ಕಾಂಗ್ರೆಸ್ ತೊರೆಯಲು ಸಿದ್ದರಾಮಯ್ಯನವರೇ ಕಾರಣ -ವಿಶ್ವನಾಥ್
ಮೈಸೂರು, ಜುಲೈ 3: 'ನಾನು ಕಾಂಗ್ರೆಸ್ ತೊರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ' ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದ್ದಾರೆ. ಮಂಗಳವಾರ ಅವರು ಅಧಿಕೃತವಾಗಿ ಜಿಡಿಎಸ್ ಪಕ್ಷ ಸೇರಲಿದ್ದು ಅದಕ್ಕೂ ಮೊದಲು ನಡೆದ ಸಮಾಲೋಚನಾ ಸಭೆಯಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.
ಮೈಸೂರಿನ ಕೆಆರ್ ನಗರದಲ್ಲಿ ಸೋಮವಾರ ನಡೆದ ಜೆಡಿಎಸ್ ಮತ್ತು ಅಭಿಮಾನಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು "ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಮತ್ತು ಸುಧಾರಣೆ ಸಹಜ ಪ್ರಕ್ರಿಯೆಯಾಗಿದ್ದು ಅದರಂತೆ ನಾನು ಕೂಡ ಕಾಂಗ್ರೆಸ್ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ. ನನ್ನ ಬೆಂಬಲಿಗರು ಮತ್ತು ಹಿತೈಷಿಗಳು ಮುಂದೆಯೂ ಸಹಕಾರ ನೀಡಬೇಕು," ಎಂದು ಮನವಿ ಮಾಡಿದರು.
ಜುಲೈ 4ರಂದು ವಿಶ್ವನಾಥ್ ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆ
"ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ ನನಗೆ 6 ತಿಂಗಳಿನಿಂದ ನಿರಂತರವಾಗಿ ಅಪಮಾನವಾಯಿತು. ಈ ಸಂದರ್ಭದಲ್ಲಿ ಪಕ್ಷ ತೊರೆಯುವ ಸುಳಿವು ನೀಡಿದರೂ ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಯಾವ ಮುಖಂಡರು ನನ್ನನ್ನು ಕರೆದು ಮಾತನಾಡಲಿಲ್ಲ. ಹಾಗಾಗಿ ಅನಿವಾರ್ಯ ಪರಿಸ್ಥಿತಿಯಲ್ಲಿ ನಾನು ಜೆಡಿಎಸ್ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ," ಎಂದು ಅವರು ತಿಳಿಸಿದರು.
"ಸಿದ್ದರಾಮಯ್ಯನವರ ದುರ್ವರ್ತನೆ ಮತ್ತು ಕೃತಘ್ನತಾ ಮನೋಭಾವನೆಯಿಂದ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್ ಪಕ್ಷ ತೊರೆದಿದ್ದಾರೆ. ಅವರ ಜತೆಗೆ ನಾನೂ ಕಾಂಗ್ರೆಸ್ ಪಕ್ಷಕ್ಕೆ ಗುಡ್ಬೈ ಹೇಳಿದ್ದೇನೆ. ನನ್ನಂತೆ ಅಪಮಾನವಾಗಿರುವ ಹತ್ತಾರು ಮಂದಿ ಮುಖಂಡರು ಪಕ್ಷ ತೊರೆಯಲು ಸಾಲಾಗಿ ನಿಂತಿದ್ದಾರೆ. ಇದರ ಫಲವನ್ನು ಕಾಂಗ್ರೆಸ್ ಅನುಭವಿಸಲಿದೆ," ಎಂದು ಎಚ್.ವಿಶ್ವನಾಥ್ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯರನ್ನು ದುಶ್ಯಾಸನನಿಗೆ ಹೋಲಿಸಿದ ವಿಶ್ವನಾಥ್
ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ದನಾಗಿ ಪಕ್ಷ ಸೇರ್ಪಡೆ
ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜುಲೈ 4ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದು, ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ದನಾಗಿ ಸಂಘಟನೆಯಲ್ಲಿ ತೊಡಗುತ್ತೇನೆ ಎಂದು ವಿಶ್ವನಾಥ್ ಘೋಷಿಸಿದರು.
ಮುಂಬರುವ ದಿನಗಳಲ್ಲಿ ನನ್ನ ಜತೆ ಜೆಡಿಎಸ್ಗೆ ಸೇರ್ಪಡೆಯಾಗುವ ಬೆಂಬಲಿಗರು ಮತ್ತು ಹಿತೈಷಿಗಳನ್ನು ಶಾಸಕ ಸಾ.ರಾ.ಮಹೇಶ್ ರನ್ನು ಗೌರವದಿಂದ ಕಾಣಬೇಕು ಎಂದು ಕೋರಿದರು.
"ಬಿಜೆಪಿ ಮತ್ತು ಕೆಜೆಪಿಯನ್ನು ಸುತ್ತಿಕೊಂಡು ಬಂದಿದ್ದ ದೊಡ್ಡಸ್ವಾಮೇಗೌಡನಿಗಾಗಿ ನನ್ನ ಹಿರಿತನವನ್ನು ತ್ಯಾಗ ಮಾಡಿ ಆತನಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಟ್ಟೆ. ಆದರೆ ಆತ ನನ್ನ ಸಂಕಷ್ಟದ ಸಮಯದಲ್ಲಿ ನೆರವಿಗೆ ಬರಲಿಲ್ಲ. ಇಂತಹ ಕೃತಘ್ನರನ್ನು ಜನತೆ ಕ್ಷಮಿಸುವುದಿಲ್ಲ," ಎಂದರು.
ಪುರಸಭಾ ಸದಸ್ಯರ ರಾಜೀನಾಮೆ
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿರುವ ವಿಶ್ವನಾಥ್ ಬೆಂಬಲಿಸಿ ಪಟ್ಟಣದ ಪುರಸಭೆಯ 9 ಮಂದಿ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಕೆ.ಬಿ.ಸುಬ್ರಮಣ್ಯ, ನಟರಾಜು, ಕವಿತಾ ಪ್ರಭುಶಂಕರ್, ಸಲೀಮಾ ಬಿ, ಅಜ್ಮತ್ ಉಲ್ಲಾಖಾನ್, ಹರ್ಷಲತಾ ಶ್ರೀಕಾಂತ್, ಪಾರ್ವತಿ ನಾಗರಾಜು ಮತ್ತು ಫರಿದಾಬಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಲಿದ್ದಾರೆ.