ಮೈಸೂರಲ್ಲಿ ಹೆಲಿ ಟೂರಿಸಂ; ಖಡಕ್ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ
ಮೈಸೂರು, ಏಪ್ರಿಲ್ 12; ಮೈಸೂರು ನಗರದಲ್ಲಿ ಹೆಲಿ ಟೂರಿಸಂ ಆರಂಭಿಸುವ ಪ್ರವಾಸೋದ್ಯಮ ಇಲಾಖೆ ಪ್ರಸ್ತಾವನೆಗೆ ವಿರೋಧ ಕೇಳಿ ಬರುತ್ತಿದೆ. ಹೆಲಿಪ್ಯಾಡ್ಗಾಗಿ ಮರಗಳನ್ನು ಕಡಿಯುವುದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೆಲಿ ಟೂರಿಸಂ ಕುರಿತು ಟ್ವೀಟ್ ಮಾಡಿದ್ದಾರೆ. "600ಕ್ಕೂ ಹೆಚ್ಚು ಮರಗಳನ್ನು ಕಡಿಯುವ ನಿರ್ಧಾರವನ್ನು ತಕ್ಷಣ ಕೈ ಬಿಡಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಹೆಲಿ ಟೂರಿಸಂ; ಸಂಸದ ಪ್ರತಾಪ್ ಸಿಂಹ ವಿರೋಧ
"ಮೈಸೂರಿನ ಲಲಿತಮಹಲ್ ಅರಮನೆಗಾಗಿ ಹೆಲಿಪ್ಯಾಡ್ ನಿರ್ಮಿಸಲು 600ಕ್ಕೂ ಹೆಚ್ಚು ಮರಗಳನ್ನು ಕಡಿಯುವ ನಿರ್ಧಾರವನ್ನು ಬಿಜೆಪಿ ಕರ್ನಾಟಕ ತಕ್ಷಣ ಕೈಬಿಡಬೇಕು. ಇದರ ವಿರುದ್ಧ ಸಿಡಿದೆದ್ದಿರುವ ನನ್ನ ಮೈಸೂರಿನ ಜನತೆಯ ಜೊತೆ ನಾನೂ ಇದ್ದೇನೆ" ಎಂದು ಸಿದ್ದರಾಮಯ್ಯ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಹೆಲಿ ಟೂರಿಸಂಗೆ ಆಕ್ಷೇಪ: ಮರಗಳನ್ನು ಉಳಿಸಲು ಅಭಿಯಾನ
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೋಮವಾರ ಲಲಿತಮಹಲ್ ಅರಮನೆ ಬಳಿಯ ಹೆಲಿ ಟೂರಿಸಂ ಯೋಜನೆ ನಿರ್ಮಾಣ ಜಾಗಕ್ಕೆ ಭೇಟಿ ನೀಡಿದರು. ಈ ಜಾಗದಲ್ಲಿ ಮರಗಳನ್ನು ಕಡಿದು ಹೆಲಿಪ್ಯಾಡ್ ನಿರ್ಮಾಣ ಮಾಡವ ಅಗತ್ಯವಿಲ್ಲ ಎಂದು ಹೇಳಿದ್ದರು.
ಮೈಸೂರಿನ ಲಲಿತಮಹಲ್ ಅರಮನೆಗಾಗಿ ಹೆಲಿಪ್ಯಾಡ್ ನಿರ್ಮಿಸಲು 600ಕ್ಕೂ ಹೆಚ್ಚು ಮರಗಳನ್ನು ಕಡಿಯುವ ನಿರ್ಧಾರವನ್ನು @BJP4Karnataka ತಕ್ಷಣ ಕೈಬಿಡಬೇಕು.
— Siddaramaiah (@siddaramaiah) April 12, 2021
ಇದರ ವಿರುದ್ಧ ಸಿಡಿದೆದ್ದಿರುವ ನನ್ನ ಮೈಸೂರಿನ ಜನತೆಯ ಜೊತೆ ನಾನೂ ಇದ್ದೇನೆ.#SaveMysuru
ಮಾಧ್ಯಮಗಳ ಜೊತೆ ಮಾತನಾಡಿದ್ದ ಸಂಸದರು, "ಮರಕಡಿದು ಹೆಲಿಪ್ಯಾಡ್ ನಿರ್ಮಿಸುವ ಅಗತ್ಯವಿಲ್ಲ. ಪಕ್ಕದಲ್ಲೇ ಇರುವಂತಹ ಮಹಾರಾಣಿ ಅವರಿಗೆ ಸೇರಿದಂತಹ ಹೆಲಿಪ್ಯಾಡ್ ಅನ್ನು ಭೋಗ್ಯ ಅಥವಾ ಬಾಡಿಗೆಗೆ ತೆಗೆದುಕೊಳ್ಳಬಹುದು" ಎಂದು ಹೇಳಿದ್ದರು.
ಲಲಿತ ಮಹಲ್ ಹೆಲಿಪ್ಯಾಡ್ ಸುತ್ತಮುತ್ತಲಿನ ಸ್ಥಳದಲ್ಲಿ ಹೆಲಿ ಟೂರಿಸಂ ಆರಂಭಕ್ಕೆ ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್ ಸ್ಥಳ ನಿಗದಿ ಮಾಡಿದ್ದರು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದ ಅಧಿಕಾರಿಗಳು ಜಾಗದಲ್ಲಿರುವ ಕೆಲವು ಮರಗಳನ್ನು ಕಡಿಯಲು ಗುರುತು ಹಾಕಿದ್ದಾರೆ.
ಪರಿಸರ ಪ್ರೇಮಿಗಳು ಕಡಿಯಲು ಗುರುತು ಮಾಡಿದ್ದ ಮರಗಳಿಗೆ ಮಸಿ ಬಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮರಗಳನ್ನು ಕಡಿಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಆನ್ಲೈನ್ನಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಸಹ ನಡೆಸುತ್ತಿದ್ದಾರೆ.