ಸಿದ್ದರಾಮಯ್ಯ ಅವರಿಗೆ ನಮ್ಮೆಲ್ಲರ ಮೇಲೂ ಪ್ರೀತಿ ಇದೆ: ಜಿ.ಟಿ.ದೇವೇಗೌಡ
Recommended Video
ಮೈಸೂರು, ಮೇ 16: ಎಚ್.ಡಿ.ರೇವಣ್ಣ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು ಎಂದ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜಿ.ಟಿ.ದೇವೇಗೌಡ, ರೇವಣ್ಣ ಅವರ ಮೇಲಿನ ಪ್ರೀತಿಯಿಂದ ಸಿದ್ದರಾಮಯ್ಯ ಹಾಗೆ ಹೇಳಿದ್ದಾರೆ ಅಷ್ಟೆ ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರು ಹಾಗಾಗಿ ರೇವಣ್ಣ ಮಾತ್ರವಲ್ಲ, ನಮ್ಮೆಲ್ಲರೂ ಅವರಿಗೆ ಬಹಳ ಪ್ರೀತಿ ಇದೆ ಎಂದು ಸಿದ್ದರಾಮಯ್ಯ ಅವರ ರಾಜಕೀಯ ವೈರಿಯಾಗಿದ್ದ ಜಿ.ಟಿ.ದೇವೇಗೌಡ ಅವರು ಹೇಳಿದರು.
ರೇವಣ್ಣ ಹಾಗೂ ಸಿದ್ದರಾಮಯ್ಯ ಅವರು 1995 ರಿಂದಲೂ ಆತ್ಮೀಯ ಸ್ನೇಹಿತರು ಒಟ್ಟಿಗೆ ಕೆಲಸ ಮಾಡಿದವರು, ಹಾಗಾಗಿ ಅವರಿಬ್ಬರ ನಡುವೆ ಸ್ನೇಹ ಹೆಚ್ಚಿದೆ, ಹಾಗಾಗಿ ಎಚ್.ಡಿ.ರೇವಣ್ಣ ಅವರು ಸಿಎಂ ಸ್ಥಾನಕ್ಕೆ ಅರ್ಹರು ಎಂದು ಹೇಳಿದ್ದಾರೆಯೇ ಹೊರತು ಬೇರೇನು ಇಲ್ಲ ಎಂದು ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರಿಗೂ ಸಹ ಖರ್ಗೆ ಅವರ ಮೇಲೆ ಪ್ರೀತಿ, ಹಾಗಾಗಿಯೇ ಖರ್ಗೆ ಅವರಂತಹಾ ಅನುಭವಿ, ಅರ್ಹ, ಹಿರಿಯರು ಇದ್ದರೂ ಸಹ ನನ್ನನ್ನು ಸಿಎಂ ಮಾಡಿದ್ದಾರೆ ಎಂದು ಪ್ರೀತಿಯಿಂದಲೇ ಹೇಳಿದ್ದಾರೆಯೇ ಹೊರತು, ರಾಜಕೀಯ ಉದ್ದೇಶದಿಂದ ಹೇಳಿಲ್ಲ ಎಂದು ಜಿ.ಟಿ.ದೇವೇಗೌಡ ತಮ್ಮ ಸಿಎಂ ಅವರ ಬೆನ್ನಿಗೆ ನಿಂತಿದ್ದಾರೆ.
ನಾವಾಗಲಿ, ಕಾಂಗ್ರೆಸ್ನವರಾಗಲಿ ಬಿಜೆಪಿಯವರಂತಲ್ಲ, ಮೋದಿ ಅವರು ಇಂದಿರಾಗಾಂದಿ, ರಾಜೀವ್ ಗಾಂಧಿ ಅವರ ಬಗ್ಗೆ ಇಲ್ಲಸಲ್ಲದ್ದನ್ನು ಹೇಳುತ್ತಿದ್ದಾರೆ, ನಮ್ಮವರು ಹಾಗೆಲ್ಲಾ ಸುಳ್ಳು ಹೇಳುವುದಿಲ್ಲ ಎಂದು ಜಿ.ಟಿ.ಡಿ ಹೇಳಿದರು.