ಖರ್ಗೆಗೆ ಸಿಎಂ ಹುದ್ದೆ ತಪ್ಪಿಸಿದ್ದು ಯಾರೆಂದು ಬಾಯಿಬಿಡಿ: ದೇವೇಗೌಡ್ರಿಗೆ ಸಿದ್ದರಾಮಯ್ಯ ಚಾಲೆಂಜ್!
ಮೈಸೂರು, ಡಿ 27: ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಹುದ್ದೆ ತಪ್ಪಿದ ವಿಚಾರ, ಆಗಾಗ ರಾಜ್ಯ ರಾಜಕಾರಣದಲ್ಲಿ ಮಾರ್ದೆನಿಸುತ್ತಿರುತ್ತದೆ. ಈ ವಿಚಾರವನ್ನು ಮತ್ತೆ ದೇವೇಗೌಡ್ರು ಶನಿವಾರ (ಡಿ 26) ಎತ್ತಿದ್ದರು.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, "ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಿದವರು ಕಾಂಗ್ರೆಸ್ ನವರೇ ಎಂದು ದೇವೇಗೌಡ್ರು ಹೇಳಿದ್ದಾರೆ. ಆ ವ್ಯಕ್ತಿ ನಾನಂತೂ ಅಲ್ಲ, ಅದು ಯಾರೆಂದು ಗೌಡ್ರೇ ಬಹಿರಂಗ ಪಡಿಸಲಿ"ಎಂದು ಸವಾಲು ಎಸೆದರು.
ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ: ಮೌನಮುರಿದ ದೇವೇಗೌಡರು
ಪಕ್ಷದ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಶನಿವಾರ ಮಾತನಾಡುತ್ತಿದ್ದ ದೇವೇಗೌಡ್ರು, "ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಸಿಗಬೇಕಾಗಿತ್ತು. ಅದಕ್ಕೆ ಅವರೂ ಒಪ್ಪಿಗೆಯನ್ನು ನೀಡಿದ್ದರು. ಆದರೆ, ಅವರಿಗಾಗದ ಅವರ ಪಕ್ಷದವರೇ ಸಿಎಂ ಸ್ಥಾನವನ್ನು ತಪ್ಪಿಸಿದ್ದರು"ಎಂದು ಗೌಡ್ರು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, "ನಿನ್ನೆ ದೇವೇಗೌಡ್ರು ಪತ್ರಿಕಾಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ. ಖರ್ಗೆ ಹೆಸರು ಮಂಚೂಣಿಗೆ ಬರದಂತೆ ನಾನಂತೂ ತಡೆದಿಲ್ಲ. ಅವರು ಯಾರೆಂದು ದೇವೇಗೌಡ್ರೇ ಬಹಿರಂಗ ಪಡಿಸಲಿ"ಎಂದು ಸವಾಲು ಎಸೆದರು.
"ಜೆಡಿಎಸ್ ಬೆಳೆಯಲು ನನ್ನ ಪಾಲು ಏನೂ ಇಲ್ಲ ಎಂದು ದೇವೇಗೌಡ್ರು ಹೇಳುತ್ತಾರೆ. ಆರು ವರ್ಷದವರೆಗೆ ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದೆ ಅಲ್ವಾ, ಆ ಸಮಯದಲ್ಲಿ ರಾಜ್ಯ ಪ್ರವಾಸ ಮಾಡಿರಲಿಲ್ವಾ, ನನ್ನ ಶ್ರಮಕ್ಕೆ ಬೆಲೆಯಿಲ್ಲವೇ"ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
"1989ರಲ್ಲಿ ಎಲ್ಲರೂ ಸೇರಿ ನನ್ನನ್ನು ಹೊರಗೆ ಹಾಕಿದ್ದರು, ಏಕಾಂಕಿಯಾಗಿದ್ದೆ. ಯಾರ ಹೆಸರನ್ನೂ ಹೇಳುವುದಿಲ್ಲ. ಆಮೇಲೆ ಮತ್ತೆ ಎಲ್ಲರೂ ವಾಪಸ್ ನನ್ನ ಹತ್ತಿರವೇ ಬಂದರು. ಪಕ್ಷ ಕಟ್ಟಲು ಯಾರಾದರೂ ನಂಗೆ ಹತ್ತು ರೂಪಾಯಿ ಕೊಟ್ಟಿದ್ದಾರಾ? ಈಗ ಕೆಲವರು ಬದುಕಿದ್ದಾರೆ ಅವರಿಗೆ ಹೇಳುತ್ತಿದ್ದೇನೆ" ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಗೌಡ್ರು ಕುಟುಕಿದ್ದರು.