ಮಂದಿರ ನಿರ್ಮಾಣಕ್ಕೆ ಸಿದ್ದರಾಮಯ್ಯ ಸಹ ದೇಣಿಗೆ ಕೊಟ್ಟಿರುತ್ತಾರೆ!
ಮೈಸೂರು, ಫೆಬ್ರವರಿ 22: "ರಾಮಮಂದಿರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದೇಣಿಗೆ ಕೊಟ್ಟಿರುತ್ತಾರೆ. ಆದರೆ, ಬಹಿರಂಗವಾಗಿ ಅವರು ಹೇಳಿಕೆ ನೀಡುತ್ತಿಲ್ಲ. ಸರ್ಕಾರ ಸುಗಮವಾಗಿ ಆಡಳಿತ ನಡೆಸುತ್ತಿರುವುದಕ್ಕೆ ಅವರಿಗೆ ಯಾವುದೇ ರೀತಿ ಮಾತನಾಡಲು ಆಗದ್ದರಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ" ಎಂದು ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಸೋಮವಾರ ಶ್ರೀ ಚಾಮುಂಡೇಶ್ವರಿ ದೇವಾಲಯದ ರಥಕ್ಕೆ ದೇವರನ್ನು ಕೂರಿಸುವ ಲಿಫ್ಟ್ಅನ್ನು ರೈಲ್ವೆ ಇಲಾಖೆ ದೇವಾಲಯಕ್ಕೆ ಹಸ್ತಾಂತರ ಮಾಡಿತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಸರ್ಕಾರ ಸುಗಮವಾಗಿ, ದಕ್ಷವಾಗಿ ಹೋಗುತ್ತಿದೆ. ಮಾತನಾಡಲೂ ಏನೂ ಉಳಿದಿಲ್ಲವಾದ್ದರಿಂದ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಇವರು ಬಾಯಿ ಚಪಲಕ್ಕೆ ಲೆಕ್ಕ ಕೇಳುತ್ತಿದ್ದಾರೆ" ಎಂದು ಆರೋಪಿಸಿದರು.
ಸಿದ್ದರಾಮನಹುಂಡಿಯ ರಾಮ ಮಂದಿರದ ವಿಶೇಷತೆಗಳು!
"ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಒಂದೇ ಒಂದು ಪೈಸೆ ಸಹ ರಾಮಮಂದಿರಕ್ಕೆ ಉಪಯೋಗವಾಗಲಿದೆ ಹಾಗೂ ಎಲ್ಲವಕ್ಕೂ ಲೆಕ್ಕವನ್ನು ಇಡಲಾಗಿದೆ. ದೇಣಿಗೆ ಸಂಗ್ರಹಿಸಿದ ಮನೆಯ ಸಂಖ್ಯೆ, ಸಹಿ ಪಡೆದು, ಪ್ಯಾನ್ ಸಂಖ್ಯೆ ನಮೂದಿಸಲಾಗುತ್ತಿದೆ. ಜೊತೆಗೆ ರಶೀದಿಯನ್ನು ಸಹ ಕೊಡಲಾಗುತ್ತಿದೆ" ಎಂದು ಸ್ಪಷ್ಟನೆ ನೀಡಿದರು.
ರಾಮ ಮಂದಿರ ನಿರ್ಮಾಣ; ದೇಣಿಗೆ ನೀಡುವವರಿಗೆ ಟ್ರಸ್ಟ್ ಮನವಿ
ಸಂಸದ ಪ್ರತಾಪ್ ಸಿಂಹ ಮಾತನಾಡಿ, "ಚಾಮುಂಡೇಶ್ವರಿ ದೇವಾಲಯದ ರಥಕ್ಕೆ ದೇವರನ್ನು ಕೂರಿಸಲು ಲಿಫ್ಟ್ ಅವಶ್ಯಕತೆ ತುಂಬಾ ಇದೆ. ಬಹಳ ವರ್ಷಗಳಿಂದ ಶಿಥಿಲಾವಸ್ಥೆಯಿಂದಿತ್ತು. ಹೀಗಾಗಿ ಇದರ ದುರಸ್ತಿ ಇಲ್ಲವೇ ಹೊಸ ಲಿಫ್ಟ್ ಬೇಕೆಂದು ಪ್ರಧಾನ ಅರ್ಚಕರಾದ ದೀಕ್ಷಿತ್ ಅವರು ಮನವಿ ಕೊಡುತ್ತಲೇ ಬಂದಿದ್ದಾರೆ. ಇದಕ್ಕಾಗಿ 5.50 ಲಕ್ಷ ರೂ. ಅನುದಾನ ಬೇಕಿತ್ತು. ಉಸ್ತುವಾರಿ ಸಚಿವರು ಇದರ ಬಗ್ಗೆ ಆಸಕ್ತಿ ತೋರಿ ಅನುದಾನ ಕೊಡಿಸಿದ್ದು, ಇದೀಗ ಲಿಫ್ಟ್ ಬಳಕೆಗೆ ಲಭ್ಯವಾಗಿದೆ" ಎಂದರು.