ಕಾರದಿಂದ ಲೂಟಿ ಮಾಡಿದ ದುಡ್ದಿನಿಂದ ವಾಚ್ ಖರೀದಿಸಿದ್ನಾ? ಅದನ್ನ ಯಾರೋ ಕೊಟ್ಟಿದ್ರು, ಅದಕ್ಕೆ ಅವರು ಅಫಿಡೇವಿಟ್ ಕೊಟ್ಟಿದ್ದಾರೆ. ಈಗ ಅದನ್ನು ಮತ್ಯಾಕೆ ತೆಗಿದಿದ್ದಾರೆ. ಇದೆಲ್ಲ ಜನರನ್ನ ದಾರಿ ತಪ್ಪಿಸುವ ಕೆಲಸ, ಅಷ್ಟೆ ಹೊರತು ಬೇರೇನಲ್ಲ, ಇದಕ್ಕೆ ಪುನಃ ಪ್ರತಿಕ್ರಿಯಿಸುವುದಿಲ್ಲ" ಎಂದರು.